ಅಘೋಷಿತ ತುರ್ತು ಪರಿಸ್ಥಿತಿಯ ಆತಂಕ
Team Udayavani, Jun 28, 2017, 11:41 AM IST
ಬೆಂಗಳೂರು: “1975 ರಲ್ಲಿ ಘೋಷಿತ ತುರ್ತುಪರಿಸ್ಥಿತಿ ಇತ್ತು, ಈಗ ಅಘೋಷಿತ ತುರ್ತು ಪರಿಸ್ಥಿತಿಯಿದೆ ಎಂದು ಸಾಹಿತಿಗಳು ಅಭಿಪ್ರಾಯಪಟ್ಟರೆ, ಯಾವುದೇ ಕಾರಣಕ್ಕೂ ಈಗ ತುರ್ತು ಪರಿಸ್ಥಿತಿ ಬರಲು ಸಾಧ್ಯವಿಲ್ಲ, ಏಕೆಂದರೆ ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯದ ಕೈಯಲ್ಲಿದೆ. ಹೀಗಾಗಿ ಹೆದರುವ ಅಗತ್ಯವಿಲ್ಲ,’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಪಾದಿಸಿದರು.
ತುರ್ತು ಪರಿಸ್ಥಿತಿ ವಿರೋಧಿ ದಿನದ ಅಂಗವಾಗಿ ಗಾಂಧಿಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ-ಗಣ್ಯರು ತುರ್ತು ಪರಿಸ್ಥಿತಿ ಕುರಿತು ಹಾಗೂ ಪ್ರಸ್ತುತ ಪರಿಸ್ಥಿತಿ ಕುರಿತು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದರು.
ಮೊದಲಿಗೆ ಮಾತನಾಡಿದ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, “ಅಂದು ಘೋಷಿತ ತುರ್ತು ಪರಿಸ್ಥಿತಿ ಇತ್ತು. ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರದ ವರ್ತನೆ ಶುಗರ್ ಕೋಟೆಡ್ ವಿಷದಂತಾಗಿದೆ,’ ಎಂದು ಹೇಳಿದರು.
“ಜಾತ್ಯಾತೀತ ಜನತಾದಳ ಬಿಜೆಪಿಯೊಂದಿಗೆ ಮಾಡಿದ ಸಖ್ಯ ಗುಲಗಂಜಿಯಲ್ಲಿ ಕಪ್ಪು ಚುಕ್ಕೆಯಂತೆ. ಅದನ್ನು ಸಮತೋಲನ ಮಾಡುವ ಕೆಲಸವನ್ನು ದೇವೇಗೌಡರು ಮಾಡಬೇಕು,’ ಎಂದು ತಿಳಿಸಿದರು. ಜೆಡಿಯು ನಾಯಕ ಡಾ.ಎಂ.ಪಿ.ನಾಡಗೌಡ, “ಆಡಳಿತ ಪಕ್ಷಕ್ಕೆ ಸೈದ್ಧಾಂತಿಕವಾದ ಪ್ರತಿಪಕ್ಷ ಇರಬೇಕು.
ಯಾವಾಗ ಪ್ರತಿಪಕ್ಷಗಳು ಒಡೆದು ಹೋಗುತ್ತವೆಯೋ ಆಗ ಆಡಳಿತ ಪಕ್ಷ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸುತ್ತದೆ. ಅದಕ್ಕೆ ಇಂದಿನ ಕೇಂದ್ರ ಸರ್ಕಾರವೇ ನಿದರ್ಶನ,’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೈಕೆಲ್ ಫೆರ್ನಾಂಡಿಸ್ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಮ್ಮ ಸಹೋದರರಾದ ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್, ಲಾರೆನ್ಸ್ ಫೆರ್ನಾಂಡಿಸ್ ಅವರೊಂದಿಗೆ ಜೈಲುವಾಸ ಅನುಭವಿಸಿದ್ದನ್ನು ಮತ್ತು ಅಂದಿನ ಪೊಲೀಸ್ ದೌರ್ಜನ್ಯದ ಕಹಿ ಘಟನೆಗಳನ್ನು ಮೆಲುಕು ಹಾಕಿದರು.
ಆಹಾರ ವಿಚಾರದಲ್ಲಿ ದಬ್ಟಾಳಿಕೆ: ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, “ಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದವರೂ ಸಹ ಸರ್ವಾಧಿಕಾರಿ ದಾರಿ ಹಿಡಿಯುತ್ತಿರುವುದನ್ನು ಖಂಡಿಸಬೇಕು. ತುರ್ತು ಪರಿಸ್ಥಿತಿ ಕೇವಲ ಇತಿಹಾಸವಲ್ಲ. ಇಂದಿಗೂ ನಮ್ಮನ್ನು ಭೂತದಂತೆ ಕಾಡುತ್ತಿದೆ. ಇಂದು ಆಹಾರದ ಮೇಲೂ ಕೆಲ ಸಂಘಟನೆಗಳು ದಬ್ಟಾಳಿಕೆ ನಡೆಸುತ್ತಿವೆ. ಕೆಲ ಪ್ರದೇಶಗಳ ಆಹಾರ ಪದ್ದತಿಯನ್ನು ನಿಷೇಧಿಸಬೇಕು ಎಂದು ಒತ್ತಡ ಹೇರುತ್ತಿರುವುದು ಸರಿಯಲ್ಲ. ಲಿಂಗಾಯತ ನಾಯಕರು ದಲಿತರ ಮನೆಗೆ ಹೋಗಿ ಬಾಹ್ಮಣರ ಊಟ ತಿನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ತುರ್ತು ಪರಿಸ್ಥಿತಿ ಬಾರದು… ಏಕೆಂದರೆ?: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, “ಅಂದು ತಮ್ಮ ಸ್ಥಾನ ಉಳಿಸಿಕೊಳ್ಳಲು ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಅಂದು ಪೊಲೀಸ್ ಶಕ್ತಿಯ ಮೂಲಕ ಜಯಪ್ರಕಾಶ್ ನಾರಾಯಣ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಆದರೆ, ಇಂದು ಕೇಂದ್ರ ಸರ್ಕಾರ ಕಾರ್ಪೊರೇಟ್ ಕೈಯಲ್ಲಿದ್ದು, ತುರ್ತು ಪರಿಸ್ಥಿತಿ ಬರುವುದಿಲ್ಲ,’ ಎಂದು ಅಭಿಪ್ರಾಯಪಟ್ಟರು.
“ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಬಲ ಹೆಚ್ಚಿಸಿಕೊಳ್ಳಲು ಮತ್ತು ಸಂಘಟನೆಗಾಗಿ ಅನೈತಿಕ ರಾಜಕಾರಣ ಮಾಡಲು ಹಿಂದೇಟು ಹಾಕಲ್ಲ. ಈ ವಿಚಾರವನ್ನು ನಾನು ಎಳೆ ಎಳೆಯಾಗಿ ಬಿಚ್ಚಿಡಲು ಹೆದರಲ್ಲ. ಸ್ವಾರ್ಥಕ್ಕಾಗಿ ನಾನೆಂದು ರಾಜಕಾರಣ ಮಾಡಿಲ್ಲ. ಎಂತಹ ಪರಿಸ್ಥಿತಿ ಬಂದರೂ ಹಿಂದೆ ತಿರುಗಿ ನೋಡದೆ ಮುಂದೆ ಹೆಜ್ಜೆ ಇಡುತ್ತೇನೆ. ವೈಯಕ್ತಿಕ ಸ್ವಾರ್ಥ ಬಿಟ್ಟು ರಾಜ್ಯದ ಹಿತ ಕಾಪಾಡಬೇಕಿದೆ,’ ಎಂದು ಹೇಳಿದರು.
ಮನೆಗೇ ಬಂದು ಬೆಂಬಲ ಕೇಳಿದರು: ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಮನೆ ಬಾಗಿಲಿಗೆ ಕಾಂಗ್ರೆಸ್ ನಾಯಕರೇ ಬಂದು ಮನವಿ ಮಾಡಿದರು. ಜತೆಗೆ ದಲಿತ ವಿರೋಧಿ ಎಂದು ಬಿಂಬಿಸಿಕೊಳ್ಳಬಾರದು ಅಂತ ಬೆಂಬಲ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು