‘ಯೋಜನೆಯಡಿ 93 ಲ.ರೂ. ಖರ್ಚು, ಜಿಲ್ಲೆಯಲ್ಲಿ ಪ್ರಥಮ ‘
Team Udayavani, Jul 4, 2017, 3:25 AM IST
ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾ.ಪಂ.ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆ ಗ್ರಾ.ಪಂ. ಅಂಬೇಡ್ಕರ್ ಭವನದಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಖತ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 93 ಲಕ್ಷ ರೂ. ಖರ್ಚಾಗಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಫಲಾನುಭವಿಗಳ ಸಹಕಾರದಿಂದ ಗ್ರಾ.ಪಂ. ಈ ಸಾಧನೆ ಮಾಡಿದೆ ಎಂದರು. ಜಲ ಮರುಪೂರಣ, ಶಾಶ್ವತ ಕಾಮಗಾರಿಗಳಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶವಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಹೆಚ್ಚು ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವಂತೆ ಹೇಳಿದರು. ಪ್ರತಿಯೊಬ್ಬರು ಉದ್ಯೋಗ ಖಾತರಿಯ ಯೋಜನೆಯ ಅನುದಾನ ಸದ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಹಿರೇಬಂಡಾಡಿ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಥಮ ಸ್ಥಾನ ಪಡೆಯುವಂತಾಗಲಿ ಎಂದರು. ಭತ್ತದ ಕೃಷಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶ ನೀಡಬೇಕು ಹಾಗೂ ಹಟ್ಟಿ ರಚನೆಗೆ ಇರುವ ಅನುದಾನ ಹೆಚ್ಚಿಸಬೇಕೆಂದು ಉದ್ಯೋಗ ಚೀಟಿದಾರರಾದ ಸುಲೈಮಾನ್, ವಾಮನ ಕೆಮ್ಮಾರ ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಲಕ್ಷ್ಮೀಶ ನಿಡ್ಡೆಂಕಿ, ಎಂಜಿನಿಯರ್ ವಿನೋದ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯರಾದ ನಿತಿನ್ ತಾರಿತ್ತಡಿ, ವಿಶ್ವನಾಥ ಕೆಮ್ಮಾಟೆ, ಸದಾನಂದ ಶೆಟ್ಟಿ ಅಡೆಕ್ಕಾಲ್, ಮುದ್ದ ಅಗರಿತೋಟ, ಮಾಲತಿ ಹರಿನಾರಾಯಣ, ವಸಂತಿ ಶಾಖೆಪುರ, ಚಂದ್ರಾವತಿ ನೆಹರೂತೋಟ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಗ್ರಾ.ಪಂ. ಕಾರ್ಯದರ್ಶಿ ಭವಾನಿ ಸ್ವಾಗತಿಸಿ ವಂದಿಸಿದರು. ಗ್ರಾ.ಪಂ. ಸಿಬಂದಿ ಸೋಮನಾಥ ಸಹಕರಿಸಿದರು.