ವಿವಿಧ ಇಲಾಖೆ ಕ್ರಿಯಾಯೋಜನೆಗೆ ಅನುಮೋದನೆ
Team Udayavani, Jul 19, 2017, 3:49 PM IST
ಯಾದಗಿರಿ: ಪ್ರಸಕ್ತ ಸಾಲಿಗೆ ವಿವಿಧ ಇಲಾಖೆಗಳ 136.96 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ಅನುಮೋದನೆ ಜಿಪಂ ಅಧ್ಯಕ್ಷ ಬಸರೆಡ್ಡಿ ಎಂ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀಡಲಾಯಿತು.
ಜಿಪಂ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗೆ ನಿಗದಿಪಡಿಸಿದ ಅನುದಾನದ ಕುರಿತು ಜಿಪಂ ಸಿಇಒ ಸುನೀಲ್ ಬಿಸ್ವಾಸ್ ಸಭೆ ಗಮನಕ್ಕೆ ತಂದರು. 2017-18ನೇ ಸಾಲಿಗೆ ಇಲಾಖೆವಾರು ನಿಗದಿಯಾದ ಅನುದಾನವನ್ನು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ 276.01 ಲಕ್ಷ ರೂಪಾಯಿ ಅನುದಾನ ನಿಗದಿಯಾಗಿದ್ದು, 230 ಲಕ್ಷ ರೂಪಾಯಿ ಸಿಬ್ಬಂದಿ ವೇತನಕ್ಕೆ ಮೀಸಲಿರಿಸುವ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ-5359.25 ಲಕ್ಷ ರೂಪಾಯಿ ಅನುದಾನ, ವಯಸ್ಕರ ಶಿಕ್ಷಣ ಇಲಾಖೆ-25.02 ಲಕ್ಷ ರೂಪಾಯಿ, ಕ್ರೀಡಾ
ಮತ್ತು ಯುವಜನ ಸೇವೆ ಇಲಾಖೆ-83.03 ಲಕ್ಷ ರೂಪಾಯಿ, ಕಲೆ ಮತ್ತು ಸಂಸ್ಕೃತಿ ಇಲಾಖೆ-9 ಲಕ್ಷ ರೂಪಾಯಿ, ವೈದ್ಯಕೀಯ
ಮತ್ತು ಜನಾರೋಗ್ಯ ಇಲಾಖೆ-2167.29 ಲಕ್ಷ ರೂಪಾಯಿ, ಕುಟುಂಬ ಕಲ್ಯಾಣ ಇಲಾಖೆ- 453.53 ಲಕ್ಷ ರೂಪಾಯಿ, ಸಮಾಜ ಕಲ್ಯಾಣ ಇಲಾಖೆ-1574.89 ಲಕ್ಷ ರೂಪಾಯಿ, ಹಿಂದುಳಿದ ವರ್ಗಗಳ ಇಲಾಖೆ- 1776.49 ಹಾಗೂ ಅಲ್ಪಸಂಖ್ಯಾತರ ಇಲಾಖೆ-209.73 ಲಕ್ಷ ರೂಪಾಯಿ, ಕೃಷಿ ಇಲಾಖೆ-171.98ಲಕ್ಷ ರೂಪಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-26.33ಲಕ್ಷ ರೂಪಾಯಿ ಸೇರಿದಂತೆ ಮುಂತಾದ ಇಲಾಖೆಗಳ ಅಭಿವೃದ್ಧಿಗೆ 136.69ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದ್ದಕ್ಕೆ ಜಿಪಂ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮೀಸಲಿರುವ 15 ಲಕ್ಷ ರೂ. ಅನುದಾನದಲ್ಲಿ ಪ್ರತಿ ತಾಲೂಕಿನಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ರೈತರ ಬಜಾರ್ ಗಳನ್ನು ನಿರ್ಮಿಸಿ ರೈತರು ತಾವು ಬೆಳೆದ ತರಕಾರಿ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಲು ಜಿಪಂ ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು. ಜಿಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ್ ಮಾತನಾಡಿ, ನಾನು ಎಸ್ಎಸ್ಎಲ್ಸಿ
ಫೇಲಾಗಿದ್ದೇನೆ. ನನಗೆ ಇಂಗ್ಲಿಷ್ ಬರುವುದಿಲ್ಲ. ಆಯುಷ್ ಇಲಾಖೆ ಪ್ರಗತಿ ವರದಿಯನ್ನು ಇಂಗ್ಲಿಷ್ನಲ್ಲಿ ನೀಡಿದ್ದು, ಕೂಡಲೇ ಕನ್ನಡದಲ್ಲಿ ವರದಿ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಡಾ| ಅವಿನಾಶ್ ಮೆನನ್ ರಾಜೇಂದ್ರನ್ ಅವರು, ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಗಿರುವುದರಿಂದ ಅದು ಇಂಗ್ಲಿಷ್ನಲ್ಲಿದೆ. ಮುಂದಿನ ಸಭೆಯಲ್ಲಿ ಇಂಗ್ಲಿಷ್ ವರದಿಗಳನ್ನು ಕನ್ನಡದಲ್ಲಿ
ತರ್ಜುಮೆ ಮಾಡಿ ನೀಡಲಾಗುವುದು ಎಂದರು. ಶಾಲಾ ದುರಸ್ತಿ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆಯಿದ್ದು ಸಮಸ್ಯೆ ಬಗೆಹರಿಸುವ ಕುರಿತು ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಜಿ.ಪಂ. ಸದಸ್ಯರು ಸಭೆಗೆ ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಊಟ ನೀಡುತ್ತಿಲ್ಲ, ಅವರಿಗೆ ಮಡಿಲು ಕಿಟ್ ಸೇರಿದಂತೆ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯರಗೋಳ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲ ಸಿಬ್ಬಂ ಗಳು ಇರಲಿಲ್ಲ, ನೀವು ಏನು ಮಾಡುತ್ತಿದ್ದೀರಿ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷರು ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕುಟುಂಬ ಕಲ್ಯಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಕೆಂಭಾವಿ ವ್ಯಾಪ್ತಿಯಲ್ಲಿ 87 ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗಿದ್ದು
ಆದರೆ ಇಲ್ಲಿಯವರೆಗೆ ಫಲಾನುಭವಿಗಳಿಗೆ ಅನುದಾನ ನೀಡದಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ್ ಅವರಿಗೆ ಸೂಚಿಸಿತು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ ವೇದಿಕೆಯಲ್ಲಿದ್ದರು. ಜಿಪಂ ಸದಸ್ಯರು, ಉಪಕಾರ್ಯದರ್ಶಿ ವಸಂತರಾವ ಕುಲಕರ್ಣಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಕನ್ನಡದಲ್ಲಿ ವರದಿ ನೀಡಿ
ನಾನು 10ನೇ ತರಗತಿ ಫೇಲಾಗಿದ್ದೇನೆ. ನನಗೆ ಇಂಗ್ಲಿಷ್ ಓದಲು ಬರುವುದಿಲ್ಲ. ಆಯುಷ್ ಇಲಾಖೆ ಪ್ರಗತಿ ವರದಿಯನ್ನು
ಇಂಗ್ಲಿಷ್ನಲ್ಲಿ ನೀಡಿದ್ದು, ಕೂಡಲೇ ಕನ್ನಡದಲ್ಲಿ ವರದಿ ನೀಡಬೇಕು.
ಮರಿಲಿಂಗಪ್ಪ ಕರ್ನಾಳ್, ಜಿಪಂ ಸದಸ್ಯ