ಆಡಳಿತ ವೈಫಲ್ಯ ಮುಚ್ಚಿಡಲು ಸಾಮರಸ್ಯ ನಡಿಗೆಯ ನಾಟಕ: ಸಂಸದ ನಳಿನ್
Team Udayavani, Dec 13, 2017, 11:29 AM IST
ಮಂಗಳೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿಫಲರಾಗಿದ್ದಾರೆ. ಈಗ ತಮ್ಮ ಆಡಳಿತ ವೈಫಲ್ಯ ಮುಚ್ಚಿ ಹಾಕಲು ಸಾಮರಸ್ಯ ನಡಿಗೆಯ ನಾಟಕವಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಕದಡುವ ಯತ್ನಗಳು ನಿರಂತರವಾಗಿ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡಲು ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಅವರು ಸಾಮರಸ್ಯ ಯಾತ್ರೆ
ಕೈಬಿಟ್ಟು ತೀರ್ಥಯಾತ್ರೆಗೆ ಹೋಗುವುದು ಒಳಿತು ಎಂದು ಟೀಕಿಸಿದರು. ಕೇರಳದಲ್ಲಿ ಕಾಂಗ್ರೆಸ್, ಬಿಜೆಪಿ, ಮುಸ್ಲಿಂ ಲೀಗ್ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹತ್ಯೆಗೈಯುವ ಆರೋಪವಿರುವ ಸಿಪಿಐ ಪಕ್ಷದವರನ್ನು ಸಾಮರಸ್ಯ ಯಾತ್ರೆಯಲ್ಲಿ ಸೇರಿ
ಸಿಕೊಂಡಿರುವುದು ಸರಿಯಲ್ಲ ಎಂದು ಸಂಸದ ನಳಿನ್ ಪ್ರತಿಪಾದಿಸಿದರು. ಎಷ್ಟು ಮಂದಿ ಕಳ್ಳರು, ದರೋಡೆ ಆರೋಪಿಗಳನ್ನು ಬಿಡಿಸುವಂತೆ ಪೊಲೀಸರಿಗೆ ಸಚಿವರು ಫೋನ್ ಮಾಡಿದ್ದಾರೆ ಎನ್ನುವುದರ ಬಗ್ಗೆ ತನಿಖೆಯಾಗಲಿ. ಅದು ಬಿಟ್ಟು ಸಾಮರಸ್ಯ ಯಾತ್ರೆಯ
ಹೆಸರಿನಲ್ಲಿ ಅವರು ನಾಟಕವಾಡುವುದು ಬೇಡ ಎಂದವರು ಇದೇ ವೇಳೆ ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪ್ರ.ಕಾರ್ಯದರ್ಶಿ ಕಿಶೋರ್ ರೈ, ಮುಖಂಡರಾದ ಹರೀಶ್ ಪೂಂಜ, ಕ್ಯಾ| ಬೃಜೇಶ್ ಚೌಟ, ನಿತಿನ್ ಕುಮಾರ್, ಹರಿಕೃಷ್ಣ ಬಂಟ್ವಾಳ, ಸುದರ್ಶನ ಮೂಡ ಬಿದಿರೆ, ಜೀತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.
ಶರತ್ ಕೊಲೆ ಎನ್ಐಎಗೆ: ನಳಿನ್
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆ ಮುಂದುವರಿಯುತ್ತಿದೆ. ಆದರೆ ಈ ಬಗ್ಗೆ ಸರಕಾರ ನ್ಯಾಯಾಂಗ ತನಿಖೆಗೂ ಆದೇಶಿಸಿಲ್ಲ. ಸರಕಾರದಿಂದ ನ್ಯಾಯ ಸಿಗುವ ಭರವಸೆ ನಮಗಿಲ್ಲ. ಶರತ್ ಮಡಿವಾಳ, ಹೊನ್ನಾವರದ ಪರೇಶ್ ಮೇಸ್ತ ಕೊಲೆ ಪ್ರಕರಣಗಳ ಬಗ್ಗೆ ಎನ್ಐಎಯಿಂದ ತನಿಖೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಳಿನ್ಕುಮಾರ್ ಕಟೀಲು ತಿಳಿಸಿ ದರು. ಬಿಜೆಪಿ ಸ್ವಂತ ಶಕ್ತಿಯಲ್ಲಿ ನಂಬಿಕೆ ಇರಿಸಿದೆ ಎಂದರು.