ಎಸ್ಸಿಡಿಸಿಸಿ ಬ್ಯಾಂಕ್ನ ಮೊಬೈಲ್ ಬ್ಯಾಂಕ್ ಮೇಘವಾಲ್ ಮೆಚ್ಚುಗೆ
Team Udayavani, May 19, 2017, 12:36 PM IST
ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೊದಲ ಬಾರಿ ಮೊಬೈಲ್ ಬ್ಯಾಂಕನ್ನು ಪರಿಚಯಿಸಿದ ಹೆಗ್ಗಳಿಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್ಸಿಡಿಸಿಸಿ ಬ್ಯಾಂಕ್) ನದ್ದಾಗಿದೆ. ಇಂತಹ ನೂತನ ಆವಿಷ್ಕಾರವಾಗಿ ಕಾರ್ಯರೂಪಕ್ಕೆ ಬಂದಿರುವ ಈ ಮೊಬೈಲ್ ಬ್ಯಾಂಕನ್ನು ಕೇಂದ್ರ ಸರಕಾರದ ವಿತ್ತ ಸಚಿವರಾದ (ಕಾರ್ಪೊರೇಟ್ ವ್ಯವಹಾರ) ಅರ್ಜುನ್ರಾಮ್ ಮೇಘವಾಲ್ ಅವರು ವೀಕ್ಷಣೆಗೈದು ಮೆಚ್ಚುಗೆ ವ್ಯಕ್ತಪಡಿಸಿದರು.
2007ರಿಂದ ಎಸ್ಸಿಡಿಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕ್ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದೆ. ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾದ ಆಶ್ರಯವನ್ನು ಈ ಮೊಬೈಲ್ ಬ್ಯಾಂಕ್ ಪೂರೈಸುತ್ತಿದೆ. ಈ ಮೊಬೈಲ್ ಬ್ಯಾಂಕಿನಲ್ಲಿ ಒಂದು ಶಾಖೆಯು ನಿರ್ವಹಿಸುವ ಎಲ್ಲ ವಿಭಾಗಗಳಿವೆ. ಜತೆಗೆ ಎಟಿಎಂ ಸೌಲಭ್ಯವು ಇರುವುದನ್ನು ಸಚಿವರಿಗೆ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ವಿವರಿಸಿದರು.
ಅಡ್ಯಾರ್ ಸಹ್ಯಾದ್ರಿ ಕಾಲೇಜು
ಆವರಣದಲ್ಲಿ ನಡೆದ ಭಾರತ ಸರಕಾರದ ವಿನೂತನ ಯೋಜನೆ ಗಳಾದ ಪ್ರಧಾನಮಂತ್ರಿ ಮುದ್ರಾ ಯೋಜನೆ ಹಾಗೂ ಸ್ಟಾರ್ಟ್ ಆಪ್ ಮತ್ತು ಸ್ಟಾ éಂಡ್ ಆಪ್ ಕುರಿತು ಮಾಹಿತಿ ಶಿಬಿರ, ಫಲಾನುಭವಿಗಳ ಕಾರ್ಯಾಗಾರದಲ್ಲಿ ಎಸ್ಸಿಡಿಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕನ್ನು ವೀಕ್ಷಣೆಗೆ ಇರಿಸಲಾಗಿತ್ತು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ, ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಸತೀಶ್ ಎಸ್., ಬ್ಯಾಂಕಿನ ಮಹಾ ಪ್ರಬಂಧಕರಾದ ರವೀಂದ್ರ ಬಿ. ಉಪಸ್ಥಿತರಿದ್ದರು.