Ranji: ಸಾಲು ಸಾಲು ನಿವೃತ್ತಿಗಳು ಪ್ರಕಟ
ಐಪಿಎಲ್ ತಂಡಕ್ಕೆ ಆಯ್ಕೆಯಾಗಿಲ್ಲ, ಟೀಮ್ ಇಂಡಿಯಾಕ್ಕೆ ಮರಳುವ ಯಾವುದೇ ಸಾಧ್ಯತೆ ಇಲ್ಲ
Team Udayavani, Feb 20, 2024, 6:24 AM IST
ಹೊಸದಿಲ್ಲಿ: ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಸಾಲು ಸಾಲು ನಿವೃತ್ತಿಗಳು ಪ್ರಕಟಗೊಂಡಿವೆ. 5 ಮಂದಿ ಶ್ರೇಷ್ಠ ಆಟಗಾರರು ತಮ್ಮ ಕ್ರಿಕೆಟ್ ಬದುಕಿಗೆ ತೆರೆ ಎಳೆದಿದ್ದಾರೆ. ಹೀಗಾಗಿ 2023-24ರ ರಣಜಿ ಎನ್ನುವುದು “ನಿವೃತ್ತರ ಸೀಸನ್’ ಆಗಿ ಮಾರ್ಪಟ್ಟಿದೆ.
ಬಂಗಾಲದ ಮನೋಜ್ ತಿವಾರಿ, ಜಾರ್ಖಂಡ್ನ ಬಿಗ್ ಹಿಟ್ಟಿಂಗ್ ಬ್ಯಾಟರ್ ಸೌರಭ್ ತಿವಾರಿ, ಎಕ್ಸ್ಪ್ರೆಸ್ ಪೇಸರ್ ವರುಣ್ ಆರೋನ್, ಮುಂಬಯಿಯ ಪೇಸರ್ ಧವಳ್ ಕುಲಕರ್ಣಿ ಮತ್ತು ವಿದರ್ಭದ ರಣಜಿ ಟ್ರೋಫಿ ವಿಜೇತ ತಂಡದ ನಾಯಕ ಫಯಾಜ್ ಫಜಲ್ ದೇಶಿ ಕ್ರಿಕೆಟ್ನಿಂದ ದೂರ ಸರಿದಿದ್ದಾರೆ. ಇವರು ಯಾವುದೇ ಐಪಿಎಲ್ ತಂಡಕ್ಕೆ ಆಯ್ಕೆಯಾಗದಿರುವುದರಿಂದ ಹಾಗೂ ಟೀಮ್ ಇಂಡಿಯಾಕ್ಕೆ ಮರಳುವ ಯಾವುದೇ ಸಾಧ್ಯತೆ ಇಲ್ಲವಾದ್ದರಿಂದ ವಿದಾಯದ ಮೊರೆಹೋದರು. ಆದರೆ ಪ್ರಸಕ್ತ ರಣಜಿಯಲ್ಲಿ ಇವರೆಲ್ಲರ ಸಾಧನೆ ಗಮನಾರ್ಹ ಮಟ್ಟದಲ್ಲೇ ಇತ್ತು.