“ಸಂಬಂಧಗಳನ್ನು ಗಟ್ಟಿಗೊಳಿಸುವುದೇ ತುಳು ಆಚರಣೆ ಧ್ಯೇಯ’
Team Udayavani, Mar 13, 2017, 3:36 PM IST
ನಗರ : ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ತುಳು ಆಚರಣೆಗಳ ಮೂಲ ಧ್ಯೇಯ ಎಂದು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ರಮೇಶ್ ಉಳಯ ಹೇಳಿದರು.
ಕಾರ್ಜಾಲು ಶ್ರೀ ಧೂಮಾವತಿ ದೈವದ ದೊಂಪದ ಬಲಿ ಜಾತ್ರೆ ಅಂಗವಾಗಿ 13ನೇ ವರ್ಷದ ಸಾಹಿತ್ಯ ಮತ್ತು ಧರ್ಮ ಸಮ್ಮಿಲನ ದಲ್ಲಿ ತೌಳವ ಸಂಸ್ಕೃತಿಯ ವಿಶಿಷ್ಟ ಆಚರಣೆ ಕುರಿತು ಅವರು ಉಪನ್ಯಾಸ ನೀಡಿದರು.
ವಿಶಿಷ್ಟ, ಸಂರಕ್ಷಿತ
ಆರೋಗ್ಯ, ಪಾಕೃತಿಕ ಸಮತೋಲನ, ನೈತಿಕತೆ ಹೀಗೆ ಜನ ಜೀವನದ ಎಲ್ಲ ಸ್ತರಗಳ ಲ್ಲಿಯೂ ತುಳುನಾಡು ವಿಶಿಷ್ಟವಾಗಿದೆ ಮತ್ತು ಸಂರಕ್ಷಿತವಾಗಿದೆ. ಇದಕ್ಕೆಲ್ಲ ಕಾರಣ ಇಲ್ಲಿನ ವಿಶಿಷ್ಟ ಆಚರಣೆಗಳು ಎಂದು ಹೇಳಿದ ಅವರು, ಇಲ್ಲಿ ಪ್ರಕೃತಿಗೆ ಸಂಬಂಧಿಸಿದ, ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವಂತಹ ಆಚರ ಣೆಗಳೇ ಹೆಚ್ಚು ಎಂದರು.
ಸಂಸ್ಕೃತಿಗಳ ಏಕ ಬಿಂದು
ಕಾರ್ಯಕ್ರಮ ಸಂಯೋಜಕರಾದ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಬಿ.ಜೆ. ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ದ.ಕ. ಜಿಲ್ಲೆ ಹಲವು ಸಂಸ್ಕೃತಿಗಳ ಏಕಬಿಂದು. ಇಲ್ಲಿನ ಜನರ ಸಂಯಮ ಹಾಗೂ ಜೀವನ ಶೈಲಿ ಮಾದರಿಯಾಗುವಂತದ್ದು. ಆದ್ದರಿಂದ ಇಂತಹ ಸಮ್ಮೇಳನ ಅವಶ್ಯಕ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆ ಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ದೊಂಪದ ಬಲಿ ನೇಮ ಸಮಿತಿಯ ಅಧ್ಯಕ್ಷ ಅಜಿತ್ಕುಮಾರ್ ಜೈನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಸಭಾ ಸದಸ್ಯ ಜೀವಂಧರ್ ಜೈನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸಂಜೀವ ನಾಯಕ್ ಕಲ್ಲೇಗ, ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಪಾಲ್ಗೊಂಡರು.
ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ನಿರ್ವಹಿಸಿದರು.
ದೊಂಪದ ಬಲಿ ನೇಮ
ಪೂರ್ವಾಹ್ನ ಗಣಹೋಮ, ಸ್ಥಳಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ, ಮಧ್ಯಾಹ್ನ ಕಾರ್ಜಾಲು ಧೂಮಾವತಿ, ಕಲ್ಕುಡ, ಕಲ್ಲುರ್ಟಿ ದೈವಗಳ ಸನ್ನಿಧಿಯಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಾಹಿತ್ಯ, ಧರ್ಮ ಸಮ್ಮಿಲನದ ಬಳಿಕ ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದಿಂದ ಬಾರಿಸು ಕನ್ನಡ ಡಿಂಡಿಮವ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಸಹಯೋಗದೊಂದಿಗೆ ತುಳು ಭಕ್ತಿ -ಭಾವ -ರಸಮಂಜರಿ ತುಳು ಗಾನ ಯಾನ ನಡೆಯಿತು.ಕಾರ್ಜಾಲುಗುತ್ತಿನಿಂದ ಧೂಮಾವತಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಭಂಡಾರ ಹೊರಟು, ಗೋಂದಲ ಪೂಜೆ, ದೈವಗಳ ದೊಂಪದ ಬಲಿ ನೇಮ ಜರಗಿತು.
ನಂಬಿಕೆಗಳ ಸಾಕ್ಷಿ
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ ರಾವ್ ಮಾತನಾಡಿ, ಧರ್ಮಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಈ ಕಾಲದ ಅಗತ್ಯ. ತುಳುನಾಡು ಎಂದೇ ಪ್ರಸಿದ್ಧವಾದ ಜಿಲ್ಲೆಯಲ್ಲಿ ತೌಳವ ಸಂಸ್ಕೃತಿ ಬಹಳ ವಿಶಿಷ್ಟವಾದುದು. ಆ ಕಾಲದ ಜನರ ಬದುಕಿನ ನಂಬಿಕೆಗಳು ಸಾಕ್ಷಿ ಎಂದರು.