ರೈಲಿನಲ್ಲಿ ನೀಡಿದ್ದ ಪಕೋಡದಲ್ಲಿ ಕೀಟ ಪತ್ತೆ
Team Udayavani, Aug 6, 2017, 7:50 AM IST
ಹೊಸದಿಲ್ಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರ ಸೇವನೆಗೆ ಯೋಗ್ಯವಿರುವುದಿಲ್ಲ ಎಂದು ಮಹಾಲೇಖಪಾಲರು ವರದಿ ನೀಡಿದ ಕೆಲವೇ ದಿನಗಳಲ್ಲಿ ರೈಲಿನಲ್ಲಿ ನೀಡಿದ ಆಹಾರದಲ್ಲಿ ಹಲ್ಲಿ ಪತ್ತೆಯಾಗಿತ್ತು. ಈಗ ಬಿಹಾರ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾಗಿದ್ದ ಪಕೋಡದಲ್ಲಿ ಕೀಟವೊಂದು ಪತ್ತೆಯಾಗಿದೆ.
ಆ.2ರಂದು ರೈಲಿನಲ್ಲಿ ದರ್ಭಾಂಗದಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಆಜಾದ್ ಆಲಿ ಎಂಬವರು ರೈಲಿನಲ್ಲಿ ಪಕೋಡ ಕೊಂಡರು. ಅದನ್ನು ಅವರ ಮಗನಿಗೆ ತಿನ್ನಿಸುವ ವೇಳೆ ದೊಡ್ಡ ಕೀಟವೊಂದು ಅವರ ಕಣ್ಣಿಗೆ ಬಿದ್ದಿದೆ. “ನಾವು ಅಡುಗೆ ಕೋಣೆಯ ವ್ಯವಸ್ಥಾಪಕರಿಗೆ ಈ ಕುರಿತು ದೂರು ನೀಡಿದೆವು. ಅದಕ್ಕೆ ಅವರು ಕ್ಷಮೆ ಕೇಳಿದರು. ನಮ್ಮ ಸಹ ಪ್ರಯಾಣಿಕರೊಬ್ಬರು ಟ್ವಿಟರ್ ಮೂಲಕ ನೇರವಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ದೂರು ನೀಡಿದರು. ದೂರಿಗೆ ಕೂಡಲೇ ಸ್ಪಂದಿಸಿದ ಅವರು, ಈ ಕುರಿತು ತತ್ಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವೈದ್ಯರು ನಾವಿದ್ದ ಲ್ಲಿಗೇ ಬಂದು ಮಗನ ತಪಾಸಣೆ ನಡೆಸಿದರು’ ಎಂದಿದ್ದಾರೆ.