ಆರ್ಥಿಕ ಸಂಕಷ್ಟ : ತೆಲಂಗಾಣದ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ
Team Udayavani, Sep 18, 2017, 11:43 AM IST
ಹೈದರಾಬಾದ್ : ತೆಲಂಗಾಣದ ಸೂರ್ಯಪೆಟ್ ಪಟ್ಟಣದಲ್ಲಿನ ಮನೆಯೊಂದರಲ್ಲಿ ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ಒಟ್ಟು ಆರು ಮಂದಿ ಸತ್ತು ಬಿದ್ದಿರುವುದು ಇಂದು ಬೆಳಗ್ಗೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಆರೂ ಮಂದಿಯ ಸಾವು ಆತ್ಮಹತ್ಯೆಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದ ನಾಲ್ವರು ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಿನ್ನೆ ಭಾನುವಾರ ರಾತ್ರಿ ನಾಲ್ಕು ಹಾಗೂ ಎರಡು ವರ್ಷ ಪ್ರಾಯ ಮಕ್ಕಳಿಬ್ಬರಿಗೆ ಕೀಟನಾಶಕ ತಿನ್ನಿಸಿ ಅವರ ಸಾವಿಗೆ ಕಾರಣರಾಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಈ ಕುಟುಂಬವು ತೀವ್ರ ಆರ್ಥಿಕ ತೊಂದರೆಯಿಂದ ಬಳಲುತ್ತಿತ್ತೆಂದು ಹೇಳಲಾಗಿದೆ.
ಮೃತರನ್ನು ಕಸ್ತೂರಿ ಜನಾರ್ದನ್, ಆತನ ಪತ್ನಿ ಕೆ ಚಂದ್ರಕಲಾ (ಇವರಿಬ್ಬರೂ 55ರ ಆಸುಪಾಸಿನವರು), ಇವರ ಸೊಸೆ ಪ್ರಭಾತಾ (30) ಮತ್ತು ಆಕೆಯ ಇಬ್ಬರು ಮಕ್ಕಳು ಮತ್ತು ಜನಾರ್ದನ್ ಅವರ ಅವರ ಪುತ್ರ ಕೆ ಅಶೋಕ್ (26) ಎಂದು ಗುರುತಿಸಲಾಗಿದೆ.
ದಂಪತಿಯ ಹಿರಿಯ ಪುತ್ರ ಸುರೇಶ್ ಮತ್ತು ಪ್ರಭಾತಾ ಳ ಗಂಡ ನಾಪತ್ತೆಯಾಗಿದ್ದಾರೆ ಎಂದು ಇನ್ಸ್ಪೆಕ್ಟರ್ ವೈ ಮುಗಲಯ್ಯ ತಿಳಿಸಿದ್ದಾರೆ.
ಆ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಇಂದು ಬೆಳಗ್ಗೆ ಗೊತ್ತಾಯಿತು. ಇವರೆಲ್ಲರ ಮೃತ ದೇಹಗಳು ಮನೆಯ ಒಂದೇ ಕೋಣೆಯಲ್ಲಿ ಬಿದ್ದಿದ್ದವು.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಸುರೇಶನು ಹಲವರಿಂದ ಭಾರೀ ದೊಡ್ಡ ಪ್ರಮಾಣದ ಸಾಲ ಪಡೆದಿದ್ದ ಮತ್ತು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.