ಶ್ರೀ ಜಗದಂಬಾ ಮಂದಿರ: ಪಲಿಮಾರು ಶ್ರೀಗಳ ಆಶೀರ್ವಚನ
Team Udayavani, Oct 4, 2017, 12:27 PM IST
ಡೊಂಬಿವಲಿ: ಮರಾಠಿ ಮಣ್ಣಿನಲ್ಲಿ ತಮ್ಮ ತಾಯ್ನಾಡಿನ ಧರ್ಮ, ಸಂಸ್ಕೃತಿ ಹಾಗೂ ಕಲೆಯ ಕಂಪನ್ನು ಬೀರುತ್ತಿರುವ ತುಳು-ಕನ್ನಡಿಗರ ಮಾತೃ ಭಕ್ತಿ ಅನನ್ಯವಾಗಿದೆ. ಇದಕ್ಕೆ ಡೊಂಬಿವಲಿ ಯಕ್ಷಕಲಾ ಸಂಸ್ಥೆಯ ಕಾರ್ಯವೇ ಸಾಕ್ಷಿಯಾಗಿದೆ. ಸಂಘದ ಕಾರ್ಯಾಲಯಕ್ಕಾಗಿ ಪಡೆದ ನಿವೇಶನದಲ್ಲಿ ಜಗನ್ಮಾತೆ ಜಗದಂಬೆಯ ಮಂದಿರ ನಿರ್ಮಿಸುವ ಮೂಲಕ ಮಾತೆಗೆ ಮನೆ ನಿರ್ಮಿಸಿಕೊಟ್ಟ ಹೆಗ್ಗಳಿಕೆ ಯಕ್ಷಕಲಾ ಸಂಸ್ಥೆಯದ್ದಾಗಿದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಸೆ. 28ರಂದು ಸಂಜೆ ಡೊಂಬಿವಲಿ ಪಶ್ಚಿಮದ ಯಕ್ಷಕಲಾ ಸಂಸ್ಥೆಯ ಆಯೋಜಿಸಿದ ಶ್ರೀ ಜಗದಂಬಾ ಮಂದಿರದ 3ನೇ ನವರಾತ್ರಿ ಉತ್ಸವದ ಸಂದರ್ಭ ಮಂದಿರಕ್ಕೆ ಆಗಮಿಸಿ ಆಶೀರ್ವಚನ ನೀಡಿದ ಶ್ರೀಗಳು, ಹೆಚ್ಚುತ್ತಿರುವ ಮೊಬೈಲ್ ಹಾವಳಿಯಿಂದ ಇಂದು ಜೀವನವೇ ದುಸ್ತರವಾಗುತ್ತಿದೆ. ಮಂದಿರಕ್ಕೆ ಬರುವಾಗ ಭಕ್ತಾದಿಗಳು ಮೊಬೈಲ್ನಿಂದ ದೂರವಿದ್ದರೆ ಪರಮಾತ್ಮ ನಮ್ಮ ಹತ್ತಿರಕ್ಕೆ ಬರುತ್ತಾನೆ. ಮುಂಬರುವ ದಿನಗಳಲ್ಲಿ 3 ವರ್ಷಗಳ ಹಿಂದೆ ನಿರ್ಮಿತವಾದ ಜಗದಂಬೆಯ ಈಮಂದಿರ ಭಕ್ತರ ಶ್ರದ್ಧಾಕೇಂದ್ರವಾಗಿ, ಕಾರಣಿಕಕ್ಷೇತ್ರವಾಗಿ ಕಂಗೊಳಿಸುವುದಲ್ಲಿ ಯಾವುದೇ ಸಂಶಯವಿಲ್ಲ. ತನ್ನ ಎರಡನೇ ಪರ್ಯಾಯ ಉತ್ಸವವು ಜ. 18ರಂದು ಪ್ರಾರಂಭವಾಗಲಿದ್ದು, 2 ವರ್ಷಗಳ ಈ ಅವಧಿಯಲ್ಲಿ ಶ್ರೀಕೃಷ್ಣನ ದ್ವಾರಕೆಯು ಅಂದಿನ ಗತ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಉಡುಪಿಯ ಶ್ರೀಕೃಷ್ಣನ ಗೋಪುರಕ್ಕೆ ಬಂಗಾರದ ಕವಚ ತೊಡಿಸುವುದು, ರಾಷ್ಟ್ರದ ವಿವಿಧೆಡೆಗಳಿಂದ ಭಜನ ಮಂಡಳಿಗಳನ್ನು ಉಡುಪಿಗೆ ಆಹ್ವಾನಿಸಿ ನಿತ್ಯನಿರಂತರ ಶ್ರೀಕೃಷ್ಣ ಸಂಕೀರ್ತನೆ ನಡೆಸುವುದು ಮೊದಲಾದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು ಸಹಕರಿಸಿ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು.
ಮಂದಿರದ ಅಧ್ಯಕ್ಷ ದಿವಾಕರ ರೈ ದಂಪತಿ ಹಾಗೂ ನೂರಾರು ಭಕ್ತಾದಿಗಳು ಶ್ರೀಗಳನ್ನು ಸ್ವಾಗತಿಸಿದರು. ಮಹಿಳೆಯರು ಕಲಶದೊಂದಿಗೆ, ಪುಷ್ಪವೃಷ್ಟಿಗೈದು ಶ್ರೀಗಳನ್ನು ಸ್ವಾಗತಿಸಿದರು. ವಿವಿಧ ವಾದ್ಯಘೋಷದೊಂದಿಗೆ ಶ್ರೀಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಸಂಸ್ಥೆಯ ಅಧ್ಯಕ್ಷ ದಿವಾಕರ ರೈ ಹಾಗೂ ಶರ್ಮಿಳಾ ರೈ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಿವಾಕರ ರೈ, ಪಲಿಮಾರು ಮಠಾಧೀಶರ ಆಗಮನ ನಮಗೆ ಒಂದು ರೀತಿಯ ಭಾಗ್ಯ ಎಂದೇ ಹೇಳಬಹುದು. ಗುರುಗಳ ಆಗಮನದಿಂದ ಆನಂದವಾಗುತ್ತಿದ್ದು, ಶ್ರೀಗಳ ಸಂಕಲ್ಪ ಸಿದ್ಧಿಗಾಗಿ ಸಕಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ಶ್ರೀ ಜಗದಂಬಾ ಮಂದಿರದ ಪದಾಧಿಕಾರಿಗಳಾದ ಹರೀಶ್ ಶೆಟ್ಟಿ, ದಿವಾಕರ ರೈ, ರಾಜೇಶ್ ಕೋಟ್ಯಾನ್, ನಾಗರಾಜ ಮೊಗವೀರ, ಸುರೇಶ್ ಶೆಟ್ಟಿ ಶೃಂಗೇರಿ, ಮಾಧವ ಪೂಜಾರಿ, ರವೀಂದ್ರ ವೈ. ಶೆಟ್ಟಿ, ವೇ.ಮೂ. ಗುರುಪ್ರಸಾದ್ ಭಟ್, ರಾಜಗೋಪಾಲಾಚಾರ್ಯ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ಭಕ್ತಾದಿ ಗಳನ್ನು ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ