ಸಂಧಿ ಎಂದರೇನು? ಸದನದಲ್ಲಿ ಕನ್ನಡ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ!
Team Udayavani, Jun 9, 2017, 2:24 PM IST
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಕೆಲ ಹೊತ್ತು ಸಂಧಿಗಳ ಬಗ್ಗೆ ವಿವರಿಸುತ್ತಾ ಕನ್ನಡ ಮೇಷ್ಟ್ರಾದ ಸ್ವಾರಸ್ಯಕರ ಘಟನೆ ಶುಕ್ರವಾರ ನಡೆಯಿತು.
ಬಿಜೆಪಿ ಶಾಸಕ ನಾರಾಯಣ ಸ್ವಾಮಿ 10 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ’56 ಲಕ್ಷ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದುತ್ತಿಲ್ಲವಾ ? ನಿನಗೆ ಮಕ್ಕಳಿದ್ದಾರಾ? ಅವರು ಎಲ್ಲಿ ಓದುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ನಾನು, ನಿಮ್ಮಲ್ಲಿ ಹೆಚ್ಚಿನವರು ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಇಲ್ಲಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದೇನೆ .ಇಂದು ಹಲವರಿಗೆ ವ್ಯಾಕರಣ ಅಂದ್ರೆ ಏನು ಅಂಥ ಗೊತ್ತಿಲ್ಲ. ಸಂಧಿ ಎಂದರೇನು ಅಂಥಾ ಗೊತ್ತಿಲ್ಲ. ನಮ್ಮ ಭಾಷೆಯನ್ನೇ ಮರೆಯುವ ಕಾಲ ಬಂದಿದೆ ಎಂದು ಸಂಧಿ ಎಂದರೇನು ಸಮಾಸ ಎಂದರೇನು? ಎಂದು ಶಾಸಕರನ್ನು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಿ ತಬ್ಬಿಬ್ಟಾಗುವಂತೆ ಮಾಡಿದರು.
‘ನನ್ನ ಜೊತೆ 6 ನೇ ತರಗತಿಯಲ್ಲಿ ಪುಟ್ಟಸ್ವಾಮಿ ಎಂಬ ಸಹಪಾಠಿ ಇದ್ದ. ಆಗೆಲ್ಲಾ ಮೌಖೀಕ ಪರೀಕ್ಷೆ ಇತ್ತು. ಮೇಷ್ಟು ಎಲ್ಲರಿಗೂ ಕರೆದು ಪ್ರಶ್ನೆ ಕೇಳಿದರು. ಸಂಧಿ ಎಂದರೇನು ಎಂದು ಮೇಷ್ಟ್ರು ಕೇಳಿದ್ದಕ್ಕೆ ಪುಟ್ಟಸ್ವಾಮಿ ಹೇಳಿದ ನಮ್ಮೆನೆಗೂ ನಮ್ಮ ದೊಡ್ಡಪ್ಪನ ಮನೆಗೂ ಓಣಿ ಇದೆಯಲ್ಲಾ ಅದೆ ಸರ್ ಸಂಧಿ ಅಂದ..’ ಎಂದು ಸದನವನ್ನು ನಗೆ ಗಡಲಲ್ಲಿ ತೇಲಿಸಿದರು.
ಸಂಧಿ ಅಂದರೆ ಎನ್ರೀ.,.ಡಾಕ್ಟರೇ.. ಎಂಬಿಬಿಎಸ್ ಮಾಡಿದ್ರಲ್ಲಾ ..ನಿಮಗೆ ಗೊತ್ತಿದೆಯಾ ಎಂದು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ರನ್ನು ಕೇಳಿದರು. ಬಿ.ಆರ್ ಪಾಟೀಲ್ರೆ ನಿಮಗೆ ಗೊತ್ತಾ ..ಯಾರಾದ್ರೂ ಹೇಳ್ರೀ .. ಎಂದು ಎಲ್ಲರಿಗೂ ಸವಾಲು ಹಾಕಿ.. ‘ಅಕ್ಷರಗಳು ಎಡೆಬಿಡದೇ ಒಂದಕ್ಕೊಂದು ಸೇರುವುದೇ ಸಂಧಿ’ ಎಂದರು.
ಸಂಧಿಗಳಲ್ಲಿ 3 ವಿಧ ಗುಣಸಂಧಿ, ಆಗಮ ಸಂಧಿ ,ಲೋಪ ಸಂಧಿ. ಲೋಪ ಅಂದರೆ ಏನು ಹೇಳು ಎಂದು ನಾರಾಯಣಸ್ವಾಮಿಯವರನ್ನು ಪ್ರಶ್ನಿಸಿ ಮತ್ತೆ ಇಕ್ಕಟ್ಟಿಗೆ ಸಿಲುಕಿಸಿದರು.
‘ನಮಗೆ ಮೇಷ್ಟ್ರು ಹೊಡೆದು ಕಲಿಸೋರು.. 56 – 57 ರಲ್ಲಿ ನಾನು ಕಲಿತದ್ದು , ಅಂದು ಕಲಿತದ್ದು ಇಂದಿಗೂ ನನಗೆ ನೆನಪಿದೆ ಎಂದರು. ಈ ವೇಳೆ ‘ನೀವು ಸಂಧಿಗಳೆಲ್ಲಾ ನುಗ್ಗಿ ಬಂದೇ ಮುಖ್ಯಮಂತ್ರಿಯಾಗಿದ್ದು’ ಎಂದು ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ ಹಾಸ್ಯ ಚಟಾಕಿ ಹಾರಿಸಿದರು.