ಪೊಲೀಸ್ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ: ಪರಂ
Team Udayavani, Jan 2, 2017, 3:45 AM IST
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆಯು ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕವಾದ ಸಾಮಾನ್ಯ ಪ್ರಕ್ರಿಯೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಭಾನುವಾರ ಹೊಸ ವರ್ಷಕ್ಕೆ ನಾಡಿನ ಜನತೆಗೆ ಶುಭ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಡಿಸೆಂಬರ್ ಅಂತ್ಯಕ್ಕೆ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗುತ್ತದೆ. ಅದೇ ರೀತಿ ಪ್ರಸಕ್ತ ವರ್ಷ ವರ್ಗಾವಣೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಎಸಿಬಿ ಮುಖ್ಯಸ್ಥ ಕೆ.ವಿ.ಗಗನ್ದೀಪ್ ಅವರ ವರ್ಗಾವಣೆ ಸಹ ವಿಶೇಷವಾಗಿ ನಡೆದಿಲ್ಲ. ಅವರಿಂದ ತೆರವಾಗಿರುವ ಸ್ಥಾನಕ್ಕೆ ಸಮರ್ಥ ಅಧಿಕಾರಿಯನ್ನೇ ನಿಯೋಜಿಸಿದ್ದೇವೆ. ಹೀಗಾಗಿ ಯಾರಧ್ದೋ ರಕ್ಷಣೆಗೆ ಎಸಿಬಿ ಮುಖ್ಯಸ್ಥರ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳಿಗೆ ಅರ್ಥವಿಲ್ಲ ಎಂದು ಸಚಿವರು ಹೇಳಿದರು.