ಕನ್ನಡ ಸಂಘ ಸಾಂತಾಕ್ರೂಜ್: 71ನೇ ಸ್ವಾತಂತ್ರ್ಯೋತ್ಸವ
Team Udayavani, Aug 16, 2017, 2:04 PM IST
ಮುಂಬಯಿ: ನಮ್ಮ ದೇಶದ ಭವ್ಯ ಭೂಮಿಯಲ್ಲಿ ಭ್ರಾತೃತ್ವ ಭಾವ ಮೂಡಿಸಿದ ಇಲ್ಲಿನ ಸಂಸ್ಕೃತಿ-ಸಂಸ್ಕಾರವು ಮನುಕುಲದಲ್ಲಿ ಸಾಂಘಿಕತೆ ಸಾರಿದೆ. ಇಂತಹ ಭವ್ಯ ಭಾರತದಲ್ಲಿ ಸದಾಶಯ ಸಹಬಾಳ್ವೆಯ ಧರ್ಮಾಚರಣೆಯಿಂದ ಅಭಿಜಾತ ಜೀವನ ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದಲೇ ನಾವೂ ಈ ಸಂಘದ ಮುಖೇನ ಸದಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಹಮ್ಮಿಕೊಳ್ಳುವಂತಾಗಿದೆ. ಸದಸ್ಯರ ಮತ್ತು ಹಿತೈಷಿಗಳ ಸಹಯೋಗದಿಂದ ನಮ್ಮ ಸಂಘವು ಅಮೃತ ಮಹೋತ್ಸವದ ಸಂಭ್ರಮದಲ್ಲಿರುವುದೇ ಸಂಸ್ಥೆಯ ಹಿರಿಮೆಯಾಗಿದೆ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್. ವಿ. ಅಮೀನ್ ಅವರು ಅಭಿಪ್ರಾಯಿಸಿದರು.
ಆ. 15ರಂದು ವಕೋಲಾದಲ್ಲಿರುವ ಸಾಂತಾಕ್ರೂಜ್ ಕನ್ನಡ ಸಂಘದ ಕಚೇರಿಯಲ್ಲಿ ಸಂಘದ ವತಿಯಿಂದ ನಡೆದ 71ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಬ್ರಿಟಿಷರ ದಬ್ಟಾಳಿಕೆಯಿಂದ ಮುಕ್ತರೆನಿಸಿದರೂ ನಮ್ಮವರಿಗೆ ನಮ್ಮವರಿಂದಾಗುವ ದಬ್ಟಾಳಿಕೆಯೇ ಹೆಚ್ಚಾಗುತ್ತಿದೆ. ಎಲ್ಲಾ ವಿಧಗಳಿಂದಲೂ ಭ್ರಷ್ಟಾಚಾರ ಮುಕ್ತವಾಗಿ ದೇಶವು ನವನಿರ್ಮಾಣವಾಗುವಲ್ಲಿ ಭಾರತೀಯರು ಶ್ರಮಿಸಬೇಕು. ರಾಷ್ಟ್ರೀಯ ಆಚರಣೆಗಳು ಪ್ರತೀಯೋರ್ವ ಭಾರತೀಯನಿಗೂ ಅತ್ಯಮೂಲ್ಯವಾಗಿದೆ. ನಾವು ರಾಷ್ಟ್ರವನ್ನು ಗೌರವಿಸಿ ರಕ್ಷಿಸಿದಾಗಲೇ ರಾಷ್ಟ್ರವೂ ನಮ್ಮ ರಕ್ಷಣೆ ಮಾಡತ್ತದೆ. ಅದಕ್ಕಾಗಿ ವಿಶೇಷವಾಗಿ ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭಾವೈಕ್ಯತಾ ಭಾವನೆ ಮೂಡಿಸಿ ಬೆಳೆಸಬೇಕು. ಮಾನವೀಯ ನೆಲೆಗಟ್ಟಿನ ಮೇಲೆ ಸಮನ್ವಯ ದೃಷ್ಟಿಕೋನದಿಂದ ಬದುಕನ್ನು ಬೆಸೆಯುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ನುಡಿದರು.
ಸಂಘದ ಗೌರವ ಕೋಶಾಧಿಕಾರಿ ಸಿಎ ರಮೇಶ್ ಎ. ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶಿವರಾಮ ಕೋಟ್ಯಾನ್, ಜಿ. ಆರ್. ಬಂಗೇರ, ಸುಮಾ ಎಂ. ಪೂಜಾರಿ, ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸುಧಾಕರ್ ಉಚ್ಚಿಲ್, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಲಕ್ಷ್ಮೀ ಎನ್. ಕೋಟ್ಯಾನ್, ಸದಸ್ಯರಾದ ಲಿಂಗಪ್ಪ ಅಮೀನ್, ಚಂದಯ್ಯ ಪೂಜಾರಿ, ಗಿರೀಶ್ ಶೆಟ್ಟಿ, ಇರಾ ಲಾಲ್, ಶೋಭಾ ಶೆಟ್ಟಿ, ಯಾದವ ಶೆಟ್ಟಿ, ದಿವ್ಯಾ ಶೆಟ್ಟಿ, ಜೋತ್ಸಾ ಶೆಟ್ಟಿ, ಮೋನಪ್ಪ ಕರ್ಕೇರ ಹಾಗೂ ಪರಿಸರದ ಇನ್ನಿತರ ರಾಷ್ಟ್ರಪ್ರೇಮಿಗಳು ಉಪಸ್ಥಿತರಿದ್ದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಜಾತಾ ಆರ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್