ಸಮ್ಮಿಶ್ರ ಸರ್ಕಾರ ನಿಭಾಯಿಸಿದ್ದ “ಚಾಣಾಕ್ಷ
Team Udayavani, Jul 28, 2017, 7:30 AM IST
ಬೆಂಗಳೂರು: ರಾಜ್ಯ ರಾಜಕಾರಣದ “ಅಜಾತಶತ್ರು’ ಸದಾ ನಗುಮುಖದ ಧರಂಸಿಂಗ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಇಪ್ಪತ್ತು ತಿಂಗಳ ಕಾಲ ಚಾಣಾಕ್ಷತನದಿಂದ ನಿಭಾಯಿಸಿದ್ದರು.
ಕಾಂಗ್ರೆಸ್ ಹೈಕಮಾಂಡ್ ಹಾಗೂ ಜೆಡಿಎಸ್ ಹೈಕಮಾಂಡ್ ಎರಡರ ಜತೆಯೂ ಸಮನ್ವಯತೆ ಸಾಧಿಸಿ ಆಡಳಿತ ನಡೆಸುವುದು ಒಂದು ರೀತಿಯಲ್ಲಿ ಧರಂಸಿಂಗ್ ಅವರಿಗೆ ಸವಾಲೇ ಆಗಿತ್ತು. ಆ ಸವಾಲನ್ನು ಇಪ್ಪತ್ತು ತಿಂಗಳ ಕಾಲ ಧರಂಸಿಂಗ್ ಸಮರ್ಥವಾಗಿ ನಿರ್ವಹಿಸಿದ್ದರು. ಎಂತಹುದೇ ಸಮಸ್ಯೆ ಎದುರಾದರೂ ಮುಗುಳ್ನಗೆ ಬೀರಿ ಚಾಣಾಕ್ಷತನದಿಂದ ನಿರ್ವಹಣೆ ಮಾಡುತ್ತಿದ್ದರು.
2004ರಲ್ಲಿ ಎಸ್.ಎಂ.ಕೃಷ್ಣ ಅವರು ಅವಧಿಗೆ ಮುನ್ನ ವಿಧಾನಸಭೆ ಚುನಾವಣೆಗೆ ಹೋದಾಗ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ, ಮತ್ತೆ ಚುನಾವಣೆಗೆ ಹೋಗುವುದನ್ನು ತಡೆಯಲು ಮಹಾರಾಷ್ಟ್ರ, ಜಮ್ಮು-ಕಾಶ್ಮೀರ ಮಾದರಿ ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಯಿತು. ಅದರ ಭಾಗವಾಗಿ ರಾಜ್ಯದಲ್ಲಿ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ತೀರ್ಮಾನವಾಯಿತು.
ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಗೊ, ಜೆಡಿಎಸ್ಗೊ ಎಂಬ ಬಗ್ಗೆಯೇ ಎರಡು ದಿನ ದೆಹಲಿಯಲ್ಲಿ ಕಸರತ್ತು ಅಂತಿಮವಾಗಿ ಕಾಂಗ್ರೆಸ್ಗೆ ಮುಖ್ಯಮಂತ್ರಿ ಸ್ಥಾನ ಎಂಬ ಒಪ್ಪಂದವಾದಾಗ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದುರಾಯಿತು. ಮುಖ್ಯಮಂತ್ರಿ ಸ್ಥಾನಕ್ಕೆ ಎರಡೂ ಪಕ್ಷ ಒಪ್ಪುವ ಸರ್ವಸಮ್ಮತ ಅಭ್ಯರ್ಥಿ ಆಗಬೇಕೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಷರತ್ತು ವಿಧಿಸಿದ್ದರು. ಆಗ, ಮುಖ್ಯಮಂತ್ರಿ ಹುದ್ದೆಗೆ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ಎಲ್ಲರಿಗೂ ಒಪ್ಪುವ ಯಾರೊಂದಿಗೂ ದ್ವೇಷ ಸಾಧಿಸದ ಧರಂಸಿಂಗ್ ಸರ್ವಸಮ್ಮತ ಅಭ್ಯರ್ಥಿಯಾಗಿ ಹೊರ ಹೊಮ್ಮಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತಕ್ಕೆ ಹಾಕಿದಾಗಲೂ ಧರಂಸಿಂಗ್ಗೆ ಅತಿ ಕಡಿಮೆ ಮತ ಬಿದ್ದರೂ ದೇವೇಗೌಡರ ಕೃಪೆಯಿಂದ ಮುಖ್ಯಮಂತ್ರಿಯಾದರು.
ಆಶ್ಚರ್ಯ ಎಂದರೆ, ಈಗ ಜೆಡಿಎಸ್ನಲ್ಲಿರುವ ಆಗಿನ ಕಾಂಗ್ರೆಸ್ ನಾಯಕ ಎಚ್. ವಿಶ್ವನಾಥ್ ಅವರು ಧರಂಸಿಂಗ್ ಮುಖ್ಯಮಂತ್ರಿಯಾಗಲು ಪ್ರಮುಖ ಪಾತ್ರ ವಹಿಸಿದ್ದರು. ಎಸ್.ಎಂ.ಕೃಷ್ಣ ಅವರನ್ನು ಒಪ್ಪದಿದ್ದಾಗ ಧರಂಸಿಂಗ್ ಹೆಸರು ಪ್ರಸ್ತಾಪಿಸಿ ಹೊಂದಾಣಿಕೆಗೆ ಸಮಸ್ಯೆಯಾಗದು ಎಂದು ಹೇಳಿ ಒಪ್ಪಿಸಿದ್ದು ಇದೇ ವಿಶ್ವನಾಥ್ ಹಾಗೂ ವಿಠಲ್ ಹೆರೂರ್. ದೇವರಾಜ ಅರಸು ಗರಡಿಯಲ್ಲಿ ಪಳಗಿದ ಧರಂಸಿಂಗ್-ವಿಶ್ವನಾಥ್ ಪರಸ್ಪರ ಆತ್ಮೀಯತೆಯನ್ನೂ ಹೊಂದಿದ್ದವರು.
ಅದೇ ಆತ್ಮೀಯತೆಯಿಂದ ವಿಶ್ವನಾಥ್ ಅವರು ಧರಂಸಿಂಗ್ ಮುಖ್ಯಮಂತ್ರಿಯಾಗಲು ತೆರೆ ಮರೆಯಲ್ಲಿ ಶ್ರಮಿಸಿದ್ದರು.
ಧರಂಸಿಂಗ್ ಪಕ್ಷ ನಿಷ್ಠೆಯೂ ಆಗ ಕೈ ಹಿಡಿಯಿತು. ನಂತರ 20 ತಿಂಗಳ ಕಾಲ ಚಾಕಚಕ್ಯತೆಯಿಂದ ಮುಖ್ಯಮಂತ್ರಿಯಾಗಿ ಆಡಳಿತ ನಡೆದ ಧರಂಸಿಂಗ್, ಕೆಲವು ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಎಚ್.ಡಿ. ದೇವೇಗೌಡರ ಜತೆ ಬಾಲಬ್ರೂಯಿಯಲ್ಲಿ ಸಮಾಲೋಚನೆ ನಡೆಸುತ್ತಿದ್ದರು. ಸಂಪುಟದ ಮಹತ್ವದ ತೀರ್ಮಾನಗಳ ಬಗ್ಗೆ ದೂರವಾಣಿ ಮೂಲಕ ಸಲಹೆ-ಸೂಚನೆ ಪಡೆಯುತ್ತಿದ್ದರು.
ಹಾಗೆ ನೋಡಿದರೆ ಧರಂಸಿಂಗ್ ಜೆಡಿಎಸ್ ನಡುವೆ ಎಂದೂ ಸಮಸ್ಯೆಯೇ ಇರಲಿಲ್ಲ. ಆದರೆ, ಒಮ್ಮೆಲೆ ಸಿದ್ದರಾಮಯ್ಯ ಅಹಿಂದದತ್ತ ಹೊರಳಿದ್ದರಿಂದ ಆಗಿನ ಪರಿಸ್ಥಿತಿಯಲ್ಲಿ ರಾಜಕೀಯ ಧ್ರುವೀಕರಣ ನಡೆದು ಸಮ್ಮಿಶ್ರ ಸರ್ಕಾರ ಪತನವಾಗಿ
ಧರಂಸಿಂಗ್ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಧರಂಸಿಂಗ್ ಜೆಡಿಎಸ್ ಬಗ್ಗೆ ಯಾವುದೇ ಶಂಕೆ ಇಟ್ಟುಕೊಂಡಿರಲಿಲ್ಲ. ಎಲ್ಲದಕ್ಕೂ ಎಚ್.ಡಿ. ದೇವೇಗೌಡರ ಮಾತೇ ಅಂತಿಮ, ಅವರು ಹಾಕಿದ ಗೆರೆ ಯಾರೂ ದಾಟುವುದಿಲ್ಲ ಎಂದೇ ನಂಬಿದ್ದರು.
ಆದರೆ, ಎಚ್.ಡಿ.ಕುಮಾರಸ್ವಾಮಿ-ಬಿ.ಎಸ್.ಯಡಿಯೂರಪ್ಪ ನಡುವಿನ ರಹಸ್ಯ ಮಾತುಕತೆ ಫಲವಾಗಿ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ರಾಜ್ಯಪಾಲರ ಮುಂದೆ ಪರೇಡ್ ನಡೆಸಲು ರಾಜಭವನದ ದ್ವಾರ ಪ್ರವೇಶಿಸಿದಾಗಲೇ ಧರಂಸಿಂಗ್ ಅವರಿಗೆ ರಾಜಕೀಯವಾಗಿ ಏನೋ ಆಗುತ್ತಿದೆ ಎಂಬುದು ಗೊತ್ತಾಗಿದ್ದು. ಅಷ್ಟರಲ್ಲಾಗಲೇ ಹೊಂದಾಣಿಕೆ ಮಾತುಕತೆ, ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸ್ಥಾನದ ಹಂಚಿಕೆ, ಸಚಿವ ಸ್ಥಾನಗಳ ಹಂಚಿಕೆ ಎಲ್ಲವೂ ಮುಗಿದು ಹೋಗಿತ್ತು. ದೇವೇಗೌಡರು ಅಸಹಾಯಕರಾಗಿ ಕೈ ಚೆಲ್ಲಿದರು.
ಅಜಾತಶತ್ರು ಧರಂಸಿಂಗ್ ಏನೂ ತಪ್ಪು ಮಾಡದೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೆ, ಧರಂಸಿಂಗ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವಾಗ ಎಷ್ಟು ನಿರ್ಲಿಪ್ತತೆಯಿಂದ ಇದ್ದರೋ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ದಿನವೂ ಅದೇ ನಿರ್ಲಿಪ್ತತೆ ಅವರಲ್ಲಿ ಕಾಣುತ್ತಿತ್ತು.
– ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ