ನಿಷೇಧಾಜ್ಞೆ ಮಧ್ಯೆಯೂ ನಡೀತು ಕಾಂಗ್ರೆಸ್ ಕಾರ್ಯಕಾರಿಣಿ!
Team Udayavani, Nov 8, 2017, 5:53 PM IST
ಚಿತ್ರದುರ್ಗ: ಟಿಪ್ಪು ಜಯಂತಿ ಪರ-ವಿರೋಧ ಹೇಳಿಕೆಗಳು, ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನ. 7ರ ಬೆಳಗ್ಗೆ 6ರಿಂದ ನ. 10ರ ಮಧ್ಯರಾತ್ರಿ 12 ಗಂಟೆವರೆಗೆ ನಗರ ಸೇರಿದಂತೆ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೂ ಜಿಲ್ಲಾ ಕಾಂಗ್ರೆಸ್ ಇದನ್ನು ಗಣನೆಗೆ ತೆಗೆದುಕೊಳ್ಳದೆ ನಗರದ ವೀರಸೌಧದಲ್ಲಿ ಕಾರ್ಯಕಾರಿಣಿ ಸಭೆಯನ್ನು ಮಂಗಳವಾರ
ನಡೆಸಿತು.
ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಮುಂಬರುವ 2018ರ ವಿಧಾನಸಭಾ ಚುನಾವಣೆ ಕುರಿತು ಯಾವ ಕಾರ್ಯ ತಂತ್ರಗಳನ್ನು ಮಾಡಬೇಕು, ಪಕ್ಷದ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಏನು ಮಾಡಬೇಕು. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಹೇಗೆ ಪರಿಣಾಮಕಾರಿಯಾಗಿಸಬೇಕು. ಮಹಿಳಾ ವಿಭಾಗ, ಕಾಂಗ್ರೆಸ್ ವಿವಿಧ ಸೆಲ್ಗಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಪಾಠ ಮಾಡುತ್ತಿದ್ದರು. ಈ ವಿಷಯ ಬಿಜೆಪಿ, ಬಜರಂಗ ದಳ, ಎಬಿವಿಪಿ ಮತ್ತಿತರ ಸಂಘಟನೆ ಪ್ರಮುಖರಿಗೆ ಗೊತ್ತಾಯಿತು. ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ
ಐದು ಜನರು ಒಂದು ಕಡೆ ಸೇರುವಂತಿಲ್ಲ, ಈ ಸಂದರ್ಭದಲ್ಲಿ ಹೋರಾಟ, ಪ್ರತಿಭಟನೆ, ಸಭೆ, ಸಮಾರಂಭ ನಡೆಸುವಂತಿಲ್ಲ, ದೇಶದ್ರೋಹದಂತಹ ಘೋಷಣೆ, ಕೋಮು ವಿರೋಧಿ ಘೋಷಣೆಗಳನ್ನು ಕೂಗುವಂತಿಲ್ಲ. ಗುಂಪು ಗುಂಪಾಗಿ ಸೇರುವಂತಿಲ್ಲ. ಬೈಕ್ ರ್ಯಾಲಿ ನಡೆಸುವಂತಿಲ್ಲ. ನ. 10ರವರೆಗೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಹಾಗಾದರೆ ಕಾಂಗ್ರೆಸ್ ಪಕ್ಷದವರಿಗೆ ಹೇಗೆ ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುರೇಶ್ ಸೇರಿದಂತೆ ಜಿಲ್ಲಾದ್ಯಂತ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ಬಂಧಿ ಸಿದ ಪೋಲಿಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ ಎಂದು ದೂರಿದರು. ಕಾನೂನು ಉಲ್ಲಂಘನೆ ಮಾಡಿದರೂ ಕಾಂಗ್ರೆಸ್ ಕಾರ್ಯಕರ್ತರನ್ನು ಏಕೆ ಪೊಲೀಸರು ಬಂಧಿಸಲಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದರು. ಇದರಿಂದ ಎಚ್ಚೆತ್ತ ಪೊಲೀಸರು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು.