ಬಂಟರ ಸಂಘ-ಪಿಂಪ್ರಿ ಚಿಂಚ್ವಾಡ್ 23ನೇ ವಾರ್ಷಿಕೋತ್ಸವ ಸಂಭ್ರಮ
Team Udayavani, Jan 30, 2018, 4:43 PM IST
ಪುಣೆ: ನಾವು ಬಂಟರು ವಿಶ್ವದ ಯಾವುದೇ ಮೂಲೆಯಲ್ಲಿ ನೆಲೆಸಿದರೂ ನಮ್ಮ ನಾಯಕತ್ವದ ಗುಣ, ಸಂಸ್ಕಾರವಂತ ವ್ಯಕ್ತಿತ್ವ, ಕಠಿನ ಪರಿಶ್ರಮದೊಂದಿಗೆ ಮುನ್ನಡೆದು ಯಾವುದೇ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿ ನಮ್ಮ ಅಸ್ತಿತ್ವವನ್ನು ಜಗತ್ತಿಗೆ ಸಾರುವ ವಿಶೇಷವಾದ ಸಮಾಜವೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ನಮ್ಮ ಸಮಾಜದ ಹೆಮ್ಮೆಯಾಗಿದೆ. ಜಗತ್ತಿನಾದ್ಯಂತ ಸುಮಾರು 100 ಕ್ಕೂ ಹೆಚ್ಚು ಸಂಘ-ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳುವ ನಮ್ಮ ಸಮಾಜದಲ್ಲಿ ಸಾಮರಸ್ಯದ ಒಗ್ಗಟ್ಟಿನ ಕೊರತೆ ಇರುವುದು ಸತ್ಯ. ನಾವು ವ್ಯಕ್ತಿಯಾಗಿ ಎಷ್ಟೋ ದೊಡ್ಡದಾಗಿ ಬೆಳೆದಿದ್ದೇವೆಯೇ ಹೊರತು ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿಲ್ಲ. ಶಕ್ತಿಯಾಗಿ ಬೆಳೆಯಲು ನಮ್ಮೊಳಗಿನ ಒಗ್ಗಟ್ಟು ಅನಿವಾರ್ಯವಾಗಿದೆ. ಆದ್ದದರಿಂದ ನಾವು ಬಂಟರೆಲ್ಲರೂ ಒಂದೇ ಕುಟುಂಬ ವೆಂಬ ಭಾವನೆಯೊಂದಿಗೆ ಒಗ್ಗಟ್ಟಾಗುವ ಮೂಲಕ ನಮ್ಮೊಳಗಿನ ಶಕ್ತಿ ಸಂಚಯನದೊಂದಿಗೆ ನಮ್ಮ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ವಾಗುತ್ತದೆ ಎಂದು ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಅಧ್ಯಕ್ಷರಾದ ಡಾ| ಸತ್ಯಪ್ರಕಾಶ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಜ. 28ರಂದು ಚಿಂಚ್ವಾಡ್ನ ಶ್ರೀ ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಪಿಂಪ್ರಿ ಚಿಂಚಾÌಡ್ ಇದರ 23 ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇವರು, ನಮ್ಮ ಸಮಾಜ ಉದ್ಯಮ, ವೈದ್ಯಕೀಯ ಸೇವೆ, ಎಂಜಿನಿಯರ್ ಮುಂತಾದ ಕ್ಷೇತ್ರದಲ್ಲಿ ಗಮನೀಯ ಸಾಧನೆ ಮಾಡಿದರೂ ಆಡಳಿತದಂತಹ ಐಎಎಸ್, ಐಪಿಎಸ್ ನಂತಹ ಸೇವೆಗಳಲ್ಲಿ ಸಾಧನೆ ಕಡಿಮೆಯಾಗಿದೆ. ಇಂತಹ ಕ್ಷೇತ್ರಗಳಲ್ಲಿ ಯುವ ಪೀಳಿಗೆಗೆ ಪ್ರೋತ್ಸಾಹ ಅಗತ್ಯವಾಗಿದೆ. ಅದೇ ರೀತಿ ನಮ್ಮ ಸಮಾಜದ ಮೇಲೆ ಧಾರ್ಮಿಕ, ಸಾಮಾಜಿಕ, ಆರ್ಥಿಕ ಶೋಷಣೆ ನಿರಂತರವಾಗಿ ನಡೆಯುತ್ತಿದ್ದು ಆತಂಕದ ವಿಚಾರವಾಗಿದೆ. ಇದರ ಬಗ್ಗೆ ನಮ್ಮ ಸಮಾಜಕ್ಕೆ ಜಾಗೃತಿ ಮೂಡಿಸುವ ಅಗತ್ಯತೆಯಿದೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ನಮ್ಮ ಯುವ ಪೀಳಿಗೆ ನಮ್ಮ ತುಳುನಾಡಿನ ಮೂಲ ಸಂಸ್ಕೃತಿಯನ್ನು, ಭಾಷೆಯನ್ನೂ ಮರೆಯುತ್ತಿದ್ದು ದೊಡ್ಡ ದುರಂತವಾಗಿದ್ದು ನಮ್ಮ ಮೌಲಿಕ ಸಂಸ್ಕೃತಿ, ಸಂಪ್ರದಾಯ , ತುಳು ಭಾಷೆಗಳನ್ನು, ಮಾತಾಪಿತರಿಗೆ, ಗುರುಹಿರಿಯರಿಗೆ ಗೌರವ ನೀಡುವ ಬಗ್ಗೆ, ಜೀವನ ಮೌಲ್ಯಗಳ ಪಾಠಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಅರುಹುವ ಕಾರ್ಯವನ್ನು ಮಾಡಬೇಕಾಗಿದೆ. ನಮ್ಮ ಸಮಾಜದಲ್ಲಿ ನಡೆಯುವ ದುಂದುವೆಚ್ಚದ ವಿವಾಹದಂತಹ ಕಾರ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ. ತುಳುಭಾಷೆಯನ್ನು ಮಕ್ಕಳಿಗೆ ಕಲಿಸುವ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ, ಕ್ರೀಡೆ- ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ, ಸಾಮಾಜಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಂಘ ಸಂಸ್ಥೆಗಳ ಮುಖ್ಯ ದಾಯಿತ್ವವಾಗಬೇಕಾಗಿದೆ. ಪಿಂಪ್ರಿ ಚಿಂಚಾÌಡ್ ಬಂಟರ ಸಂಘದ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ಕಾರ್ಯ ಅಭಿನಂದನೀಯವಾಗಿದ್ದು ಇಂದಿನ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪ್ರಸಿದ್ಧ ಸ್ತ್ರೀರೋಗತಜ್ಞೆ ಡಾ| ಸಂಗೀತಾ ಎಸ್. ಶೆಟ್ಟಿ ಅವರು ಮಾತನಾಡಿ, ಆಧುನಿಕ ಯಾಂತ್ರೀಕೃತ ಜೀವನ ಶೈಲಿಯಲ್ಲಿ ನಾವು ಬದುಕುತ್ತಿದ್ದು ಸಂಘ ಸಂಸ್ಥೆಗಳ ಮೂಲಕ ಸಮಾಜದ ಜನರನ್ನು ಒಗ್ಗೂಡಿಸಿಕೊಂಡು ಪರಸ್ಪರ ಕಷ್ಟಸುಖಗಳನ್ನು ಹಂಚಿಕೊಳ್ಳಲು, ಸಾಂಸ್ಕೃತಿಕ ವಾಗಿ ಸಂಭ್ರಮದೊಂದಿಗೆ ಸಂತೋಷ ದಿಂದ ಬೆಸೆಯಲು ಆಯೋಜಿಸುವ ಸ್ನೇಹ ಸಮ್ಮಿಲನದಂತಹ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ. ಪಿಂಪ್ರಿ ಚಿಂಚಾÌಡ್ ಬಂಟರ ಸಂಘ ಬಹಳ ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಶ್ಲಾಘನೀಯವಾಗಿದೆ. ನಮ್ಮ ಸಮಾಜದ ಮಹಿಳೆಯರು ಮನೆಯ ಮುಖ್ಯ ಆಧಾರಸ್ಥಂಭವಾಗಿದ್ದು ಇಡೀ ಪರಿವಾರದ, ಮಕ್ಕಳ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುವ ಅವಳು ತನ್ನ ಸ್ವತಃ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದನ್ನು ನಾವು ಕಾಣುತ್ತಿದ್ದೇವೆ. ಆದುದರಿಂದ ಮಹಿಳೆಯರು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಜಾಗೃತೆವಹಿಸಬೇಕಾದ ಅನಿವಾರ್ಯತೆಯಿದೆ. ಮಹಿಳೆಯರು ಆರೋಗ್ಯದೆಡೆ ಹೆಚ್ಚಿನ ನಿಗಾವನ್ನು ವಹಿಸಬೇಕು. ರೋಗಗಳ ಬಾರದಂತೆ ತಡೆಯಲು ಯಾವ ರೀತಿಯ ಜೀವನ ಪದ್ಧತಿಯನ್ನು ಅಳವಡಿಸಬೇಕಾಗಿದೆ ಎಂಬುದರ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಜಯ್ ಎಸ್. ಶೆಟ್ಟಿ ಬೋರ್ಕಟ್ಟೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಬಜಗೋಳಿ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಕುರ್ಕಾಲ್, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಡಾ| ವಿನಯ್ ಶೆಟ್ಟಿ ಕೆಂಜೂರು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ಪೆಲತ್ತೂರು ಮೇಲ್ಮನೆ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತನುಜಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಜಿತ್ ಶೆಟ್ಟಿ ಅವರು ಮುಂಡ್ಕೂರು ಉಪಸ್ಥಿತರಿದ್ದರು.
ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರುಗಳಾದ ಎರ್ಮಾಳ್ ಸೀತಾರಾಮ ಶೆಟ್ಟಿ, ವಿಶ್ವನಾಥ್ ಡಿ. ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ವಿಠಲ್ ಎಲ್. ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಬಜಗೋಳಿ ಸಂಘದ ವಾರ್ಷಿಕ ಚಟುವಟಿಕೆಗಳನ್ನು ವಿವರಿಸಿದರು. ಮಹಿಳಾ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಮಹಿಳಾ ವಿಭಾಗದ ಕಾರ್ಯದರ್ಶಿ ಸ್ಮಿತಾ ಎಂ ಹೆಗ್ಡೆ ತಿಳಿಸಿದರು. ಯುವ ವಿಭಾಗದ ವರದಿಯನ್ನು ಯುವ ವಿಭಾಗದ ಕಾರ್ಯದರ್ಶಿ ವಿನಯ್ ಶೆಟ್ಟಿ ಮುಂದಿಟ್ಟರು. ಮುಂಬಯಿಯ ಬಹುಮುಖ ಪ್ರತಿಭೆ ಕು| ಹಸ್ತಾ ಪ್ರಕಾಶ್ ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಸಮ್ಮಾನಿಸಲಾಯಿತು.
ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅತಿಥಿ ಗಣ್ಯರ ಹಸ್ತದಿಂದ ಟ್ರೋಪಿಗಳನ್ನು ವಿತರಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು. ರಾಷ್ಟ್ರಮಟ್ಟದ ಬಂಟ ಸಮಾಜದ ಫುಟ್ಬಾಲ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿದ ಯುವ ವಿಭಾಗದ ಸರ್ವ ಸದಸ್ಯರನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು. ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುಚ್ಚವನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ವಿಜಯ್ ಶೆಟ್ಟಿ ಬೋರ್ಕಟ್ಟೆ ಸ್ವಾಗತಿಸಿದರು. ನಿಧೀಶ್ ಶೆಟ್ಟಿ ನಿಟ್ಟೆ ಮತ್ತು ಸುಧಾಕರ ಶೆಟ್ಟಿ ಪೆಲತ್ತೂರು ಅತಿಥಿಗಳನ್ನು ಪರಿಚಯಿಸಿದರು. ಕು| ರಿಕ್ಷಿತಾ ಶೆಟ್ಟಿ ಮತ್ತು ಸುಪ್ರಿಯಾ ಶೆಟ್ಟಿ ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ತಾರಾ ಜೆ. ಶೆಟ್ಟಿ ಹಸ್ತಾ ಪ್ರಕಾಶ್ ಶೆಟ್ಟಿ ಅವರನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ವಿಶ್ವನಾಥ ಡಿ. ಶೆಟ್ಟಿ ಮತ್ತು ಸಭಾ ಕಾರ್ಯಕ್ರಮವನ್ನು ಸುಧಾಕರ ಶೆಟ್ಟಿ ಪೆಲತ್ತೂರು ನಿರೂಪಿಸಿದರು. ಜತೆ ಕಾರ್ಯದರ್ಶಿ ನಿತಿನ್ ಶೆಟ್ಟಿ ನಿಟ್ಟೆ ವಂದಿಸಿದರು.
ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು ಇವರ ನೇತೃತ್ವದಲ್ಲಿ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡಿತು. ಸದಸ್ಯರುಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ಗಳು, ಸಂಘದ ಮಹಿಳಾ ವಿಭಾಗದಿಂದ ಪ್ರಸ್ತುತ ಪಡಿಸಿದ ನೃತ್ಯರೂಪಕ, ಕಿರುನಾಟಕಗಳು ರಂಜಿಸಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು. ಸಂಘದ ಮಾಜಿ ಅಧ್ಯಕ್ಷರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯ ಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಯಶಸ್ಸಿಗೆ ಸಹಕರಿಸಿದರು.
ನಾನು ಸಂಘದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಹಲವಾರು ನಿರೀಕ್ಷೆಗಳನ್ನು ಹೊಂದಿ¨ªೆ. ಆದರೂ ಸಾಧ್ಯವಾದಷ್ಟು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಕಾರ್ಯಕ್ರಮ, ಯುವ ವಿಭಾಗವನ್ನು ಪ್ರೋತ್ಸಾಹಿಸಿ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟದ ಆಯೋಜನೆ ಸೇರಿದಂತೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಸಂಘದ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಘದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ದಾನಿಗಳು ಹಾಗೂ ಸಮಾಜ ಬಾಂಧವರು ಉತ್ತಮ ಸಹಕಾರ ನೀಡಿದ್ದು ಅವರೆಲ್ಲರಿಗೂ ಕೃತಜ್ಞತೆಗಳು. ಮುಂದೆ ಶಾಶ್ವತ ವಿದ್ಯಾ ನಿಧಿಯೊಂದನ್ನು ಮಾಡುವ ಯೋಜನೆಯಿದ್ದು ಇದರೊಂದಿಗೆ ಇನ್ನಷ್ಟು ಸಾಮಾಜಿಕ, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಗಳನ್ನು ತನ್ನ ಅವಧಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಸಮಾಜ-ಬಾಂಧವರೆಲ್ಲರ ಸಹಕಾರ ಅಗತ್ಯ
– ಕಟ್ಟಿಂಗೇರಿಮನೆ ಮಹೇಶ್ ಹೆಗ್ಡೆ (ಅಧ್ಯಕ್ಷರು : ಪಿಂಪ್ರಿ-ಚಿಂಚಾÌಡ್ ಬಂಟ್ಸ್ ಸಂಘ).
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು