“ಸರ್ವರ ಸಮ್ಮಿಲನದಿಂದ ಸಮಾಜದಲ್ಲಿ ಸಾಮರಸ್ಯ ಸಾಧ್ಯ’
Team Udayavani, Aug 23, 2017, 7:40 AM IST
ಪೆರುವಾಜೆ : ಜಾತಿ, ಮತ, ಧರ್ಮದ ಭೇದವಿಲ್ಲದೆ, ಸರ್ವರೂ ಸಮ್ಮಿಲನಗೊಂಡು ಆಚರಣೆಯಲ್ಲಿ ಪಾಲ್ಗೊಂಡಾಗ ಸಮಾಜದಲ್ಲಿ ಸಾಮ ರಸ್ಯದ ಮನೋಭಾವ ಮೂಡಲು ಸಾಧ್ಯವಾಗುತ್ತದೆ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನುಸೂಯ ಹೇಳಿದರು.
ಮುಕ್ಕೂರು-ಕುಂಡಡ್ಕ ಸಾರ್ವ ಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ರವಿವಾರ ಮುಕ್ಕೂರಿನಲ್ಲಿ ನಡೆದ 8ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ, ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಎಂಟು ವರ್ಷಗಳಿಂದ ಎಲ್ಲರೂ ಒಗ್ಗೂಡಿ ಆಚರಿಸುತ್ತಿರುವ ಮುಕ್ಕೂರಿನ ಗಣೇಶೋತ್ಸವ ಸಮಾರಂಭ ಹಬ್ಬದ ಉದ್ದೇಶವನ್ನು ನಿಜವಾದ ರೂಪದಲ್ಲಿ ಅನುಷ್ಠಾನಿಸಿದೆ ಎಂದು ಶ್ಲಾಘಿಸಿದರು.
ಸಮಾಜಕ್ಕೆ ಕೊಡುಗೆ ನೀಡಲಿ
ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದ ಪ್ರಗತಿಪರ ಕೃಷಿಕ ತಿರುಮಲೇಶ್ವರ ಭಟ್ ಮಾತನಾಡಿ, ಒಳ್ಳೆಯ ಉದ್ದೇಶ ಇಟ್ಟುಕೊಂಡು ಆರಂಭಗೊಂಡ ಸಂಘಟನೆ ಅದೇ ಹಾದಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ. ಸಂಘಟನೆ ಇನ್ನಷ್ಟು ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡು ಸಮಾಜಕ್ಕೆ ಕೊಡುಗೆ ನೀಡಲಿ ಎಂದರು.
ಸಹಕಾರ ಅತಿ ಮುಖ್ಯ
ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಯಾವುದೇ ಕಾರ್ಯಕ್ರಮದ ಯಶ ಸ್ಸಿನ ಹಿಂದೆ ಊರವರ ಸಹಕಾರ ಅತಿ ಮುಖ್ಯ. ಸಂಘಟನೆಗಳ ಸಮಾಜ ಮುಖೀ ಚಿಂತನೆಗೆ ಎಲ್ಲರೂ ಕೈ ಜೋಡಿಸಿದರೆ, ಅದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಕೆ.ಎಂ.ಬಿ. ಮಾತನಾಡಿ, ಯಾವುದೇ ಆಚರಣೆ, ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಾಗಬೇಕಾದರೆ, ಅದಕ್ಕೆ ಸಂಘಟನೆಯ ಪ್ರತಿಯೊಬ್ಬರ ಶ್ರಮ ಅತ್ಯಗತ್ಯ. ಕೇವಲ ಅಧ್ಯಕ್ಷ, ಕಾರ್ಯದರ್ಶಿಯನ್ನು ಮಾತ್ರ ಹೊಣೆಯನ್ನಾಗಿಸದೇ, ಎಲ್ಲರೂ ಜತೆಯಾಗಿ ಸಾಗಿದರೆ ಉದ್ದೇಶ ಗುರಿ ತಲುಪುತ್ತದೆ. ಮುಕ್ಕೂರಿನ ಗಣೇಶೋತ್ಸವದ ಕ್ರೀಡಾಕೂಟದ ಯಶಸ್ಸಿಗೆ ಎಲ್ಲರೂ ಒಂದಾಗಿ ದುಡಿದಿರುವುದು ಮುಖ್ಯ ಕಾರಣ ಎಂದರು.
ಸಭಾಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆನ್ನಾವರ ವಹಿಸಿದ್ದರು. ನಿವೃತ್ತ ಶಿಕ್ಷಕಿ ರಾಜೀವಿ, ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೆ.ಎಚ್. ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮಾನ, ಪ್ರತಿಭಾ ಪುರಸ್ಕಾರ
ಇದೇ ಸಂದರ್ಭ ಮುಕ್ಕೂರು ಶಾಲಾ ನಿವೃತ್ತ ಶಿಕ್ಷಕಿ ರಾಜೀವಿ ಅವ ರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಆಯುಷ್ ರೈ ಕುಂಜಾಡಿ, ಅಂಜಲಿ ಎಂ., ಸವಿತಾ ಎ., ಸುಶ್ಮಿತಾ ಕೊಂಡೆಪ್ಪಾಡಿ, ಸ್ಫೂರ್ತಿ ರೈ ಕಾಪು, ಸುದರ್ಶನ್ ಡಿ.ಪಿ., ಸ್ವಸ್ತಿಕ್ ಜೆ.ಪಿ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿದ ರಾಜೀವಿ ಹಾಗೂ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳು ಕೃತಜ್ಞತೆ ನುಡಿಗಳನ್ನಾ ಡಿದರು.
ವಿವಿಧ ಸ್ಪರ್ಧೆಗಳು
ಇದೇ ಸಂದರ್ಭ ಪುರುಷರ ವಿಭಾಗದಲ್ಲಿ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ಮಹಿಳಾ ವಿಭಾಗದಲ್ಲಿ ತ್ರೋಬಾಲ್, ಹಗ್ಗಜಗ್ಗಾಟ, ಸಂಗೀತ ಕುರ್ಚಿ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆದವು.
ರಕ್ಷಿತಾ ಅಡ್ಯತಕಂಡ, ಪ್ರೀತಿಕಾ ಕಾಡುತೋಟ ಸಮ್ಮಾನ ಪತ್ರ, ಬಹುಮಾನ ಪಟ್ಟಿ ವಾಚಿಸಿದರು. ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸ್ವಾಗತಿಸಿದರು. ಕಾರ್ಯದರ್ಶಿ ರಕ್ಷಿತ್ ಗೌಡ ಒರುಂಕು ವಂದಿಸಿದರು. ಶಿಕ್ಷಕ ಶಶಿಕುಮಾರ್ ಬಿ.ಎನ್. ಮತ್ತು ಉಪನ್ಯಾಸಕಿ ಸೀಮಾ ಕೆ ನಿರೂಪಿಸಿದರು.
ಸಮಾಜ ಪರ ಚಿಂತನೆ
ಖ್ಯಾತ ಚರ್ಮತಜ್ಞ ಡಾ| ನರಸಿಂಹ ಶರ್ಮಾ ಮಾತನಾಡಿ, ವಿದ್ಯಾರ್ಥಿಗಳ, ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಅತ್ಯುತ್ತಮವಾದದು. ಇದರಿಂದ ಅವರು ಬೆಳೆಯುತ್ತಾರೆ. ಇಂತಹ ಸಮಾಜ ಪರ ಚಿಂತನೆ ಅವರಲ್ಲೂ ಮೂಡಲು ಸಾಧ್ಯವಾಗುತ್ತದೆ ಎಂದರು.