ಮೋಡ ಬಿತ್ತನೆಗೆ ಹಿಡಿದ ಗ್ರಹಣ
Team Udayavani, Aug 22, 2017, 5:23 PM IST
ಯಾದಗಿರಿ: ಮಳೆ ಕೊರತೆಯಿಂದ ರಾಜ್ಯ ಸರಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಜಿಲ್ಲೆಯ ಸುರಪುರ ತಾಲೂಕನ್ನು ಆಯ್ಕೆ ಮಾಡಿದೆ. ಆದರೆ ಮೋಡ ಬಿತ್ತನೆಗೆ ಕೈಗೊಳ್ಳಬೇಕಾದ ಲಕ್ಷಣ ಇನ್ನೂವರೆಗೆ ಕಂಡು ಬಂದಿಲ್ಲ. ಸುರಪುರಲ್ಲಿ ಆ. 18ರಂದು ಮೋಡ ಬಿತ್ತನೆ ಕಾರ್ಯ ನಡೆಯುತ್ತದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇಇ ಮಲ್ಲಿಕಾರ್ಜುನ ಜೇರಟಗಿ ತಿಳಿಸಿದ್ದರು. ಆದರೆ ಸುರಪುರ ತಾಲೂಕಿನಲ್ಲಿ ಮೋಡ ಬಿತ್ತನೆಗೆ ಮಾತ್ರ ಗ್ರಹಣ ಹಿಡಿದಿದ್ದು, ರಾಡಾರ್, ಇಂಟರ್ನೆಟ್ ಟಾವರ್ ಆಳವಡಿಕೆ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಮೋಡ ಬಿತ್ತನೆಗೆ ಇನ್ನು ಒಂದು ವಾರ ಸಮಯ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರಕಾರ ಜೂನ್ ಅಥವಾ ಜುಲೈ
ತಿಂಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಬೇಕಿತ್ತು. ವಿಳಂಬವಾಗಿ ಮೋಡ ಬಿತ್ತನೆಗೆ ಮುಂದಾಗಿದ್ದು, ಆ ಕಾರ್ಯ ಕೂಡ ಇನ್ನೂ ಆರಂಭವಾಗಿಲ್ಲ. ಮೋಡ ಬಿತ್ತನೆಗೆ ಸುರಪುರ ಪಟ್ಟಣದ ರಬಾರ್ ಹಾಲ್ ಎದುರಿನ ಖಾಲಿ ಜಾಗದಲ್ಲಿ ರಾಡಾರ್, ಇಂಟರ್ನೆಟ್ ಟಾವರ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ರಾಡಾರ್ ಅಳವಡಿಸಿದ ನಂತರ ಮೋಡ ಬಿತ್ತನೆ ಕಾರ್ಯ ನಡೆಯುತ್ತದೆ. ಆದ್ದರಿಂದ ಈ ಎಲ್ಲ ಕೆಲಸ ಮುಗಿಯಬೇಕಾಗಿದ್ದರಿಂದ ಮೋಡ ಬಿತ್ತನೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮೋಡ ಬಿತ್ತನೆಗೆ ಚಾಲನೆ ನೀಡಿದ್ದಾರೆ. ಇನ್ನೂ ಗದಗ ಹಾಗೂ ಸುರಪುರ ತಾಲೂಕಿನಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಬೇಕಾಗಿದ್ದು, ದಿನಾಂಕ ಮಾತ್ರ ಇನ್ನೂ ನಿಗದಿ ಆಗದಿರುವುದರಿಂದ ಸ್ಥಳೀಯ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ರಾಜೇಶ ಪಾಟೀಲ್ ಯಡ್ಡಳಿ