ಖಾರದ ಪುಡಿ ಎರಚಿ ಮಹಿಳೆಯ ಚಿನ್ನಾಭರಣ ದರೋಡೆ
Team Udayavani, Jul 24, 2017, 7:15 AM IST
ಉಡುಪಿ: ಮಹಿಳೆಯ ಕಣ್ಣಿಗೆ ಖಾರದ ಪುಡಿಯನ್ನು ಎರಚಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಹಿತೇಶ್ ಅವರ ಪತ್ನಿ ವಾಣಿ ನಾಯ್ಕ (30) ದರೋಡೆಗೆ ಒಳಗಾದ ಮಹಿಳೆ. ಅವರು ಜು. 22ರ ಸಂಜೆ 5.45ರ ಸುಮಾರಿಗೆ ಮನೆ ಸಮೀಪದ ಗದ್ದೆ ಕಡೆಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಬಂದು ಅವರ ಬಾಯಿಗೆ ಬಟ್ಟೆಯನ್ನು ತುರುಕಿ, ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಅವರ ಕುತ್ತಿಗೆಯಲ್ಲಿದ್ದ ಐದೂವರೆ ಗ್ರಾಂ. ತೂಕದ ಎರಡೆಳೆಯ ಕರಿಮಣಿ ಸರ ಹಾಗೂ ಕೈಯಲ್ಲಿದ್ದ ಒಟ್ಟು 12 ಗ್ರಾಂ. ತೂಕದ 3 ಉಂಗುರಗಳನ್ನು ದರೋಡೆ ಮಾಡಿದ್ದಾನೆ. ವ್ಯಕ್ತಿಯು ಕನ್ನಡ ಮಾತನಾಡುತ್ತಿದ್ದ ಎಂದು ವಾಣಿ ನಾಯ್ಕ ಅವರು ದೂರಿನಲ್ಲಿ ತಿಳಿಸಿದ್ದಾರೆ. ಚಿನ್ನಾಭರಣಗಳ ಒಟ್ಟು ಮೌಲ್ಯ 36,000 ರೂ. ಎಂದು ಅಂದಾಜಿಸಲಾಗಿದೆ.