ಸಮಾಜದ ಹಿತಕ್ಕಾಗಿ ಒಂದೆಜ್ಜೆ ಮುಂದಿಡಿ: ಬಸವರಾಜ ಹೊರಟ್ಟಿ
Team Udayavani, Nov 2, 2017, 7:45 AM IST
ಹುಬ್ಬಳ್ಳಿ: “ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಯಾರಧ್ದೋ ವಿರುದ್ಧ ಅಥವಾ ಯಾರಧ್ದೋ ಪ್ರತಿಷ್ಠೆಯ ವಿಷಯವಲ್ಲ. ಬದಲಾಗಿ ಸಮಾಜದ ಸರ್ವತೋಮುಖ ಹಿತಾಸಕ್ತಿಯ ಪ್ರತೀಕವಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆ ಸಲ್ಲಿಕೆ ನಿಟ್ಟಿನಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಒಂದು ಹೆಜ್ಜೆ ಮುಂದಿಡಲಿ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಶಾಮನೂರು ಶಿವಶಂಕರಪ್ಪ ಅವರಿಗೆ ಪತ್ರ ಬರೆದಿರುವ ಅವರು, ವೀರಶೈವ-ಲಿಂಗಾಯತ ಎಂದು ಸ್ವತಂತ್ರ ಧರ್ಮಕ್ಕೆ 2013ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಗೆ ಮನ್ನಣೆ ಸಿಕ್ಕಿಲ್ಲವಾಗಿದೆ. ಸಮಾಜಕ್ಕೆ ಉತ್ತಮ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಒಮ್ಮೆ ಯಾಕೆ “ಲಿಂಗಾಯತ’ ಎಂದಷ್ಟೇ ಪ್ರಸ್ತಾವನೆ ಸಲ್ಲಿಸಿ ಸ್ವತಂತ್ರ ಧರ್ಮದ ಬೇಡಿಕೆ ಮಂಡಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಸ್ವತಂತ್ರ ಧರ್ಮದ ವಿಚಾರದಲ್ಲಿ ನನಗೆ ಹಾಗೂ ತಮಗೆ ಯಾವುದೇ ರಾಜಕೀಯ ಲಾಭದ ಉದ್ದೇಶ ಅಥವಾ ವೈಯಕ್ತಿಕ ಹಿತಾಸಕ್ತಿ ಯಂತೂ ಇಲ್ಲವೇ ಇಲ್ಲ. ಅದೇನಿದ್ದರೂ ಸಮಾಜದ ಸರ್ವತೋಮುಖ ಹಿತಾಸಕ್ತಿಯದ್ದಾಗಿದ್ದು, ಈ ಬಗ್ಗೆ ಚಿಂತಿಸಿ ನಿರ್ಧಾರ ಕೈಗೊಳ್ಳಿ ಎಂದು ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.