ಪುಣೆ ಕನ್ನಡ ಸಂಘದ ವತಿಯಿಂದ 69ನೇ ಗಣರಾಜ್ಯೋತ್ಸವ
Team Udayavani, Jan 30, 2018, 4:37 PM IST
ಪುಣೆ: ಕನ್ನಡ ಸಂಘ ಪುಣೆಯ ವತಿಯಿಂದ 69ನೇ ಗಣರಾಜ್ಯೋತ್ಸವ ಸಮಾರಂಭವು ಜ. 26ರಂದು ಧ್ವಜಾರೋಹ ಣಗೈದು ಧ್ವಜವಂದನೆ ಸಲ್ಲಿಸುವ ಮೂಲಕ ಸಂಘದ ಶಿಕ್ಷಣ ಸಂಕುಲದಲ್ಲಿ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಜಯಾನಂದ್ ಶೆಟ್ಟಿ ಪುಣೆ ಹಾಗು ಗೌರವ ಅತಿಥಿಗಳಾಗಿ ಸಮಾಜ ಸೇವಕ ಎನ್. ಬಿ. ಶೆಟ್ಟಿ ಮುಂಬಯಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅತಿಥಿ ಹಾಗೂ ಗಣ್ಯರನ್ನು ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಸ್ವಾಗತಿಸಿದರು. ತದನಂತರ ಮುಖ್ಯ ಅತಿಥಿಗಳ ಶುಭಹಸ್ತದಿಂದ ಧ್ವಜಾ ರೋಹಣವನ್ನು ನಡೆಸಲಾಯಿತು. ಕನ್ನಡ ಸಂಘದ ಶಕುಂತಳಾ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ಗಣನೀಯ ಯಶಸ್ವಿ ಪಡೆದ ವಿದ್ಯಾರ್ಥಿಗಳನ್ನು ಅತಿಥಿ-ಗಣ್ಯರು ಮತ್ತು ಅಧ್ಯಕ್ಷ ಕುಶಲ್ ಹೆಗ್ಡೆ ಅವರು ಪ್ರಶಸ್ತಿಯನ್ನಿತ್ತು ಸತ್ಕರಿಸಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾದ ಜಯಾನಂದ ಶೆಟ್ಟಿ ಮಾತನಾಡಿ, ಆಧುನಿಕ ಭಾರತದ ಪ್ರಗತಿ ಮತ್ತು ಇಂದಿನ ಪೀಳಿಗೆಗೆ ಇರುವ ಉಜ್ವಲ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿ ದೇಶದ ಪ್ರಗತಿಯಲ್ಲಿ ಸಹಭಾಗಿಗಳಾಗುವಂತೆ ಸಲಹೆ ನೀಡಿ, ಕನ್ನಡ ಸಂಘದ ವಿದ್ಯಾಕ್ಷೇತ್ರದ ಪ್ರಗತಿಯನ್ನು ಶ್ಲಾಘಿಸಿದರು.
ಗೌರವ ಅತಿಥಿ ಎನ್. ಬಿ. ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರ ಗಳಲ್ಲಿ ಸಿಗುವ ವಿಪುಲ ಅವಕಾಶಗಳನ್ನು ಬಳಸಿ ಕೊಂಡು ತಮ್ಮ ಪ್ರತಿಭೆಯೊಂದಿಗೆ ಸಾಧನೆ
ಗಳನ್ನು ಮಾಡಿ ದೇಶದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕಾಗಿದೆ ಎಂದು ಕೆಲವೊಂದು ಉತ್ತಮ ಸಲಹೆಗಳನ್ನಿತ್ತು ಪ್ರೋತ್ಸಾಹಿಸಿದರು. ಪುಣೆಯಲ್ಲಿ ಕನ್ನಡ ಸಂಘವು ಮಾಡುತ್ತಿರುವ ಶೈಕ್ಷಣಿಕ, ಸಾಂಸ್ಕೃತಿಕ ಸೇವೆ ಶ್ಲಾಘನೀಯ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾ ರ್ಥಿಗಳು ಬಂಗಾಲಿ ಸಂಸ್ಕೃತಿಯ ನೃತ್ಯ ರೂಪಕಗಳನ್ನು ಮತ್ತು ನೃತ್ಯ ಸಂಗೀತದ ಜುಗಲ್ಬಂದಿಯನ್ನು ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಉಪಾಧ್ಯಕ್ಷ ಡಾ| ನಾರಾಯಣ್ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ಜತೆ ಕಾರ್ಯದರ್ಶಿ ರಾಧಿಕಾ ಶರ್ಮ, ಕೋಶಾಧಿಕಾರಿ ಶ್ರೀನಿವಾಸ್ ಆಳ್ವ, ವಿಶ್ವಸ್ತ ಡಾ| ಬಾಲಾಜಿತ್ ಶೆಟ್ಟಿ, ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಪಲ್ಲವಿ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಶಿಕ್ಷಕ ವೃಂದದವರು, ಪಾರಿತೋಷಕ ವಿಜೇತರು, ಪಾಲಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರು ಆಕರ್ಷಕ ವಾಗಿ ನಿರ್ವಹಿಸಿದರು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು