ಆಬ್ಬಾ…ರಂಗನಾಥನ ಆಸ್ತಿ, ಪಾಸ್ತಿ ಲೆಕ್ಕ ಹಾಕಿದಷ್ಟು ಮುಗಿಯುತ್ತಿಲ್ಲ!
Team Udayavani, Mar 3, 2017, 3:26 PM IST
ಮೈಸೂರು: ಲೋಕೋಪಯೋಗಿ ಅಧೀಕ್ಷಕ ಅಭಿಯಂತರ ರಂಗನಾಥ ನಾಯಕ್ ಮನೆ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಅಧಿಕಾರಿ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ, ಪಾಸ್ತಿ ಪತ್ತೆಯಾಗಿರುವುದನ್ನು ಕಂಡು ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರಂಗನಾಥ ಮನೆಯಲ್ಲಿ ಚಿನ್ನದ ಉಂಗುರ, ನೆಕ್ಲೆಸ್, ಒಡವೆಗಳು, ಡೈಮಂಡ್ ಆಭರಣ, ವಜ್ರ, ಬೆಳ್ಳಿ ಪಾತ್ರೆಗಳು ಪತ್ತೆಯಾಗಿವೆ ಎಂದು ಹೇಳಿವೆ. ಅಂದಾಜು 20 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ವರದಿ ಹೇಳಿದೆ.
2.30ಕೆಜಿ ಚಿನ್ನ, 8 ಕೆಜಿ ಬೆಳ್ಳಿಯ ವಸ್ತುಗಳು, 14ಎಕರೆ ಜಮೀನು, ಮಾನ್ಯತಾ ಟೆಕ್ ಪಾರ್ಕ್ ಬಳಿ ನಿರ್ಮಾಣ ಹಂತದ 6 ಮಹಡಿಯ ಅಪಾರ್ಟ್ ಮೆಂಟ್, ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಒಂದು ಫಾರ್ಮ್ ಹೌಸ್, 1 ಕೆಟಿಎಂ ಬೈಕ್, ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾದಲ್ಲಿ ಲಾಕರ್ ಪತ್ತೆಯಾಗಿದೆ. ಬ್ಯಾಂಕ್ ಗಳಲ್ಲಿ ಅಪಾರ ಪ್ರಮಾಣದ ನಗದು, ಉಳಿತಾಯ ಖಾತೆ ಪತ್ತೆಯಾಗಿದೆ.