ರಾ.ಹೆ. 169 ಭೂ ಸ್ವಾಧೀನ ಪ್ರಕ್ರಿಯೆ: ದುರಸ್ತಿಗೆ 100 ಕೋ.ರೂ. ಬೇಡಿಕೆ
Team Udayavani, Oct 5, 2017, 11:14 AM IST
ಉಡುಪಿ: ರಾಷ್ಟ್ರೀಯ ಹೆದ್ದಾರಿ 169 (ಮಲ್ಪೆ- ತೀರ್ಥಹಳ್ಳಿ ರಸ್ತೆ) ಅಗಲೀಕರಣ ನಿಮಿತ್ತ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಇದರ ಅಂಗವಾಗಿ ಅಧಿಸೂಚನೆ ಹೊರಡಿಸಲಾಗಿದ್ದು ಮೇ 31ರ ಗಜೆಟ್ನಲ್ಲಿ ಪ್ರಕಟಗೊಂಡಿರುತ್ತದೆ. ಇದರಲ್ಲಿ ಅಗಲೀಕರಣಕ್ಕೆ ಬೇಕಾಗುವ ಸ್ಥಳದ ಗ್ರಾಮವಾರು ಮಾಹಿತಿ, ಪೊಲೀಸ್ ಠಾಣಾವಾರು ಗಡಿಗಳು ಮೊದಲಾದ ವಿವರಗಳು ಒಳಗೊಂಡಿರುತ್ತವೆ ಎಂದು ಸಂಸದೆ ತಿಳಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆಯಡಿ ಸ್ವಾಧೀನಪಡಿಸಿಕೊಳ್ಳ ಲಾಗುವ ಸ್ಥಳದ ಪ್ರತೀ ಗ್ರಾಮದ ಸರ್ವೆ ನಂಬರ್ವಾರು ವಿಸ್ತೀರ್ಣದ ನಿಖರವಾದ ವಿವರಗಳುಳ್ಳ ಅಧಿಸೂಚನೆ ಹೊರಡಿಸಲು ಎಲ್ಲಾ ಪೂರ್ವಸಿದ್ಧತೆಗಳು ಆಗಿದ್ದು ಕೇಂದ್ರ ಸರಕಾರದ ಗಜೆಟ್ನಲ್ಲಿ ಶೀಘ್ರದಲ್ಲಿಯೇ ಪ್ರಕಟಿಸ ಲಾಗುವುದು. ಅದಾದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ. ಪ್ರಸ್ತುತ ಕೆಟ್ಟುಹೋಗಿರುವ ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಪರ್ಕಳ ಬಿಇಎಂ ಶಾಲೆಯವರೆಗಿನ ಭಾಗದ ತುರ್ತು ದುರಸ್ತಿ ಕಾರ್ಯವನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಂತಹ ಅನುದಾನ ಹೊಂದಿಸಿಕೊಂಡು ಶೀಘ್ರ ಪೂರ್ಣಗೊಳಿಸಲಾಗುವುದು. ಈ ಬಗ್ಗೆ ಸೆ. 25ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಕೆಟ್ಟು ಹೋದ ಭಾಗಗಳ ಸಮಗ್ರ ದುರಸ್ತಿಗಾಗಿ 100 ಕೋ.ರೂ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆ ಯಿಂದಾಗಿ ಪರ್ಕಳ – ಮಣಿಪಾಲ ಭಾಗದ ದುರಸ್ತಿ ಕಾರ್ಯ ವಿಳಂಬವಾಗಿದೆ ಎಂದು ಸಂಸದೆ ತಿಳಿಸಿದ್ದಾರೆ.