ವಿಜಯ್ ಹಜಾರೆ ಟ್ರೋಫಿ: ಇಂದು ಕರ್ನಾಟಕ-ಜಾರ್ಖಂಡ್ ಮುಖಾಮುಖೀ
Team Udayavani, Feb 25, 2017, 9:40 AM IST
ಕೋಲ್ಕತ್ತಾ: ದೇಶೀಯ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ವಿಜಯ್ ಹಜಾರೆ ಟ್ರೋಫಿ ಶನಿವಾರದಿಂದ ಆರಂಭವಾಗಲಿದೆ. ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನೇತೃತ್ವದ ಜಾರ್ಖಂಡ್ ತಂಡದ ಸವಾಲನ್ನು ಎದುರಿಸಲು ಸಜ್ಜಾಗಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಧೋನಿ ಆಕರ್ಷಣೆಯಾಗಿದ್ದಾರೆ. ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 1ನೇ ಟೆಸ್ಟ್ ಪುಣೆಯಲ್ಲಿ ನಡೆಯುತ್ತಿದೆ. ಆದರೆ ಧೋನಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುವರಿದ್ದರು. ಆದರೆ ಏಪ್ರಿಲ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಧೋನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಧೋನಿ ಜಾರ್ಖಂಡ್ ತಂಡಕ್ಕೆ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಪ್ರಸಕ್ತ ರಣಜಿ ಋತುವಿನಲ್ಲಿ ಜಾರ್ಖಂಡ್ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಕರ್ನಾಟಕಕ್ಕೆ ಕಠಿಣ ಸವಾಲು ಎದುರಾದಂತಾಗಿದೆ. ಕರ್ನಾಟಕದ ಪರ ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಮಾಯಂಕ್ ಅಗರ್ವಾಲ್, ಆರ್.ಸಮರ್ಥ್ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಬಿನ್ನಿ, ಎಸ್.ಅರವಿಂದ್ ಬಲವಿದೆ.
ಧೋನಿ ಈಗಾಗಲೇ ಭಾರತ ತಂಡದ ಎಲ್ಲಾ ಮಾದರಿಯ ಕ್ರಿಕೆಟ್ನ ನಾಯಕಸ್ಥಾನದಿಂದ ಹಿಂದೆ ಸರಿದಿದ್ದಾರೆ. ಐಪಿಎಲ್ ಫ್ರಾಂಚೈಸಿ ರೈಸಿಂಗ್ ಪುಣೆ ತಂಡದ ನಾಯಕ ಸ್ಥಾನದಿಂದಲೂ ಹೊರಬಿದ್ದಿದ್ದಾರೆ. ಹೀಗಾಗಿ ಧೋನಿ ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷವಾಗಿದೆ.
ಕರ್ನಾಟಕ ತಂಡ:
ಮನೀಶ್ ಪಾಂಡೆ (ನಾಯಕ), ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಮಾಯಂಕ್ ಅಗರ್ವಾಲ್, ಆರ್.ಸಮರ್ಥ್, ಸ್ಟುವರ್ಟ್ ಬಿನ್ನಿ, ಕೆ.ಗೌತಮ್, ಪವನ್ ದೇಶಪಾಂಡೆ, ಅನಿರುದ್ಧ ಜೋಶಿ, ಎಸ್.ಅರವಿಂದ್ (ಉಪ ನಾಯಕ), ಶ್ರೇಯಸ್ ಗೋಪಾಲ್, ಜೆ.ಸುಚಿತ್, ಟಿ.ಪ್ರದೀಪ್, ಪಿ.ಕೃಷ್ಣನ್, ರೋನಿತ್ ಮೋರೆ, ರೋಹನ್ ಕದಮ್.