ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ಪೂಜಾರ ಗೈರು
Team Udayavani, Aug 29, 2017, 1:04 PM IST
ಹೊಸದಿಲ್ಲಿ: ಮಂಗಳವಾರ ನಡೆಯುವ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾರತದ ಟೆಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ತಪ್ಪಿಸಿಕೊಳ್ಳಲಿದ್ದಾರೆ. ಸದ್ಯ ಇಂಗ್ಲೆಂಡ್ನಲ್ಲಿರುವ ಅವರು ನಾಟಿಂಗಂಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡುತ್ತಿರುವುದೇ ಇದಕ್ಕೆ ಕಾರಣ.
ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದಿರುವ ಪೂಜಾರ ಅವರನ್ನು ಈ ಸಾಲಿನ “ಅರ್ಜುನ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಅವರು ಪ್ರಸಕ್ತ ಋತುವಿನಲ್ಲಿ ಪುರುಷರ ಕ್ರಿಕೆಟ್ ವಿಭಾಗದಿಂದ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಆಟಗಾರ. ವನಿತಾ ವಿಭಾಗದಿಂದ ಹರ್ಮನ್ಪ್ರೀತ್ ಕೌರ್ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.
“ದುರದೃಷ್ಟವಾಶಾತ್ ಈ ಪ್ರತಿಷ್ಠಿತ ಸಮಾರಂಭದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಇಂಗ್ಲಿಷ್ ಕೌಂಟಿಯೊಂದಿಗಿನ ಒಡಂಬಡಿಕೆಯೇ ಇದಕ್ಕೆ ಕಾರಣ. ಕ್ರಿಕೆಟ್ ಒಂದು ಅದ್ಭುತ ಆಟವಾಗಿದ್ದು, ಇದಕ್ಕೆ ನಾನು ತೋರುತ್ತಿರುವ ಬದ್ಧತೆಯೇ ಈ ಪ್ರಶಸ್ತಿ ಒಲಿಯಲು ಕಾರಣ. ನಿಮ್ಮ ಬೆಂಬಲ, ಹಾರೈಕೆ ಸದಾ ನನ್ನ ಮೇಲಿರಲಿ’ ಎಂದು ಪೂಜಾರ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ.