ಲೆಟರ್ ಬಾಂಬ್; ಮೈಸೂರು ಸ್ಫೋಟಕ್ಕೆ ಮುನ್ನ ಪತ್ರ
Team Udayavani, Jan 11, 2018, 6:00 AM IST
ಬೆಂಗಳೂರು: ಸಾಮಾನ್ಯವಾಗಿ ವಿಧ್ವಂಸಕ ಕೃತ್ಯ ನಡೆದ ಬಳಿಕ ನಡೆಸಿದ್ದು ತಾನೇ ಎಂದು ಘೋಷಿಸುವ ಉಗ್ರ ಸಂಘಟನೆಗಳು ಹೆಚ್ಚು. ಆದರೆ, ವಿಧ್ವಂಸ ಕೃತ್ಯಕ್ಕೆ ಮುನ್ನವೇ ಮಾಹಿತಿ ನೀಡುವುದು ಎಕ್ಯೂಐಎಸ್ -ಬೇಸ್ ಮೂವ್ಮೆಂಟ್ ಉಗ್ರ ಸಂಘಟನೆಯ ಕಾರ್ಯಶೈಲಿ!
ಇಲ್ಲಿ ಆಗಿದ್ದೂ ಹಾಗೆಯೇ. ನಿರ್ಲಕ್ಷ್ಯ ತೋರಿದ್ದು ಅನೇಕ ಸಾಧನೆಗಳಿಗೆ ಹೆಸರಾದ ಕರ್ನಾಟಕ ಪೊಲೀಸ್! ಉಗ್ರರು ಮೈಸೂರು ಕೋರ್ಟ್ ಬ್ಲಾಸ್ಟ್ ಮುಂಚಿತವಾಗಿ ಮುಖ್ಯಮಂತ್ರಿಯವರ ಆಗಿನ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹರಾಜು (ಈಗಿನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು ಅವರ ಪತಿ) ಅವರಿಗೆ ಪತ್ರ ಬರೆದಿದ್ದರು.
ಕೇರಳದ ಉಕ್ಕಡಂ ಪ್ರದೇಶದಿಂದ ಜನವರಿ 23,2016ರಂದು ಬೆದರಿಕೆ ಪತ್ರ ಬರೆದಿದ್ದರು. ಪತ್ರದಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಬಗ್ಗೆ ಪ್ರಸ್ತಾಪವಿತ್ತು. ಈ ಸಂಬಂಧ ರಾಜ್ಯಗುಪ್ತಚರ ಇಲಾಖೆ ತನಿಖೆ ನಡೆಸಿದರೂ, ಕಳುಹಿಸಿಕೊಟ್ಟವರಾರು ಎಂಬುದನ್ನು ಪತ್ತೆಹಚ್ಚಲು ಕಷ್ಟಸಾಧ್ಯ ಎಂದು ಕೈ ಚೆಲ್ಲಿತ್ತು ಮತ್ತು ಸಂಭಾವ್ಯ ಉಗ್ರ ಚಟುವಟಿಕೆ ನಿಗ್ರಹ ಸಂಬಂಧ ಪೊಲೀಸರು ನಿರ್ಲಕ್ಷ್ಯ ತೋರಿದರು ಎಂದು ಕೇಂದ್ರ ಗುಪ್ತಚರ ದಳದ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದ್ದ “ಬೇಸ್ ಮೂವ್ಮೆಂಟ್’ ಉಗ್ರ ಸಂಘಟನೆಗೆ ಅದಾಗಲೇ ಚಿತ್ತೂರು ಹಾಗೂ ಕೊಲ್ಲಂ ಕೋರ್ಟ್ ಆವರಣಗಳಲ್ಲಿ ಬಾಂಬ್ ಸ್ಫೋಟಿಸಿ ಮುಂದಿನ ಟಾರ್ಗೆಟ್ಗೆ ಯೋಜನೆ ರೂಪಿಸುತ್ತಿತ್ತು.
ವಿಶೇಷ ಎಂದರೆ, ಎನ್ಐಎ ಚಾರ್ಜ್ಶೀಟ್ ಪ್ರಕಾರ, ಎಕ್ಯೂಐಎಸ್ ಉಗ್ರಗಾಮಿಗಳು ಆ.1, 2016ರಂದು ತೆಲಂಗಾಣ ಸೈಬರಾಬಾದ್ ಪೊಲೀಸ್ ಕಮಿಷನರ್, ಮಂಡ್ಯ ಪೊಲೀಸ್ ಕಂಟ್ರೋಲ್ ರೂಂ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳ ಬಳಗ ಬಳಕೆ ಮಾಡುತ್ತಿದ್ದ “ನಮೋ ಕ್ಯಾಂಪೇನ್’ ವ್ಯಾಟ್ಸಾಪ್ ಗ್ರೂಪ್ಗೆ ವಿಧ್ವಂಸಕ ಕೃತ್ಯದ ಎಚ್ಚರಿಕೆ ಸಂದೇಶ ನೀಡಿದ್ದರು. ಅದೇ ದಿನ ಮೈಸೂರು ಕೋರ್ಟ್ ಸಂಕೀರ್ಣ ಆವರಣದಲ್ಲಿ ಬಾಂಬ್ ಸ್ಫೋಟವಾಗಿತ್ತು. ಇಲ್ಲೂ ಪೊಲೀಸರು ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಿರುವುದು ವೇದ್ಯ.
ಸೇಡಿನ ಕೃತ್ಯ
ಬೇಸ್ ಮೂವ್ಮೆಂಟ್ ತಂಡದವರು ಪ್ರತಿ ವಿಧ್ವಂಸಕ ಕೃತ್ಯದ ಹಿಂದೆ ಅದರ ಕಾರಣವನ್ನು ವಿಷದಪಡಿಸಿದ್ದಾರೆ. ಬಂಧಿತ ಆರೋಪಿಗಳು ಆ ಬಗ್ಗೆ ವಿವರ ನೀಡಿರುವುದನ್ನು ಎನ್ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖೀಸಲಾಗಿದೆ. ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಉಗ್ರ ಯಾಕೂಬ್ ಮೆಮನ್ನನ್ನು ಜುಲೈ 30,2015ರಲ್ಲಿ ನಾಗಪುರ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇದರಿಂದ ತೀವ್ರ ಮಾನಸಿಕವಾಗಿ ಕುಗ್ಗಿಹೋದ ಬೇಸ್ ಮೂವ್ಮೆಂಟ್ ನಾಯಕ ಅಬ್ಟಾಸ್ ಅಲಿ, ಯೂಕೂಬ್ ಮೆನನ್ ಗಲ್ಲಿಗೆ ಪ್ರತೀಕಾರವಾಗಿ ಬಾಂಬ್ ಸ್ಫೋಟ ನಡೆಸಲೇ ಬೇಕು ಎಂದು ನಿರ್ಧರಿಸಿಬಿಟ್ಟಿದ್ದ. ಆಗ, ಫಿಕ್ಸಾಗಿದ್ದೇ ಮೈಸೂರು ಕೋರ್ಟ್ ಆವರಣದಲ್ಲಿ ಬಾಂಬ್ ಬ್ಲಾಸ್ಟ್ ಟಾರ್ಗೆಟ್.
ಜುಲೈ ಮೂರನೇ ವಾರದಲ್ಲಿ ರೈಲು ಪ್ರಯಾಣದ ಮೂಲಕ ಮೈಸೂರಿಗೆ ಆಗಮಿಸಿದ 2ನೇ ಆರೋಪಿ ಕರೀಂಬ ರಾಜಾ, ,ಆಟೋವೊಂದರಲ್ಲಿ ಕೋರ್ಟ್ ಆವರಣಕ್ಕೆ ತೆರಳಿ, ಸುತ್ತಮುತ್ತಲ ಪ್ರದೇಶ, ಶೌಚಾಲಯ, ಒಳಗಡೆ ಪ್ರವೇಶದ ಗೇಟು, ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ಎಂಬುದನ್ನು ಪರಿಶೀಲಿಸಿ, ಸೇರಿದಂತೆ ಹಲವು ಫೋಟೋಗಳನ್ನು ತೆಗೆದುಕೊಂಡು ಸೀದಾ ಮುಧುರೈಗೆ ವಾಪಾಸಾಗಿದ್ದ.
ಕರೀಂರಾಜ ತಂದ ಫೋಟೋ, ಮಾಹಿತಿ ಆಧರಿಸಿ ಇತರೆ ಆರೋಪಿಗಳು ಸೇರಿಕೊಂಡು ಪ್ರಕರಣದ ಮೂರನೇ ಆರೋಪಿ ಮೊಹಮದ್ ಆಯೂಬ್ ನಿವಾಸದಲ್ಲಿ 30 ಬಾಕ್ಸ್ಗಳಲ್ಲಿದ್ದ ಹೈಡ್ರೋಜನ್ ಸ್ಫೋಟಕಗಳನ್ನು ಬಳಸಿ ಸುಧಾರಿತ ಸ್ಫೋಟಕವನ್ನು ತಯಾರಿಸಿ ಐದನೇ ಆರೋಪಿ, ದಾವೂದ್ಗೆ ನೀಡಲಾಗಿತ್ತು. ಆತ, ಮೈಸೂರು ಕೋರ್ಟ್ನ ಗೇಟಿನಲ್ಲಿ ಆಗಸ್ಟ್ 1ರಂದು ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದ ಎಂದು ಎನ್ಐಎ ಅಧಿಕಾರಿಗಳ ಆರೋಪಿಗಳ ವಿರುದ್ಧ ಎನ್ಐಎ ವಿಶೇಷನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ.
ವಾನಿ ಎನ್ಕೌಂಟರ್ಗೆ ಪ್ರತಿಯಾಗಿ ನೆಲ್ಲೂರು ಕೋರ್ಟ್ ಬ್ಲಾಸ್ಟ್
ಹಿಜ್ಬುಲ್ ಮುಜಾಹಿದ್ದಿನ್ ನಿಷೇಧಿತ ಉಗ್ರ ಸಂಘಟನೆಯ ಕಮಾಂಡರ್ ಎನ್ನಲಾದ ಬುರ್ಹಾನಿ ಮುಜಾಫರ್ ವಾನಿಯನ್ನು ಜಮ್ಮು ಕಾಶ್ಮೀರದಲ್ಲಿ ಜುಲೈ 8ರಂದು ಭಾರತೀಯ ಸೇನೆ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿತ್ತು. ಹೀಗಾಗಿ ಬುರ್ವಾನಿ ಹತ್ಯೆಗೆ ಪ್ರತೀಕಾರವಾಗಿ ನೆಲ್ಲೂರು ಕೋರ್ಟ್ ಆವರಣದಲ್ಲಿ ಸೆ.12ರಂದು ಬಾಂಬ್ ಸ್ಫೋಟಿಸಲಾಗಿತ್ತು ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾಗಿ ಎನ್ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ.
“ಬೇಸ್ ಮೂಮೆಂಟ್’ ಶಂಕಿತ ಉಗ್ರಗುಂಪು ಜನ್ಮತಳೆದಿದ್ದು ಹೀಗೆ
ಅದಾಗಲೇ ದೇಶದಲ್ಲಿ ಉಗ್ರ ಸಂಘಟನೆ ಎಂದು ಕಪ್ಪು ಪಟ್ಟಿಗೆ ಸೇರ್ಪಡೆಗೊಂಡಿದ್ದ ” ಆಲ್ ಮುಝೀದ್ ಫೋರ್ಸ್’ ಸಂಘಟನೆಯಲ್ಲಿ 2011ರಿಂದ 14ರವರೆಗೆ ಸಕ್ರಿಯನಾಗಿದ್ದ ಮಧುರೈನ ಇಸ್ಲಾಮೀಪುರಂನಲ್ಲಿ ಇಸ್ಲಾಮಿಕ್ ಲೈಬ್ರರಿ ನಡೆಸುತ್ತಿದ್ದ ನೈನಾರ್ ಅಬ್ಟಾಸ್ ಅಲಿ ಎಎಂಎಫ್ನಿಂದ ಹೊರಬಂದು ದಕ್ಷಿಣ ಭಾರತದಲ್ಲಿ ತನ್ನದೇ ಉಗ್ರಸಂಘಟನೆ ಸ್ಥಾಪಿಸುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದ ಆತ ಸಂಘಟನೆಗೆ ಬೇಸ್ ಮೂಮೆಂಟ್ ಎಂದು ಹೆಸರಿಟ್ಟುಕೊಂಡಿದ್ದ. ಈ ಶೈಶವಾಸ್ತೆಯ ಸಂಘಟನೆಯ ಮೊದಲ ಸದಸ್ಯನಾಗಿದ್ದು ಚೆನೈನ ಟಿಸಿಎಸ್ ಕಂಪೆನಿಯಲ್ಲಿ ಸೌಂಡ್ ಇಂಜಿನಿಯರ್ ಆಗಿದ್ದ 23 ವರ್ಷ ವಯಸ್ಸಿನ ದಾವೋದ್ ಸುಲೈಮಾನ್. ಈ ಸಂಘಟನೆಯ ಮಾಸ್ಟ್ರ್ ಮೈಂಡ್ ಅಬ್ಟಾಸ್ ಅಲಿಯಾದರೇ, ಅದನ್ನು ಕಾರ್ಯರೂಪಕ್ಕೆ ತರಲು ಬೇಕಾದ ತಾಂತ್ರಿಕ ನೈಪುಣ್ಯತೆ ಹೊಂದಿದ್ದ ಸುಲೈಮಾನ್ ಎರಡನೇ ದಂಡನಾಯಕನಾಗಿದ್ದ.
– ನವೀನ್ ಅಮ್ಮೆಂಬಳ/ ಮಂಜುನಾಥ್ ಲಘುಮೇನಹಳ್ಳಿ