ಪ್ರತಾಪ್ ಸಿಂಹ ವಿರುದ್ಧ ಮೊಕದಮೆಗೆ ನಿರ್ಧಾರ
Team Udayavani, Nov 24, 2017, 9:42 AM IST
ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಟ್ವಿಟರ್ಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಬಹುಭಾಷಾ ನಟ ಪ್ರಕಾಶ್ ರೈ ನಿರ್ಧರಿಸಿದ್ದು, ಈ ಕುರಿತು ನೋಟಿಸ್ ಕಳುಹಿಸಿದ್ದಾರೆ. ಜತೆಗೆ, ಫೋಟೋಗಳನ್ನು ಬಳಸಿಕೊಂಡು ಮತ್ತೂಬ್ಬರ ಬಗ್ಗೆ ಹಾಸ್ಯಾಸ್ಪದ ಹೇಳಿಕೆಗಳನ್ನು ಹಾಕಿ ಪ್ರಚಾರ ಪಡೆಯುತ್ತಿದ್ದ ಟ್ರೋಲ್ ಗಳ ವಿರುದ್ಧವೂ ಹರಿಹಾಯ್ದಿರುವ ಪ್ರಕಾಶ್ ರೈ, “ಜಸ್ಟ್ ಆಸ್ಕಿಂಗ್’ ಎಂಬ ಹ್ಯಾಷ್ಟ್ಯಾಗ್ ಹೆಸರಿನಲ್ಲಿ “ಟ್ರೋಲ್ ಗೂಂಡಾಗಿರಿ’ ಎಂಬ ಅಭಿಯಾನ ಆರಂಭಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದರಲ್ಲದೆ, “ಹಣಕ್ಕಾಗಿ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿಲ್ಲ. ತಮ್ಮ ಪ್ರಕಟಣೆಗಳ ಕುರಿತು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಜತೆಗೆ ಟ್ವಿಟರ್ ಪೋಸ್ಟ್ಗಳನ್ನು ಡಿಲೀಟ್ ಮಾಡಬೇಕು’ ಎಂದು ಒತ್ತಾಯಿಸಿದರು. ಈ ಮಧ್ಯೆ, “ನನ್ನ ಈ ಹೋರಾಟ ಯಾವುದೇ ಪಕ್ಷ ಅಥವಾ ಗುಂಪಿನ ವಿರುದ್ಧ ಅಲ್ಲ’ ಎಂದೂ ಸ್ಪಷ್ಟಪಡಿಸಿದರು. “ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ್ದು, ರೀಲ್ನಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲೂ ಪ್ರಕಾಶ್ ರೈ “ಖಳನಾಯಕ’ ಎಂದು ಜರಿದಿದ್ದಾರೆ. 5 ವರ್ಷದ ಮಗನ ಸಾವಿನ ದುಃಖದ ಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈ, ತನ್ನ ಅನುಕೂಲಕ್ಕೆ ತಕ್ಕಂತೆ ಹೆಸರು ಮತ್ತು ಗುರುತನ್ನು ಬದ ಲಾಯಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ, ಹತ್ಯೆಯಾಗಿದ್ದ ಗೌರಿ ಸಾವಿಗೆ ಬರುವ ಮೊದಲು ಯಾರ ಮಗ್ಗುಲಲ್ಲಿ ಮಲಗಿದ್ದೆ ಎಂದು ಬರೆದಿರುವ ಲೇಖನ ಶೇರ್ ಮಾಡಿದ್ದಾರೆ. ಇದು ಸರಿಯೇ’ ಎಂದು ಪ್ರಶ್ನಿಸಿದರು.
“ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕ ಎಂದು ನಾನು ಅವರನ್ನು ಪ್ರಶ್ನಿಸುತ್ತಿಲ್ಲ. ದೇಶದ ಪ್ರಜೆಯಾಗಿ ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದೇನೆ. ಇದನ್ನು ತೀವ್ರವಾಗಿ ಖಂಡಿಸಿ ಅವಹೇಳನಕಾರಿ ಯಾಗಿ ಪೋಸ್ಟ್ಗಳನ್ನು ಮಾಡುತ್ತಾರೆ. ಇದು ನನಗೆ ತುಂಬಾ ನೋವು ತಂದಿದೆ. ಹೀಗಾಗಿ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು, 10 ದಿನಗಳ ಒಳಗೆ ಪ್ರತಾಪ್ ಸಿಂಹ ತಮ್ಮ ನೋಟಿಸ್ಗೆ ಉತ್ತರ ನೀಡದಿದ್ದಲ್ಲಿ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಎಚ್ಚರಿಸಿದರು.
ರೈ ನೋಟಿಸ್ಗೆ ವಾಗ್ಬಾಣ
ಮೈಸೂರು: “ನಿಮಗೆ ಜನರನ್ನು ಎದುರಿಸುವ ಶಕ್ತಿ ಇದ್ದರೆ ರಾಜಕೀಯಕ್ಕೆ ಬನ್ನಿ, ಯುವಜನತೆ ಬೆಂಬಲ ಯಾರಿಗಿದೆ ಎಂಬುದನ್ನು ಸಾಬೀತುಪಡಿಸೋಣ’ ಇದು ಸಂಸದ ಪ್ರತಾಪ್ ಸಿಂಹ ಅವರು ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ನೀಡಿದ ಬಹಿರಂಗ ಆಹ್ವಾನ. ತಮ್ಮ ಹೇಳಿಕೆಗಳಿಗೆ ಟ್ರೋಲ್ ಮೂಲಕ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ನಟ ಪ್ರಕಾಶ್ ರೈ ನೋಟಿಸ್ ನೀಡಿರುವುದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, “ನಾನು ಐದು ವರ್ಷ ಪತ್ರಿಕೋದ್ಯಮ ಓದಿದ್ದೇನೆ, ನಿಮ್ಮ ನೋಟಿಸ್ನಲ್ಲಿ ಯಾವ ಆಕ್ಟ್ ಇದೆ ಹೇಳಿ’ ಎಂದು ಪ್ರಶ್ನಿಸಿದ್ದಾರೆ. “ಪ್ರಕಾಶ್ ರೈಗೆ ಜನರನ್ನು ಎದುರಿಸುವ ಶಕ್ತಿ ಇಲ್ಲ, ಇನ್ನು ಬಿಜೆಪಿಯನ್ನು ಎದುರಿಸುವ ಶಕ್ತಿ ಇದೆಯೇ?’ ಎಂದು ಪ್ರಶ್ನಿಸಿದ ಅವರು, ಒಂದೊಮ್ಮೆ ಬಿಜೆಪಿಯನ್ನು ಎದುರಿಸುವ ಶಕ್ತಿ ಇದ್ದರೆ ರಾಜಕೀಯಕ್ಕೆ ಬಂದು ಜನರ ಮುಂದೆ ಮಾತನಾಡಲಿ ಎಂದು ಟೀಕಿಸಿದರು. ತಮಿಳುನಾಡಿನಲ್ಲಿ ಒಂದು ಹೆಸರು, ಕರ್ನಾಟಕದಲ್ಲಿ ಒಂದು ಹೆಸರು ಇಟ್ಟು ಕೊಂಡಿರುವ ನಟ ಪ್ರಕಾಶ್ ರೈ ಅವರು ಮೊದಲು ತಮ್ಮ ನಿಜವಾದ ಹೆಸರನ್ನು ಸ್ಪಷ್ಟಪಡಿಸಬೇಕಿದೆ ಎಂದರು.