ಈ ವರ್ಷವೂ ಕೆಲವು ಸರಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ
Team Udayavani, May 28, 2023, 1:24 PM IST
ಉಡುಪಿ: ವಾಡಿಕೆಯಂತೆ ಈ ಬಾರಿಯೂ ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆಯಾಗಿದೆ. ಕೆಲವು ಶಾಲೆಗಳು ಈ ವರ್ಷ ದಾಖಲಾತಿ ಹೆಚ್ಚಿಸಿಕೊಳ್ಳಲು ಹಲವು ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ.
ಉಡುಪಿಯ ಒಳಕಾಡು ಸರಕಾರಿ ಶಾಲೆಗೆ ಒಂದನೇ ತರಗತಿಗೆ 114 ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಪಡೆದಿದ್ದಾರೆ. ಬ್ರಹ್ಮಾವರ ಸರಕಾರಿ ಪಿಯು ಕಾಲೇಜಿ (ಪ್ರೌಢಶಾಲಾ ವಿಭಾಗ)ನಲ್ಲಿ 827 ವಿದ್ಯಾರ್ಥಿಗಳಿದ್ದಾರೆ. ತೆಕ್ಕಟ್ಟೆ ಸರಕಾರಿ ಶಾಲೆಗೆ 87 ವಿದ್ಯಾರ್ಥಿಗಳು ಈಗಾಗಲೇ ಒಂದನೇ ತರಗತಿ ದಾಖಲಾತಿ ಪಡೆದಿದ್ದಾರೆ. ಬೈಂದೂರು ಸರಕಾರಿ ಪ್ರೌಢಶಾಲೆಯಲ್ಲಿ 697, ಸಿದ್ದಾಪುರ ಸರಕಾರಿ ಪ್ರೌಢಶಾಲೆಯಲ್ಲಿ 648, ಬ್ರಹ್ಮಾವರ ಮಾದರಿ ಸರಕಾರಿ ಶಾಲೆಗೆ 83 ವಿದ್ಯಾರ್ಥಿಗಳು ಒಂದನೇ ತರಗತಿ ಪ್ರವೇಶ ಪಡೆದಿದ್ದಾರೆ. ಪೆರ್ವಾಜೆ ಸರಕಾರಿ ಮಾದರಿ ಸರಕಾರಿ ಶಾಲೆಯ 1ನೇ ತರಗತಿಗೆ 99 ವಿದ್ಯಾರ್ಥಿಗಳು, ಹಿರಿಯಡ್ಕ ಸರಕಾರಿ ಶಾಲೆಗೆ 103, ಮಣೂರು ಸರಕಾರಿ ಶಾಲೆಗೆ 77, ಹೆಬ್ರಿ ಸರಕಾರಿ ಶಾಲೆಗೆ 76, ಬಿದ್ಕಲ್ಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಗೆ 62 ವಿದ್ಯಾರ್ಥಿಗಳು ಹಾಗೂ ಮುನಿಯಾಲು ಕರ್ನಾಟಕ ಪಬ್ಲಿಕ್ ಶಾಲೆಗೆ 55 ವಿದ್ಯಾರ್ಥಿಗಳು ಒಂದನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಬಹುತೇಕ ಶಾಲೆ ಗಳಲ್ಲಿ ಒಂದನೇ ತರಗತಿಗೆ 30ರಿಂದ 50 ವಿದ್ಯಾರ್ಥಿಗಳು ದಾಖಲಾತಿ ಪಡೆದಿ ದ್ದಾರೆ. ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ವಿದ್ಯಾರ್ಥಿ ಗಳ ದಾಖಲಾತಿ ಚೆನ್ನಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅರ್ಜಿ ಹಾಕಿದರೂ ಸಿಗುತ್ತಿಲ್ಲ
ಜಿಲ್ಲೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಕೂಡ ಇದೆ. ಇಲ್ಲಿಗೆ ಅರ್ಜಿ ಹಾಕಿದರೂ ಸೀಟು ಸಿಗುತ್ತಿಲ್ಲ. ಇವರು 30ರಿಂದ 50 ಸೀಟಿಗೆ 150ರಿಂದ 200ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಹೀಗಾಗಿ ಲಾಟರಿ ಮೂಲಕ ದಾಖಲಾತಿ ಮಾಡಿಕೊಳ್ಳ ಲಾಗುತ್ತಿದೆ. ಒಳಕಾಡು, ತೆಕ್ಕಟ್ಟೆ, ಬ್ರಹ್ಮಾವರ ಮೊದಲಾದ ಕಡೆಗಳಲ್ಲಿ ಇರುವ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಗೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
ಸರಕಾರಿ ಶಾಲೆ ಯಲ್ಲಿ ಎಷ್ಟೇ ವಿದ್ಯಾರ್ಥಿ ಗಳು ಬಂದರೂ ದಾಖಲಾತಿ ಮಾಡಿ ಕೊಳ್ಳಬೇಕು. ಯಾರಿಗೂ ಕೂಡ ದಾಖಲಾತಿ ನಿರಾಕರಿ ಸುವಂತಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾಡಳಿತ ಮಂಡಳಿಗೆ ನೀಡಿದ್ದಾರೆ. ಆದರೆ, ಬಹುಪಾಲು ಶಿಕ್ಷಕರು ಆಂಗ್ಲ ಮಾಧ್ಯಮ ಇದೆಯೇ ಎಂಬುದನ್ನು ಕೇಳುತ್ತಿದ್ದಾರೆ. ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಎಸ್ಡಿಎಂಸಿ ಸಹಕಾರದೊಂದಿಗೆ ಕೆಲವು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಆದರೆ, ಹೆಚ್ಚುವರಿ ಅತಿಥಿ ಶಿಕ್ಷಕರ ವೇತನ ಸಹಿತ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಆಂಗ್ಲ ಮಾಧ್ಯಮಕ್ಕೆ ಸರಕಾರದಿಂದ ಪೂರ್ಣ ಒಪ್ಪಿಗೆ ಸಿಕ್ಕರೆ ಶಾಲೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಮುಖ್ಯ ಶಿಕ್ಷಕರ ಅಭಿಪ್ರಾಯವಾಗಿದೆ.
ವಿವಿಧ ಪ್ರಯತ್ನ
ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಿಸಲು ಶಿಕ್ಷಕರು, ಮುಖ್ಯಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಜತೆಯಾಗಿ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಆನ್ಲೈನ್ ಮೂಲಕವೂ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಶಾಲಾ ವ್ಯಾಪ್ತಿಯ ಮನೆಗಳಿಗೆ ವಾಟ್ಸ್ಆ್ಯಪ್ ಸಂದೇಶ, ಭಿತ್ತಿ ಪತ್ರಗಳನ್ನು ನೀಡುವ ಮೂಲಕ ಸರಕಾರಿ ಶಾಲೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಪ್ರಚಾರ ನಡೆಸಿ, ಮಕ್ಕಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ.
ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಲ್ಲಿ ನಿರೀಕ್ಷೆಗೂ ಮೀರಿದ ದಾಖಲಾತಿಯಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲ
ಶಾಲೆಗಳಲ್ಲೂ ದಾಖಲಾತಿ ಪ್ರಕ್ರಿಯೆ ಚೆನ್ನಾಗಿದೆ. ಶಾಲಾರಂಭದ ಅನಂತರವೂ ದಾಖಲಾತಿ ನಡೆಯಲಿದೆ.
-ಗಣಪತಿ,
ಡಿಡಿಪಿಐ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ