ಸುರತ್ಕಲ್ PHC ಮೇಲ್ದರ್ಜೆ ಅವಕಾಶ ಇಲ್ಲ
Team Udayavani, Feb 15, 2024, 10:30 PM IST
ಬೆಂಗಳೂರು: ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಕುರಿತು ಪ್ರಶ್ನಿಸಿದ ಶಾಸಕ ಡಾ| ಭರತ್ ಶೆಟ್ಟಿ ಅವರು, ನಮ್ಮಲ್ಲಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಕಡಿಮೆ. ಆದರೆ, ಅಕ್ಕಪಕ್ಕದ ಪ್ರದೇಶಗಳಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು. ಅದೇ ರೀತಿ ಜಿಲ್ಲೆಯಿಂದ ಜಿಲ್ಲೆಗೆ ಆ್ಯಂಬುಲೆನ್ಸ್ ಓಡಾಡಲು ಅನುಮತಿ ಕೊಡಬೇಕು. ಇತ್ತೀಚೆಗೆ ಉಡುಪಿಯಿಂದ ಶವ ಸಾಗಿಸುವಾಗ ದಾರಿಮಧ್ಯದಲ್ಲೇ ಇಳಿಸಿದ ಪ್ರಸಂಗ ನಡೆದಿದೆ. ಯಾವುದೇ ಜಿಲ್ಲೆಗೂ ಆ್ಯಂಬುಲೆನ್ಸ್ ಸಂಚರಿಸುವಂತಾಗಬೇಕು ಎಂದು ಆಗ್ರಹಿಸಿದರು.
ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಮಾರ್ಗಸೂಚಿ ಅನ್ವಯ ನಗರ ಪ್ರದೇಶದಲ್ಲಿ 2.50 ಲಕ್ಷ ಜನಸಂಖ್ಯೆಗೆ ಒಂದು ನಗರ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಆದರೆ ಸುರತ್ಕಲ್ ಪ್ರದೇಶದ ಜನಸಂಖ್ಯೆ 63,729 ಆಗಿದ್ದು, ಪ್ರಾಥಮಿಕ ಆರೋಗ್ಯವನ್ನು ಮೇಲ್ದರ್ಜೆಗೇರಿಸಲು ಅವಕಾಶ ಇಲ್ಲ. ಪ್ರಸ್ತಾವನೆಯನ್ನು ಮರುಪರಿಶೀಲಿಸುವುದಾಗಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಆ್ಯಂಬುಲೆನ್ಸ್ ಇವೆ. ಟೆಂಡರ್ ಕರೆದಾಗ ಹೆಚ್ಚುವರಿ ಆ್ಯಂಬುಲೆನ್ಸ್ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಆ್ಯಂಬುಲೆನ್ಸ್ಗಳು ದುರ್ಬಳಕೆ ಆಗಬಾರದೆಂದು ಅಂತರ್ಜಿಲ್ಲಾ ಓಡಾಟ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಯಮ ಪರಿಶೀಲಿಸಲಾಗುವುದು ಎಂದರು.