Huliyar: ಕುಸಿಯುವ ಕಟ್ಟಡದಲ್ಲೇ ಮಕ್ಕಳ ಆಟ, ಪಾಠ
Team Udayavani, Dec 16, 2023, 3:05 PM IST
ಹುಳಿಯಾರು: ಯಾವ ಕ್ಷಣದಲ್ಲಿ ಬೇಕಾದರೂ ಕುಸಿದು ಬೀಳುವ ಕಟ್ಟಡದಲ್ಲಿ ಕಂದಮ್ಮಗಳ ಆಟ, ಪಾಠ, ಊಟ ನಡೆಯುತ್ತಿದೆ. ಸಂಪೂರ್ಣ ಶಿಥಿಲಾವಸ್ಥೆಯ ಕಟ್ಟಡ ಎಂಬ ಅರಿವಿದ್ದರೂ ಅದರಲ್ಲೇ ಅಂಗನವಾಡಿ ಕೇಂದ್ರ ನಡೆಸುವ ಮೂಲಕ ಮುಗ್ಧ ಮಕ್ಕಳ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ.
ಹೌದು, ಇದು ಹುಳಿಯಾರು ಪಟ್ಟಣದ ಎ ಕೇಂದ್ರದ ಅಂಗನವಾಡಿ ಕಟ್ಟಡದ ದುಸ್ಥಿತಿ. 1959ರಲ್ಲಿ ಮೈಸೂರು ಸಂಸ್ಥಾನದ ನ್ಯಾಯಂಗ, ಕಾರ್ಮಿಕ ಮತ್ತು ಸ್ಥಳೀಯ ಸಂಸ್ಥೆಗಳ ಸಚಿವರಾದ ಸುಬ್ರಹ್ಮಣ್ಯ ಅವರು ಉದ್ಘಾಟಿಸಿದ ಶಿಶು ವಿಹಾರದ ಕಟ್ಟಡದಲ್ಲಿ 1989ರಿಂದ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಆದರೆ, ಈಗ ಈ ಕಟ್ಟಡ ಸಂಪೂರ್ಣ ಹಾಳಾಗಿದ್ದು, ದುರಸ್ಥಿ ಮಾಡಿಸುವುದಕ್ಕಿಂದ ತೆರವುಗೊಳಿಸುವುದೇ ಲೇಸು ಎನ್ನುವಂತಿದೆ.
ಕಟ್ಟಡ ಸಂಪೂರ್ಣ ಶಿಥಿಲ: ಕೇಂದ್ರದ ಸುತ್ತ ಗೋಡೆಗಳು ಬಿರುಕು ಬಿಟ್ಟಿವೆ. ಹೆಂಚುಗಳು ಮುರಿದಿವೆ. ತೀರುಗಳು ಗೆದ್ದಲು ಹಿಡಿದಿವೆ. ಮಳೆ ಬಂದರೆ ಕಟ್ಟಡದ ತುಂಬೆಲ್ಲಾ ನೀರು ತುಂಬುತ್ತದೆ. ಗಾಳಿ ಬಂದರೆ ತುಂಡಾಗಿರುವ ಹೆಂಚುಗಳು ತಲೆ ಮೇಲೆ ಬೀಳುತ್ತವೆ. ಭಾರಿ ಮಳೆಗಾಳಿ ಬಂದರೆ ಗೋಡೆಗಳೇ ಕುಸಿಯುತ್ತವೆ. ಹೀಗೆ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲವಾಗಿದೆ. ಆದರೂ, ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದರ ಡಿಯೇ ಪುಟಾಣಿಗಳು ಅಕ್ಷರಾಭ್ಯಾಸ ಮಾಡು ವಂತಾಗಿದೆ. ಊಟದ ನಂತರ ಮಕ್ಕಳಿಗೆ ಹೊರಗಡೆ ಚಾಪೆ ಹಾಕಿ, ಮಲಗಿಸುವ ಪರಿಸ್ಥಿತಿ ಕೇಂದ್ರದಲ್ಲಿದೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.
ಎಲ್ಲರನ್ನು ಕಾಡುತ್ತಿದೆ ಅಭದ್ರತೆ: ದಾಸ್ತಾನಿರುವ ಆಹಾರ ಪದಾರ್ಥಗಳ ಚೀಲದ ಮೇಲೂ ಮಳೆ ನೀರು ಸೋರುತ್ತಿದ್ದು, ಅದನ್ನು ಸುರಕ್ಷಿತವಾಗಿಡುವುದೇ ಕಷ್ಟವಾಗಿದೆ. ಅಡುಗೆ ಮಾಡುವಾಗ ಗಾಳಿ ಬಂದರಂತೂ ಹೊಡೆದಿರುವ ಹೆಂಚಿನ ಸಂದಿಯಿಂದ ಉದುರುವ ಮರದ ಎಲೆಗಳನ್ನು ಪಾತ್ರೆಯಲ್ಲಿ ಬೀಳದಂತೆ ಕಾಪಾಡುವುದು ಸವಾಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಆಟಪಾಠ ಕಲಿಕೆಯ ಪುಟ್ಟಮಕ್ಕಳ ಜೊತೆ ಕಾರ್ಯಕರ್ತೆ, ಅಡುಗೆಯವರಿಗೆ ಅಭದ್ರತೆ ಕಾಡುತ್ತಿದೆ. ಇದು ಅಧಿಕಾರಿಗಳು, ಜನಪ್ರತಿನಿಧಿಗಳ ಕಣ್ಣಿಗೆ ಬಿದ್ದರೂ, ಇದರ ನಿರ್ವಹಣೆಯತ್ತ ಆಸಕ್ತಿ ವಹಿಸುತ್ತಿಲ್ಲ ಎಂಬುದು ಸ್ಥಳೀಯರು ಆರೋಪವಾಗಿದೆ.
ಕಟ್ಟಡ ದುರಸ್ತಿಗೆ ನಿರ್ಲಕ್ಷ್ಯ: ಅಂಗನವಾಡಿ ನಡೆಯುತ್ತಿರುವ ಕಟ್ಟಡ ಗ್ರಾಪಂಗೆ ಸೇರಿದ್ದಾದ್ದರಿಂದ ಮಕ್ಕಳ ಕಲ್ಯಾಣ ಇಲಾಖೆಯಿಂದ ದುರಸ್ತಿಗೆ ಹಣ ಹಾಕಲು ಬರುವುದಿಲ್ಲವೆಂಬುದು ಶಿಶು ಅಭಿವೃದ್ಧಿ ಅಧಿಕಾರಿಗಳದ್ದಾಗಿದೆ. ಖಾಸಗಿಯವರ ಕಟ್ಟಡದಲ್ಲಿ ಕೇಂದ್ರ ನಡೆಸಿದರೆ ಬಾಡಿಗೆ ಕೊಡಬೇಕಾಗುತ್ತದೆ. ಆದರೆ, ಬಾಡಿಗೆ ಇಲ್ಲದೆ ಉಚಿತವಾಗಿ ಕೇಂದ್ರ ನಡೆಸಲು ಕಟ್ಟಡ ಕೊಟ್ಟಿರುವುದರಿಂದ ಇಲಾಖೆಯವರೇ ದುರಸ್ತಿ ಮಾಡಿಸಿಕೊಳ್ಳಲಿ ಎಂಬುದು ಪಂಚಾಯ್ತಿ ಅಧಿಕಾರಿಗಳದ್ದಾಗಿದೆ.
ಮನವಿ ಮಾಡಿದರೂ ಪ್ರಯೋಜನವಿಲ್ಲ: ಗಂಡ ಹೆಂಡತಿ ಜಗಳ ಕೂಸು ಬಡವಾಯ್ತು ಎನ್ನುವಂತೆ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪಂಚಾಯ್ತಿ ಜಗಳದಿಂದ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲವಾಗಿದೆ. ಇಂದು-ನಾಳೆ ಬೀಳುವಂತಹ ಸ್ಥಿತಿಯಲ್ಲಿದ್ದು, ಮಕ್ಕಳು ಭಯದಲ್ಲೇ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಅಂಗನವಾಡಿಯು ಸಂಪೂರ್ಣ ಹಳೆಯದಾಗಿದ್ದು, ಹೊಸ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿ, ಅಲಿಯವರೆವಿಗೂ ಬಾಡಿಗೆ ಪಡೆದು ಕೇಂದ್ರ ನಡೆಸಿ ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪೋಷಕರು ಹೇಳುತ್ತಾರೆ.
ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಕ್ಷಣ ಕಟ್ಟಡ ಬದಲಾಯಿಸಿ, ಪುಟ್ಟಾಣಿಗಳನ್ನು ಪ್ರಾಣಭಯದಿಂದ ಪಾರು ಮಾಡಬೇಕಿದೆ. ಕಟ್ಟಡವು ಶಿಥಿಲಾಗಿದ್ದು, ಮಕ್ಕಳ ಕಲ್ಯಾಣ ಇಲಾಖೆಯ ಹೆಸರಿನಲ್ಲಿ ಕಟ್ಟಡ ಇಲ್ಲವಾಗಿರುವುದರಿಂದ ದುರಸ್ತಿಗೆ ಹಣ ಹಾಕಲು ಅವಕಾಶವಿಲ್ಲ. ಹೀಗಾಗಿ, ಮಕ್ಕಳ ಪಾಠಕ್ಕೆ ತೊಂದರೆಯಾಗದ ರೀತಿ ಬೇರೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುವಂತೆ ಅಲ್ಲಿನ ಶಿಕ್ಷಕಿಯರಿಗೆ ಸೂಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ನಾನೇ ಖುದ್ದು ಮುತುವರ್ಜಿ ವಹಿಸಿ ಕಟ್ಟಡ ಬದಲಾಯಿಸಲು ಕ್ರಮ ಕೈಗೊಳ್ಳುತ್ತೇನೆ. – ಜಿ.ಹೊನ್ನಪ್ಪ, ಸಿಡಿಪಿಒ, ಚಿ.ನಾ.ಹಳ್ಳಿ
ಅಂಗನವಾಡಿ ಕೇಂದ್ರದ ಸಿಬ್ಬಂದಿ ಶಿಕ್ಷಣ, ಆಹಾರ ಜತೆಗೆ ಮಕ್ಕಳನ್ನು ಉತ್ತಮ ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿನ ಕಟ್ಟಡ ಮಕ್ಕಳಿಗೆ ಸುರಕ್ಷಿತವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಕುಸಿದು ಬೀಳುತ್ತದೆ ಗೊತ್ತಾಗುತ್ತಿಲ್ಲ. ಜೀವ ಕೈಯಲ್ಲಿ ಹಿಡಿದು ಭಯದ ವಾತಾವರಣದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಕೇಂದ್ರ ಬದಲಾಯಿಸಿ ಎಂದು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ●ಸೈಯದ್ ಖಾಜಾ, ಪೋಷಕರು, ಹುಳಿಯಾರು
– ಎಚ್.ಬಿ.ಕಿರಣ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ
Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು
Pavagada: ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ; ಸ್ಥಳದಲ್ಲಿಯೇ ಹಸು ಸಜೀವ ದಹನ