ಮಣಿಪುರ ಕಾನೂನೇತರ ಹತ್ಯೆ ತನಿಖೆ ಸಿಬಿಐಗೆ
Team Udayavani, Jul 15, 2017, 6:00 AM IST
ಹೊಸದಿಲ್ಲಿ: ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್, ಮಣಿಪುರ ಪೊಲೀಸರಿಂದ ನಡೆದಿದೆ ಎನ್ನಲಾದ ಕಾನೂನೇತರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 2000 ರಿಂದ 2012ರ ಅವಧಿಯಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರಿಂದ 1528 ಕಾನೂನೇತರ ಹತ್ಯೆಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾದ ಪಿಐಎಲ್ ವಿಚಾರಣೆ ಸಂದರ್ಭ ಸುಪ್ರೀಂ ತನಿಖೆಗೆ ಆದೇಶಿಸಿದೆ. ತನಿಖೆ ಕುರಿತಂತೆ ಸಿಬಿಐ ತನಿಖಾ ತಂಡವೊಂದನ್ನು ರಚಿಸಲು ಸುಪ್ರೀಂ ಕೋರ್ಟ್ನ ನ್ಯಾ| ಎಂ.ಬಿ. ಲೋಕೂರ್ ಮತ್ತು ನ್ಯಾ| ಯು.ಯು. ಲಿಲಿತ್ ಅವರಿದ್ದ ನ್ಯಾಯಪೀಠ ಸಿಬಿಐ ನಿರ್ದೇಶಕರಿಗೆ ಹೇಳಿದೆ.
ಇದಕ್ಕೂ ಮುನ್ನ ಏ.20ರ ವಿಚಾರಣೆ ವೇಳೆ ಕೇಂದ್ರ ಸರಕಾರ ಹೇಳಿಕೆ ನೀಡಿ, “ಉಗ್ರರ ಒಳನುಸುಳುವಿಕೆ ವ್ಯಾಪಕವಾಗಿರುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿದ್ದು ಉಗ್ರರ ವಿರುದ್ಧ ಕಾರ್ಯಾಚರಣೆಗಳಾಗಿದ್ದು, ಅವುಗಳನ್ನು ‘ಹತ್ಯಾಕಾಂಡ’ ಎಂದು ಪರಿಗಣಿಸಕೂಡದು. ಇಂಥ ಆರೋಪಗಳು ಪೂರ್ವಗ್ರಹ ಪೀಡಿತವಾಗಿದ್ದು, ನ್ಯಾಯಾಂಗ ತನಿಖೆ ನಡೆಸಿ, ಸೇನೆಯ ಘನತೆಗೆ ಧಕ್ಕೆ ತರಲಾಗುತ್ತಿದೆೆ’ ಎಂದು ಹೇಳಿತ್ತು. ಹಿಂದಿನ ವಿಚಾರಣೆಯಲ್ಲಿ ವಿವಿಧ ಆಯೋಗದ ವರದಿಗಳ ಅನ್ವಯ 265 ಸಾವಿನ ಪ್ರಕರಣಗಳಲ್ಲಿ ಭದ್ರತಾ ಪಡೆಗಳ ಮೇಲೆ ಆರೋಪಗಳಿವೆ. ಇದಕ್ಕೆ ಪೂರಕವಾಗಿ ಪ್ರಕರಣಗಳನ್ನು ಪ್ರತ್ಯೇಕಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು 70 ಕೇಸುಗಳು ಸೇನೆ, ಅಸ್ಸಾಂ ರೈಫಲ್ಸ್ ವಿರುದ್ಧ, ಉಳಿದವು ರಾಜ್ಯ ಪೊಲೀಸ್ ವಿರುದ್ಧದವು ಎಂದು ಹೇಳಿತ್ತು.
ಏನಿದು ಪ್ರಕರಣ?
2000ರಲ್ಲಿ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಉಗ್ರರ ಚಟುವಟಿಕೆ, ರಾಜಕೀಯ ಪ್ರತಿಭಟನೆಗಳು ತೀವ್ರವಾಗಿದ್ದು, ಈ ಸಂದರ್ಭ ಕೇಂದ್ರ ಸರಕಾರ ಸೇನಾ ವಿಶೇಷಾಧಿಕಾರ ಕಾಯ್ದೆಯನ್ನು ಅಲ್ಲಿಗೆ ಅನ್ವಯಿಸಿತ್ತು. ಬಳಿಕ ಭದ್ರತಾ ಪಡೆಗಳ ಹಿಡಿತ ಅಲ್ಲಿ ಹೆಚ್ಚಾಗಿತ್ತು. 2000ರಲ್ಲಿ ಇಂಫಾಲ್ ವ್ಯಾಲಿಯಲ್ಲಿ ಬಸ್ಸ್ಟಾಂಡ್ನಲ್ಲಿ ನಿಂತಿದ್ದ ನಾಗರಿಕರನ್ನು ಅಸ್ಸಾಂ ರೈಫಲ್ಸ್ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ ಎಂಬ ಆರೋಪವಿದ್ದು, ಈ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿದ್ದವು. ಜೊತೆಗೆ ಭದ್ರತಾ ಪಡೆಗಳಿಂದ ವ್ಯಾಪಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಹೋರಾಟದಲ್ಲಿ ಇರೋಮ್ ಶರ್ಮಿಳಾ ಮುಂಚೂಣಿಯಲ್ಲಿದ್ದರು.