ಕರ್ನಾಟಕ ಪ್ರೀಮಿಯರ್ ಲೀಗ್: ಟೈಗರ್ ಮಣಿಸಿದ ಮೈಸೂರು
Team Udayavani, Sep 15, 2017, 9:15 AM IST
ಹುಬ್ಬಳ್ಳಿ: ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಮೈಸೂರು ವಾರಿಯರ್ ಕೆಪಿಎಲ್ ನಲ್ಲಿ ಹುಬ್ಬಳ್ಳಿ ಟೈಗರ್ ವಿರುದ್ಧ 3 ವಿಕೆಟ್ ಜಯ ಸಾಧಿಸಿದೆ.
ಇಲ್ಲಿನ ರಾಜನಗರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 154 ರನ್ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಮೈಸೂರು ತಂಡ 19.4 ಓವರ್ಗೆ 7 ವಿಕೆಟ್ ಕಳೆದುಕೊಂಡು 156 ರನ್ ಬಾರಿಸಿ ಗೆಲುವು ಸಾಧಿಸಿತು.
ಮೈಸೂರು ಪರ ಎನ್.ಪಿ.ಭರತ್, ಅರ್ಜುನ್ ಹೋಯ್ಸಳ, ಶ್ರೇಯಸ್ ಗೋಪಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣರಾದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಭರತ್ 32 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್ ಸೇರಿದಂತೆ 52 ರನ್ ಬಾರಿಸಿದರು. ಉಳಿದಂತೆ ಅರ್ಜುನ್ (32), ಶ್ರೇಯಸ್ ಗೋಪಾಲ್(19) ತಂಡದ ಗೆಲುವಿಗೆ ನೆರವಾದರು. ಹುಬ್ಬಳ್ಳಿ ಪರ ರಿತೇಶ್ ಭಟ್ಕಳ್, ಕ್ರಾಂತಿ ಕುಮಾರ್ ತಲಾ 2 ವಿಕೆಟ್ ಪಡೆದರು.
ಹುಬ್ಬಳ್ಳಿ ಟೈಗರ್ಗೆ ಮಾಯಾಂಕ್ ಆಸರೆ:
ಆರಂಭಿಕ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ವಾಲ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಹುಬ್ಬಳ್ಳಿ ತಂಡ ಎದುರಾಳಿಗೆ 155 ರನ್ ಗುರಿ ನೀಡಿತ್ತು. ಆರಂಭಿಕರಾಗಿ ಮಾಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ರೆಡ್ಡಿ ಕಣಕ್ಕೆ ಇಳಿದರು. ಆದರೆ ಈ ಜೋಡಿ 12 ರನ್ ಸೇರಿಸುತ್ತಿದ್ದಂತೆ ಅಭಿಷೇಕ್ ವಿಕೆಟ್ ಕಳೆದುಕೊಂಡರು. ನಂತರ ಬಂದ ಕೆ.ಸಿದ್ಧಾರ್ಥ (12), ಪ್ರವೀಣ್ (8) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಒಂದು ಕಡೆ ಮಾಯಾಂಕ್ ಕೂಡ ಭರ್ಜರಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಹೀಗಾಗಿ ಒಂದು ಕಡೆ ವಿಕೆಟ್ ಹೋಗುತ್ತಿದ್ದರೂ ಮತ್ತೂಂದುಕಡೆ ಸ್ಕೋರ್ ಏರಿಕೆಯಾಗುತ್ತಿತ್ತು.
ಮಾಯಾಂಕ್ಗೆ ತಕ್ಕ ಮಟ್ಟಿಗೆ ನಾಯಕ ವಿನಯ್ ಕುಮಾರ್ ಸಾಥ್ ನೀಡಿದರು. ಆದರೆ ತಂಡದ ಮೊತ್ತ 112 ರನ್ ಆಗಿರುವಾಗ ಸುಚಿತ್ ಎಸೆತದಲ್ಲಿ ಮಾಯಾಂಕ್ ವಿಕೆಟ್ ಕಳೆದುಕೊಂಡರು. ಮಾಯಾಂಕ್ 46 ಎಸೆತದಲ್ಲಿ 68 ರನ್ ಬಾರಿಸಿದರು. ಅವರ ಆಟದಲ್ಲಿ 9 ಬೌಂಡರಿ, 1 ಸಿಕ್ಸರ್ ಸೇರಿತ್ತು. ವಿನಯ್ ಕುಮಾರ್ 17 ಎಸೆತದಲ್ಲಿ 1 ಸಿಕ್ಸರ್ ಸೇರಿದಂತೆ 21 ರನ್ ಬಾರಿಸಿ ಔಟ್ ಆದರು. ಕೊನೆಯ ಕ್ಷಣದಲ್ಲಿ ರೋಹಿತ್ ಕುಮಾರ್(14) ಮಿಂಚಿನ ಆಟ ಪ್ರದರ್ಶಿಸಿದರು. ಇದರಿಂದಾಗಿ ಹುಬ್ಬಳ್ಳಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು.
ಮೈಸೂರು ಬಿಗು ದಾಳಿ: ಮೈಸೂರು ತಂಡದ ಬೌಲರ್ಗಳು ಹುಬ್ಬಳ್ಳಿ ತಂಡದ ಬ್ಯಾಟ್ಸ್ಮನ್ಗಳ ಬೆವರಿಳಿಸಿದರು. ಮಾಯಾಂಕ್ ಬಿಟ್ಟರೆ ಉಳಿದವರಿಗೆ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ. ವಿಜಯ್ ಕುಮಾರ್ 2 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್, ಕೌಶಿಕ್, ಭರತ್, ಸುಚಿತ್, ಅಕ್ಷಯ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಹುಬ್ಬಳ್ಳಿ ಟೈಗರ್: 20 ಓವರ್, 154/7 (ಮಾಯಾಂಕ್ ಅಗರ್ವಾಲ್ 68, ವಿನಯ್ ಕುಮಾರ್ 21, ವಿಜಯ್ ಕುಮಾರ್ 29ಕ್ಕೆ 2).
ಮೈಸೂರು ವಾರಿಯರ್: 19.4 ಓವರ್ ಗೆ 156/7(ಭರತ್ 52, ಅರ್ಜುನ್ 32, ಕ್ರಾಂತಿ ಕುಮಾರ್ 19ಕ್ಕೆ 2).
ವಿಶ್ವನಾಥ ಕೋಟಿ