ದುಷ್ಕರ್ಮಿಗಳ ತಂಡದಿಂದ ಕೆಎಸ್ ಈಶ್ವರಪ್ಪ ಪಿಎ ವಿನಯ್ ಅಪಹರಣಕ್ಕೆ ಯತ್ನ
Team Udayavani, May 11, 2017, 6:21 PM IST
ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ನಡುವಿನ ಮುನಿಸು ಮುಂದುವರಿದಿರುವ ನಡುವೆಯೇ ಈಶ್ವರಪ್ಪ ಅವರ ಪಿಎಯನ್ನು ಅಪಹರಿಸಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.
ಕೆಎಸ್ ಈಶ್ವರಪ್ಪ ಅವರ ಪಿಎ ವಿನಯ್ ಅವರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಾಧ್ಯಮದ ವರದಿ ತಿಳಿಸಿದೆ.
ಅಪಹರಣಕ್ಕೆ ಯತ್ನಿಸಲು ಮುಂದಾದಾಗ ವಿನಯ್ ರಕ್ಷಣೆಗಾಗಿ ಕೂಗಿಕೊಂಡಿದ್ದರು. ಆದರೆ ತಕ್ಷಣಕ್ಕೆ ಯಾರೊಬ್ಬರು ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಮಾಹಿತಿ ನೀಡಿರುವ ಅವರು ಬಳಿಕ ಸ್ಥಳೀಯರು ನೆರವಿಗೆ ಧಾವಿಸಿರುವುದಾಗಿ ವಿವರಿಸಿದರು.
ನನಗೆ ಯಾರ ಪರಿಚಯವೂ ಇಲ್ಲ, ಅವರೆಲ್ಲ ಹೊಸ ಮುಖಗಳು. ನನಗೆ ಯಾವುದೇ ಬೆದರಿಕೆ ಹಾಕಿಲ್ಲ. ಬೈಕ್ ನಲ್ಲಿ ಬಂದವರು ನನ್ನ ಎಳೆದಾಡಿ ಹಲ್ಲೆ ನಡೆಸಿದ್ದರಿಂದ ಕೈ ಮೂಳೆ ಮುರಿದಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿನಯ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಸ್ಥಳಕ್ಕೆ ಮಹಾಲಕ್ಷ್ಮಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ.