ಕಾಶ್ಮೀರದಲ್ಲಿ ಚೀನ ಹಸ್ತಕ್ಷೇಪಕ್ಕೆ ಮೆಹಬೂಬಾ ಮುಫ್ತಿ ಆಕ್ರೋಶ
Team Udayavani, Jul 16, 2017, 3:45 AM IST
ಶ್ರೀನಗರ/ಹೊಸದಿಲ್ಲಿ: ಕಾಶ್ಮೀರ ವಿವಾದ ಬಗೆಹರಿಸಲು ನೆರವಾಗುವ ಬಗ್ಗೆ ಚೀನ ಮಧ್ಯಪ್ರವೇಶದ ಮಾತನಾಡುತ್ತಿರುವಂತೆಯೇ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಣಿವೆ ರಾಜ್ಯದಲ್ಲಿನ ಸಮಸ್ಯೆಯಲ್ಲಿ ಚೀನ ಕೂಡ ಲಾಭ ಪಡೆಯಲು ಮುಂದಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಜತೆಗೆ ವಿದೇಶಿ ಹಸ್ತಕ್ಷೇಪದ ಬಗ್ಗೆಯೂ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. ಇತ್ತೀಚಿನ ವರೆಗೆ ಪಾಕಿಸ್ಥಾನ ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿತ್ತು. ಈಗ ಅದರಲ್ಲಿ ಮತ್ತೂಂದು ನೆರೆಯ ರಾಷ್ಟ್ರ ಕೂಡ ಸೇರ್ಪಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ರನ್ನು ಭೇಟಿಯಾದ ಬಳಿಕ ಸಿಎಂ ಮೆಹಬೂಬಾ ಮುಫ್ತಿ ಮಾತನಾಡಿದರು. ಇತ್ತೀಚೆಗೆ 7 ಮಂದಿ ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯನ್ನು ಪ್ರಸ್ತಾವಿಸಿದ ಸಿಎಂ, ಕೋಮು ಸಾಮರಸ್ಯ ಕದಡುವ ನಿಟ್ಟಿನಲ್ಲಿಯೇ ಅದನ್ನು ನಡೆಸಲಾಗಿದೆ ಎಂದು ಆರೋಪಿ ಸಿದ್ದಾರೆ. ಆದರೆ ದೇಶದ ಜನರು, ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ದಾಳಿಯನ್ನು ಖಂಡಿಸಿವೆ. ಜತೆಗೆ ಪೊಲೀಸರು, ಭದ್ರತಾ ಸಿಬಂದಿಗೆ ರಾಜಕೀಯ ಪಕ್ಷಗಳು ಹಾಗೂ ದೇಶದ ಜನತೆ ಬೆಂಬಲ ನೀಡಿದರೆ, ರಾಜ್ಯದ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು ಎಂದಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜತೆಗೆ ಅವರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.
ಪಿಡಿಪಿ ಶಾಸಕನ ಚಾಲಕ ವಶಕ್ಕೆ: ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಸಂಬಂಧಿಸಿ ಪಿಡಿಪಿ ಶಾಸಕ ಅಜೀಜ್ ಅಹ್ಮದ್ ಮಿರ್ ಅವರ ಕಾರು ಚಾಲಕ ತೌಸೀಫ್ ಅಹ್ಮದ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನಿಗೆ ದಾಳಿ ನಡೆಸಿದ ಉಗ್ರರ ಜತೆಗೆ ನಿಕಟ ಸಂಪರ್ಕ ಇದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಏಳು ತಿಂಗಳ ಹಿಂದಷ್ಟೇ ಶಾಸಕರ ಚಾಲಕನಾಗಿ ತೌಸೀಫ್ ನಿಯೋಜಿತ ನಾಗಿದ್ದ. ವಿಶೇಷವೆಂದರೆ, ಈತ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಸಿಬ್ಬದಿಯಾಗಿದ್ದಾನೆ.
ಎನ್ಕೌಂಟರ್ನಲ್ಲಿ ಮೂವರು ಉಗ್ರರ ಹತ್ಯೆ: ಪುಲ್ವಾಮಾ ಜಿಲ್ಲೆಯ ತ್ರಾಲ್ನಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯ ಲಾಗಿದೆ. ಅವರನ್ನು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಎಸ್.ಪಿ.ವೇದ್ ಹೇಳಿದ್ದಾರೆ. ಉಗ್ರರ ಪೈಕಿ ಒಬ್ಬ ವಿದೇಶಿ ಪ್ರಜೆ ಕೂಡ ಸೇರಿದ್ದಾನೆ. ಶ್ರೀನಗರದಿಂದ 36 ಕಿಮೀ ದೂರದ ಪ್ರದೇಶದಲ್ಲಿರುವ ತ್ರಾಲ್ನಲ್ಲಿ ಶುಕ್ರವಾರ ರಾತ್ರಿ ಉಗ್ರರ ಚಲನವಲನದ ಬಗ್ಗೆ ಸುಳಿವರಿತ ಸೇನೆ ಅವರನ್ನು ಸುತ್ತುವರಿಯಲು ಪ್ರಯತ್ನಿಸಿದಾಗ ಗುಂಡಿನ ಚಕಮಕಿ ಆರಂಭವಾಗಿತ್ತು.
ಗುಂಡಿನ ದಾಳಿ: ಸೈನಿಕ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಮಂಜಾಕೋಟ್ಗೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆಯ ಗುಂಟ ಪಾಕಿಸ್ಥಾನದ ಸೈನಿಕರು ಕದನ ವಿರಾಮ ಉಲ್ಲಂ ಸಿ, ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಭಾರತೀಯ ಸೇನೆಯ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಅವರನ್ನು ಲ್ಯಾನ್ಸ್ ನಾಯಕ್ ಮೊಹಮ್ಮದ್ ನಸೀರ್ ಎಂದು ಗುರುತಿಸಲಾಗಿದೆ. ಅವರು ಪೂಂಛ… ಜಿಲ್ಲೆಯವರು. ಅದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯೂ ಗುಂಡು ಹಾರಿಸಿದೆ. ಇದಕ್ಕೂ ಮೊದಲು ಕುಲ್ಗಾಂವ್ನಲ್ಲಿ ಸಿಆರ್ಪಿಎಫ್ ವಾಹನದ ಮೇಲೆ ಉಗ್ರರು ಗುಂಡು ಹಾರಿಸಿದ್ದರಿಂದ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಆರ್ಥಿಕ ಕಾರಿಡಾರ್ಗೆ ಭಾರತ
ಅಡ್ಡಿ ಎಂದ ಪಾಕ್ ಸೇನಾಧಿಕಾರಿ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶೀಘ್ರವೇ ಅನುಷ್ಠಾನಗೊಳ್ಳಲಿರುವ 45 ಸಾವಿರ ಕೋಟಿ ರೂ. ವೆಚ್ಚದ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್ ಯೋಜನೆಗೆ ಭಾರತ ಅಡ್ಡಿ ಮಾಡಲು ಮುಂದಾಗಿದೆ. ಯೋಜನೆಯ ಅನ್ವಯ ರಸ್ತೆ, ರೈಲು ಮಾರ್ಗ ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅವುಗಳು ಕಾರ್ಯಗತವಾಗದಂತೆ ಭಾರತದ ರಿಸರ್ಚ್ ಆ್ಯಂಡ್ ಅನಾಲಿಸ್ ವಿಂಗ್ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಪಾಕಿಸ್ಥಾನ ಸೇನೆಯ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜ| ಜುಬೈರ್ ಮೆಹಮೂಬ್ ಹಯಾತ್ ದೂರಿದ್ದಾರೆ.