ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ
Team Udayavani, May 25, 2023, 2:21 PM IST
ದೇವನಹಳ್ಳಿ: ಮುಂಗಾರು ಹಂಗಾಮಿನ ಹೊಸ್ತಿಲಿ ನಲ್ಲಿರುವ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗಳ ಕಡೆ ತಮ್ಮ ಚಿತ್ತ ಹರಿಸಿದ್ದು ಈ ಬಾರಿ ಜಿಲ್ಲೆಯಾದ್ಯಂತ ಕೃಷಿ ಇಲಾಖೆಯು 71246 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಜಿಲ್ಲೆಯ ಕೃಷಿ ಇಲಾಖೆ ಬಿತ್ತನೆ ಕಾರ್ಯಕ್ಕೆ ಬೇಕಾದ ಸಿದ್ಧತೆಗಳ ಕಡೆ ಗಮನಹರಿಸಿದ್ದು, ಈ ಬಾರಿಯೂ ಕೂಡ ಉತ್ತಮ ಮುಂಗಾರು ಹಂಗಾಮಿನ ಮಳೆ ನಿರೀಕ್ಷಿಸಿರುವ ರೈತರು ಬಿತ್ತನೆ ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ ಸಕಾಲಕ್ಕೆ ಬಿದ್ದ ಪೂರ್ವ ಮುಂಗಾರು ಮಳೆಯಿಂದಾಗಿ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.
ಕಳೆದ ಒಂದು ವಾರದಿಂದ ಮಳೆ ಚೆನ್ನಾಗಿ ಆಗುತ್ತಿದ್ದು ಖುಷಿಯಿಂದ ಕೃಷಿ ಚಟುವಟಿಕೆ ಗಳಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಭರಣಿ ಮಳೆ ಸುರಿದರೆ ಧರಣಿ ಬೆಳೆ ಎಂಬ ನಾಣ್ಣುಡಿ ಗ್ರಾಮೀಣ ಭಾಗದ ರೈತರಲ್ಲಿ ವಾಡಿಕೆಯಲ್ಲಿದೆ. ಇತ್ತೀಚೆಗೆ ಕೃಷಿ, ಬೀಜ, ಗೊಬ್ಬರ, ಉಳುಮೆ ಮತ್ತು ಕೂಲಿ ವೆಚ್ಚಗಳು ದುಬಾರಿಯಾಗಿದ್ದರೂ ಸಹ ರೈತರು ಹರ್ಷದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಮಳೆಗೆ ಬಿತ್ತನೆಯನ್ನು ರಾಗಿ, ಮುಸು ಕಿನಜೋಳ, ಅವರೆ, ತೊಗರಿ, ನವಣೆ, ಸಾಸಿವೆ, ಅಲಸಂದಿ, ಸ್ವಾಮೆ, ಸಜ್ಜೆ, ಹಾರಿಕ, ಸೇರಿದಂತೆ ಎಲ್ಲಾ ಬೆಳೆಗಳಿಗೆ ಬಿತ್ತನೆ ಕಾರ್ಯವನ್ನು ರೈತರು ಮಾಡುತ್ತಾರೆ. 2023-24ನೇ ಸಾಲಿಗೆ ಜಿಲ್ಲೆಯಲ್ಲಿ ಭತ್ತ, ರಾಗಿ, ಮುಸಕಿನ ಜೋಳ, ಮೇವಿನ ಜೋಳ, ಪಾಪ ಕಾರ್ನ್, ತೊಗರಿ, ಹುರಳಿ, ಅಲಸಂದೆ, ಅವರೆ, ಶೇಂಗಾ, ಎಳ್ಳು, ಹರಳು, ಹುಚ್ಚೆಳ್ಳು, ಸಾಸಿವೆ ಸೇರಿದಂತೆ ಒಟ್ಟು 71,246 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ ಬೆಳೆ ಗುರಿಯನ್ನು ಹೊಂದಲಾಗಿದೆ.
ರಾಗಿ ಬೆಳೆ ಹೆಚ್ಚು: ಜಿಲ್ಲೆಯಲ್ಲಿ ನೀರಾವರಿ ಪ್ರದೇಶಕ್ಕಿಂತ ಮಳೆ ಆಶ್ರಿತ ಪ್ರದೇಶದಲ್ಲಿ ರಾಗಿಯನ್ನು ಬೆಳೆಯು ವುದು ಹೆಚ್ಚು, ನೀರಾ ವರಿ ಪ್ರದೇಶದಲ್ಲಿ 2269.53 ಟನ್ ರಾಗಿ ಉತ್ಪಾದನೆ ಗುರಿಯನ್ನು ಹೊಂದಲಾಗಿದ್ದು ಮಳೆಯಾಶ್ರಿತ ಪ್ರದೇಶದಲ್ಲಿ 100182.96ಮೆಟ್ರಿಕ್ ಟನ್ ಉತ್ಪಾದನೆ ಗುರಿಯನ್ನು ಹೊಂದಲಾಗಿದೆ. ರಾಗಿ ಸೇರಿ ಉಳಿದೆಲ್ಲ ದ್ವಿದಳ ಧಾನ್ಯಗಳು ಸೇರಿ ಒಟ್ಟಾರೆ 1,36,438.55ಮೆಟ್ರಿಕ್ ಟನ್ ಉತ್ಪಾದನೆ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ರಾಗಿ ಬೆಳೆ ಇಳುವರಿಯಲ್ಲಿ ಉತ್ತಮ ಪ್ರಗತಿಯಾಗಿತ್ತು. ಹೆಚ್ಚಿನ ಪ್ರಮಾಣದ ರೈತರು ಬೆಳೆದ ರಾಗಿಯನ್ನು ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ್ದರು. ಈ ಬಾರಿಯೂ ಉತ್ತಮ ಇಳುವರಿ ನಿರೀಕ್ಷೆ ಹೊಂದಲಾಗಿದೆ.
ಈ ಬಾರಿ ಮುಸುಕಿನ ಜೋಳವನ್ನು ಹೆಚ್ಚಳದ ನಿರೀಕ್ಷೆ ಇದೆ. ಈ ಮಳೆಯು ರೈತರಿಗೆ ವರದಾನ ವಾಗಿರು ವುದರಿಂದ ಈಗಿನಿಂದಲೇ ರೈತರು ಭೂಮಿಯನ್ನು ಹದಗೊಳಿಸಿ ಕೃಷಿ ಚಟುವಟಿಕೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಉತ್ತಮ ಮುಂಗಾರು ಮಳೆಯಾಗಿರು ವುದರಿಂದ ಮುಸುಕಿನ ಜೋಳ, ರಾಗಿ, ಆಹಾರ ಧಾನ್ಯಗಳ ಬೆಳೆಯನ್ನಿಡಲು ಉತ್ತಮ ವಾತಾವರಣವಿದೆ. ರೈತರು ಮಳೆಯಾಗುವುದರ ಆಧಾರದಲ್ಲಿ ಬಿತ್ತನೆ ಕಾರ್ಯ ನಡೆಸುತ್ತಾರೆ. ಕಳೆದ ವರ್ಷದಲ್ಲಿ 6ಸಾವಿರ ಹೆಕ್ಟೇರು ಮುಸುಕಿನ ಜೋಳ ಹಾಕಲಾಗಿತ್ತು. ಈ ಬಾರಿ ಶೇಖಡವಾರು ಹೆಚ್ಚಳ ವಾಗುವ ಸಾದ್ಯತೆ ಇದೆ. ಜೂನ್ ನಲ್ಲಿ ಪ್ರಾರಂಭವಾಗುವ ಮಳೆ ಬೇಗನೇ ಬೀಳುತ್ತಿ ರುವುದರಿಂದ ಅಲ್ಪಾವ ಬೆಳೆಯನ್ನಿಡಲು ಸಹಕಾರಿ ಯಾಗುತ್ತದೆ. ಇದೇ ರೀತಿ ಮಳೆ ಮುಂದುವರೆದರೆ ಜೋಳ ಬಿತ್ತನೆ ಶುರುವಾಗುತ್ತದೆ. ತದನಂತರ ರಾಗಿ ಬಿತ್ತನೆಯನ್ನು ರೈತರು ಪ್ರಾರಂಭಿಸುತ್ತಾರೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯಾಗಿದೆ.
ರಸಗೊಬ್ಬರ ಕೊರತೆ ಇಲ್ಲ: ಕೃಷಿ ಇಲಾಖೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ. ಎಲ್ಲಾ ರೈತ ಸಂಪರ್ಕ ಕೇಂದ್ರ ದಲ್ಲಿ ಪ್ರಸ್ತತ ವರ್ಷದಲ್ಲಿ ಯಾವುದೇ ರಸ ಗೊಬ್ಬರದ ಕೊರತೆ ಇಲ್ಲದಂತೆ ಇಲಾಖೆ ಎಚ್ಚರವಹಿಸಿದೆ. ರೈತರು ಒಂದೇ ರಸಗೊಬ್ಬರದ ಮೇಲೆ ಅವಲಂಬಿತ ರಾಗುವ ಬದಲಿಗೆ ಯಾವ ರಸಗೊಬ್ಬರ ಸಿಗುತ್ತದೆಯೋ ಅದನ್ನು ಬಳಕೆ ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ. ಒಂದು ವೇಳೆ ಡಿಎಪಿ ರಸಗೊಬ್ಬರ ಸಿಗದ ಪಕ್ಷದಲ್ಲಿ ಬದಲಿಗೆ ಕಾಂಪೋಸ್ಟ್ ಬಳಕೆ ಮಾಡಬಹುದು. ಒಂದುವೇಳೆ ರಸಗೊಬ್ಬರ ಕೊರತೆ ಇದ್ದಲ್ಲಿ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಇಲಾಖೆ ಸಜ್ಜಾಗಿದೆ.
ಈಗ ಬೇಸಾಯ ಮಾಡಿದರೆ, ಕಳೆ ಮತ್ತು ಹುಲ್ಲು ಬೀಜಗಳು ಭೂಮಿಯ ಮೇಲೆ ಬಂದು ಬಿಸಿಲಿಗೆ ಒಣಗಿ ಹೋಗುತ್ತವೆ. ಇದರಿಂದಾಗಿ ಬಿತ್ತನೆ ಬಳಿಕ ಕಳೆ ನಿರ್ವಹಣೆ ಸುಲಭವಾಗುತ್ತದೆ. ಹೀಗಾಗಿ ರೈತರು ತಮ್ಮ ಜಮೀನುಗಳಲ್ಲಿ ಬೇಸಾಯಕ್ಕಾಗಿ ಮುಂದಾಗಿರುವುದು ಕಾಣಬಹುದು. ಬಯಲು ಸೀಮೆ ಪ್ರದೇಶವಾಗಿ ರುವುದರಿಂದ ಮಳೆ ನೀರು ಅವಲಂಬಿತ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಇತರೆ ಕೃಷಿ ಬೆಳೆಗಳನ್ನಿಡಲು ಇದು ಸಕಾಲವಾಗಿರುವುದರಿಂದ ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭಿಸಬೇಕಾಗಿದ್ದ ಬಿತ್ತನೆ ಕೆಲಸಕ್ಕೆ ಮೇ ತಿಂಗಳಿನಲ್ಲಿಯೇ ರೈತರು ಭೂಮಿಯನ್ನು ಹದಗೊಳಿಸಲು ಮುಂದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳಲ್ಲಿ ಬಿರುಸಿನ ಕೃಷಿ ಚಟುವಟಿಕೆ ಗರಿಗೆದರಿದೆ.
ತಾಲೂಕುವಾರು ಬಿತ್ತನೆ ಗುರಿ: ದೇವನಹಳ್ಳಿ 15305ಹೆಕ್ಟೇರ್, ಹೊಸಕೋಟೆ 11,434 ಹೆಕ್ಟೇರ್, ದೊಡ್ಡಬಳ್ಳಾಪುರ 25,755ಹೆಕ್ಟೇರ್, ನೆಲಮಂಗಲ 18,765ಹೆಕ್ಟೇರ್ ಜಿಲ್ಲೆಯಲ್ಲಿ ನೀರಾವರಿ ಪ್ರದೇಶಕ್ಕಿಂತ ಮಳೆಯಾಶ್ರಿತ ಪ್ರದೇಶದ ಭೂಮಿಯೇ ಹೆಚ್ಚಾಗಿದೆ. ಸಣ್ಣ ಅತಿಸಣ್ಣ ಮತ್ತು ಮದ್ಯಮ ವರ್ಗದ ರೈತರು ತಮ್ಮ ಭೂಮಿಗಳಲ್ಲಿ ವರ್ಷಕ್ಕೊಮ್ಮೆ ಬೆಳೆಯನ್ನು ಬೆಳೆಯಲು ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡುತ್ತಾರೆ. ಮಳೆಗಾಲದಲ್ಲಿ ಒಳ್ಳೆ ವಿವಿಧ ಮಳೆಯಾದರೆ ಸಣ್ಣ, ಅತಿಸಣ್ಣ ರೈತರು ರಾಗಿ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆದುಕೊಳ್ಳುತ್ತಾರೆ. ರಾಗಿ ಬೆಳೆಯನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಿತ್ತನೆ ಮಾಡುತ್ತಿದ್ದು ಈ ಬೆಳೆಗೆ ಮಳೆಯೇ ಮೂಲಾಧಾರ. ಪೂರ್ವ ಮುಂಗಾರಿನ ಉತ್ತಮ ಮುನ್ಸೂಚನೆ ಬಿತ್ತನೆಗೆ ರೈತರನ್ನು ಅಣಿಗೊಳಿಸುತ್ತಿದೆ. ಜಿಲ್ಲೆಯಲ್ಲಿ ಜೂನ್ 15ರ ನಂತರ ರಾಗಿ ಬಿತ್ತನೆ ಕಾರ್ಯಗಳು ಶುರುವಾಗಲಿದ್ದು ಅಷ್ಟೊತ್ತಿಗಾಗಲೇ ಭೂಮಿಯನ್ನು ಉಳುಮೆ ಮಾಡಿ ಹದ ಮಾಡಿಟ್ಟುಕೊಳ್ಳುವ ಕಾರ್ಯಗಳು ಈ ಮಳೆಯಿಂದಲೇ ಶುರುವಾಗಿದೆ.
ರೈತರು ಇಲಾಖೆಯಲ್ಲಿ ದೊರೆಯುವ ರೈತ ಶಕ್ತಿ ಯೋಜನೆ ಮತ್ತು ರಸ ಗೊಬ್ಬರವನ್ನು ಪಡೆದು ಕೊಳ್ಳಬಹುದು. ಹೆಚ್ಚಿನ ಮಾಹಿತಿ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹದು. ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಪೂರ್ವ ಚಟುವಟಿಕೆ ಪ್ರಾರಂಭಿಸಲು ಸೂಕ್ತ ವಾತಾವರಣವಿದೆ. ಮಳೆ ನಿಲ್ಲುತ್ತಿದ್ದಂತೆ ರೈತರು ಭೂಮಿಯನ್ನು ಹದಗೊಳಿಸಲು ಮುಂದಾಗುತ್ತಿರುವುದು ಕಳೆ ನಿರ್ವಹಣೆಗೆ ಸುಲಭವಾಗುತ್ತದೆ. –ಲಲಿತಾ ರೆಡ್ಡಿ, ಜಂಟಿನಿರ್ದೇಶಕಿ, ಕೃಷಿ ಇಲಾಖೆ
ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಭೂಮಿ ಹದ ಮಾಡಿಕೊಂಡು ಬಿತ್ತನೆ ಕಾರ್ಯ ಮಾಡಲು ಸಿದ್ದಮಾಡಿಕೊಳ್ಳಲಾಗುತ್ತಿದೆ. ರೈತರು ಮಳೆ ಸಮಯದಲ್ಲಿ ಬಿತ್ತನೆ ಕಾರ್ಯಕ್ಕೆ ಅನು ಕೂಲ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಗೊಬ್ಬರ, ಬೀಜ, ಇತರೆ ಬೆಲೆ ಏರಿಕೆಯಾಗಿದ್ದರೂ ಸಹ ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. -ರಮೇಶ್, ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ