ದಿಲ್ಲಿಯಲ್ಲಿ ಭಾರತ-ಚೀನ ಗಡಿ ಮಾತುಕತೆ: ಡೋಕ್ಲಾಂ ಮುಖ್ಯ ವಿಷಯ
Team Udayavani, Dec 22, 2017, 11:44 AM IST
ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಂ ನಲ್ಲಿ ಸಮರ ಸನ್ನಿವೇಶಕ್ಕೆ ಕಾರಣವಾದ ಭಾರತ ಮತ್ತು ಚೀನ ಸೇನಾ ಮುಖಾಮುಖೀ ಶಾಂತಿಯುತವಾಗಿ ಕೊನೆಗೊಂಡ ಹಲವು ತಿಂಗಳ ತರುವಾಯ ಉಭಯ ದೇಶಗಳ ಹಿರಿಯ ಅಧಿಕಾರಿಗಳು ಇಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಗಡಿ ವಿವಾದಕ್ಕೆ ಪರಿಹಾರೋಪಾಯವನ್ನು ಕಾಣಲು ಇಂದು ಶುಕ್ರವಾರ ಸಭೆ ನಡೆಸಲಿದ್ದಾರೆ.
ಎಎನ್ಐ ವರದಿ ಮಾಡಿರುವ ಪ್ರಕಾರ ಭಾರತೀಯ ನಿಯೋಗದ ನೇತೃತ್ವವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಾಲ್ ಮತ್ತು ಚೀನೀ ನಿಯೋಗದ ನೇತೃತ್ವವನ್ನು ಯಾಂಗ್ ಜೀಶಿ ಅವರು ವಹಿಸುತಿದ್ದಾರೆ.
ಉಭಯ ದೇಶಗಳ ಚರ್ಚಾ ಪಟ್ಟಿಯಲ್ಲಿ ಡೋಕ್ಲಾಂ ವಿಷಯವೇ ಮುಖ್ಯವಾಗಿದೆ. ಅಂತೆಯೇ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಕೂಡ ಮಹತ್ವ ನೀಡಲಾಗಿದೆ.
ಡೋಕ್ಲಾಂ ನಲ್ಲಿ ಉಭಯ ದೇಶಗಳ ಸೇನಾ ಮುಖಾಮುಖೀ 73 ದಿನಗಳ ಕಾಲ ಸಾಗಿ ಶಾಂತಿಯುತ ಮಾತುಕತೆಯಲ್ಲಿ ಕೊನೆಗೊಂಡ ಸುಮಾರು ನಾಲ್ಕು ದಿನಗಳ ತರುವಾಯ ಈ ಮಹತ್ವದ ಮಾತುಕತೆ ನಡೆಯುತ್ತಿರುವುದು ಗಮನಾರ್ಹವಾಗಿದೆ.
2003ರಲ್ಲಿ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ಮಾತುಕತೆ ವ್ಯವಸ್ಥೆಯನ್ನು ಆರಂಭಿಸಲಾದಂದಿನಂದ ಈ ತನಕ 20 ಸುತ್ತುಗಳ ಮಾತುಕತೆ ನಡೆದಿದೆ. ದೋವಾಲ್ ಮತ್ತು ಜೀಶೀ ಅವರು ಉಭಯ ದೇಶಗಳ ನಡುವಿನ 4,000 ಕಿ.ಮೀ. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನರ್ಸ್ಥಾಪಿಸುವ ಕುರಿತಾದ ಮಹತ್ವದ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಕಳೆದ ಸೆಪ್ಟಂಬರ್ನಲಿ ದೋವಾಲ್ ಮತ್ತು ಜೀಶೀ ಅವರು ಚೀನದ ಕ್ಸಿಯಾಮನ್ ನಲ್ಲಿ ನಡದಿದ್ದ ಬ್ರಿಕ್ಸ್ ಶೃಂಗದ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟಿನ ಕುರಿತಾಗಿ ಮಾತುಕತೆ ನಡೆಸಿದ್ದರು.