ಕ್ರೂಸರ್-ಟ್ಯಾಂಕರ್ ಡಿಕ್ಕಿ: 5 ಸಾವು
Team Udayavani, Nov 22, 2017, 8:14 AM IST
ಕಲಬುರಗಿ: ಕ್ರೂಸರ್ ವಾಹನಕ್ಕೆ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಕಲಬುರಗಿ-ಬೀದರ್ ರಾಷ್ಟ್ರೀಯ ಹೆದ್ದಾರಿ ಅವರಾದ ಬಿ ಗ್ರಾಮದ ಬಳಿ ನಡೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಭಾರ್ಸಿ ತಾಲೂಕಿನ ವೈರಾಗ್ ಗ್ರಾಮದ ಗಂಗಾಧರ ಶೀಲವಂತ, ಭೀಮಾಶಂಕರ
ಶೀಲವಂತ ಮತ್ತು ಪುತ್ರ ಉಜ್ವಲ ಶೀಲವಂತ ಸ್ಥಳದಲ್ಲೇ ಮೃತಪಟ್ಟರೆ, ಆನಂದ ಶೀಲವಂತ ಮತ್ತು ಪ್ರಜ್ವಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಕಾಶ, ರೋಹಿತ್, ನಾಗರಾಜ ಹಾಗೂ ಮಹಾಂತೇಶ ಶೀಲವಂತ ಎನ್ನುವರು ಗಂಭೀರ ಗಾಯಗೊಂಡಿದ್ದಾರೆ. ಚಿಂಚೋಳಿ ತಾಲೂಕಿನ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವೈರಾಗ್ ಗ್ರಾಮದ ಸೋಮನಾಥ ಶೀಲವಂತ ಅವರ ಮದುವೆಗೆ ಇವರೆಲ್ಲರೂ ಕ್ರೂಸರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು ಅಪಘಾತ ನಡೆದಿದೆ.
ಬೆಳ್ಳಂಬೆಳಗ್ಗೆ ನಡೆದ ಅಪಘಾತದಲ್ಲಿ ಕ್ರೂಸರ್ ಮೇಲ್ಭಾಗ ಕಿತ್ತು ಹೋಗಿ ನಜ್ಜುಗುಜ್ಜಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.