ಇಂದಿನಿಂದ ಜೈನಕಾಶಿಯಲ್ಲಿ ಹೆಲಿಟೂರಿಸಂ ಆರಂಭ
Team Udayavani, Feb 21, 2018, 6:00 AM IST
ಹಾಸನ: ಶ್ರವಣಬೆಳಗೊಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕವನ್ನು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೂ ಪೂರಕವಾಗಿ ಬಳಸಿಕೊಳ್ಳಲು ಜನಿವಾರ ಕೆರೆಯಲ್ಲಿ ದೋಣಿ ವಿಹಾರ ಹಾಗೂ ಜಲ ಸಾಹಸ ಕ್ರೀಡೆಯನ್ನು ಈಗಾಗಲೇ ಆರಂಭಿಸಲಾಗಿದೆ. ಬೆನ್ನ ಹಿಂದೆಯೇ ಈಗ ಶ್ರವಣಬೆಳಗೊಳದಲ್ಲಿ ಹೆಲಿ ಟೂರಿಸಂ ಬುಧವಾರದಿಂದ ಆರಂಭವಾಗಲಿದೆ.
ಶ್ರವಣಬೆಳಗೊಳದ ವಿಂಧ್ಯಗಿರಿಯ ಹಿಂಭಾಗ ಕೆ.ಆರ್.ಪೇಟೆ ರಸ್ತೆಯಲ್ಲಿರುವ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಆರಂಭವಾಗಲಿದೆ. ಮಂಗಳವಾರ ಹೆಲಿಕಾಪ್ಟರ್ ಪ್ರಾಯೋಗಿಕ ಹಾರಾಟ ಆರಂಭವಾಗಿದ್ದು, ಬುಧವಾರ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೆಲಿಟೂರಿಸಂ ಉದ್ಘಾಟಿಸುವರು. ಹುಬ್ಬಳ್ಳಿಯ ಕ್ಯಾಪ್ಟನ್ ಏವಿಯೇಷನ್ ಎರಡು ಹೆಲಿಕಾಪ್ಟರ್ಗಳನ್ನು ಬಳಸುತ್ತಿದೆ. ಪ್ರಥಮ ದಿನ ಒಂದು ಹೆಲಿಕಾಪ್ಟರ್ ಹಾರಲಿದ್ದು, ಒಂದೆರಡು ದಿನಗಳಲ್ಲಿಯೇ ಮತ್ತೂಂದು ಬಂದು ಸೇರಿಕೊಳ್ಳಲಿದೆ. ಒಟ್ಟು 6 ಸೀಟುಗಳಿರುವ ಎರಡು ಹೆಲಿಕಾಪ್ಟರ್ಗಳು ಜಿಲ್ಲೆಯ ಪ್ರಥಮ ಹೆಲಿಟೂರಿಸಂಗೆ ಬಳಕೆಯಾಗುತ್ತಿವೆ.
8 ನಿಮಿಷಕ್ಕೆ 2,100 ರೂ.:
ಶ್ರೀ ಗೊಮ್ಮಟೇಶ್ವರನ ನೆಲೆಯ ವಿಂಧ್ಯಗಿರಿಯನ್ನು ಒಂದು ಸುತ್ತು ಹಾಕಿಕೊಂಡು ಶ್ರವಣಬೆಳಗೊಳ ಪಟ್ಟಣದ ವ್ಯಾಪ್ತಿಯಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್ 8 ನಿಮಿಷಗಳ ಪ್ರಯಾಣಕ್ಕೆ 2,100 ರೂ. ನಿಗದಿಪಡಿಸಲಾಗಿದೆ. ಒಂದು ದಿನಕ್ಕೆ 10ಕ್ಕಿಂತ ಹೆಚ್ಚು ಸುತ್ತು ಹೆಲಿಕಾಪ್ಟರ್ ಹಾರಾಟದ ಮೂಲಕ ಅಂದರೆ ದಿನಕ್ಕೆ ಕನಿಷ್ಠ 100 ಜನರು ಹೆಲಿಕಾಪ್ಟರ್ನಲ್ಲಿ ಹಾರಾಟದ ಅನುಭವ ಪಡೆಯುವರೆಂದು ಅಂದಾಜಿಸಲಾಗಿದೆ.
ಮಹಾ ಮಸ್ತಕಾಭಿಷೇಕ ಮುಗಿದ ನಂತರವೂ ಒಂದು ತಿಂಗಳ ಕಾಲ ಹೆಲಿಟೂರಿಸಂ ನಡೆಸಲು ಪ್ರವಾಸೋದ್ಯಮ ಇಲಾಖೆ ಹುಬ್ಬಳ್ಳಿಯ ಕ್ಯಾಪ್ಟನ್ ಏವಿಯೇಷನ್ ಸಮ್ಮತಿ ನೀಡಿದೆ. ಹೆಲಿಟೂರಿಸಂನ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹಾಸನ ಕಚೇರಿಯ ಉಪ ನಿರ್ದೇಶಕ ಜಿತೇಂದ್ರನಾಥ್ ತಿಳಿಸಿದ್ದಾರೆ.
ಪ್ರಥಮ ದಿನವೇ ಗಲಾಟೆ:
ಮಂಗಳವಾರ ಮಧ್ಯಾಹ್ನದಿಂದಲೇ ಹೆಲಿಟೂರಿಸಂ ಆರಂಭವಾಗಬೇಕಾಗಿತ್ತು. ಮಧ್ಯಾಹ್ನ 4 ಗಂಟೆಗೆ ಹೆಲಿಟೂರಿಸಂಗೆ ಚಾಲನೆ ನೀಡುವರೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಹೆಲಿಕಾಪ್ಟರ್ ಹಾರಾಟದ ಖುಷಿ ಅನುಭವಿಸಲು ಟಿಕೆಟ್ಗಳನ್ನೂ ಖರೀದಿಸಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಪ್ರಥಮ ದಿನ ಪ್ರಾಯೋಗಿಕ ಹಾರಾಟ ಆರಂಭಿಸಿ ಬುಧವಾರದಿಂದ ಅಧಿಕೃತವಾಗಿ ಹೆಲಿಕಾಪ್ಟರ್ ಹಾರಾಟ ನಡೆಸಲಾಗುವುದು ಎಂದು ಪ್ರಕಟಿಸಿದರು.
ಆದರೆ ಟಿಕೆಟ್ ಖರೀದಿಸಿದ್ದವರು ಗಲಾಟೆ ಆರಂಭಿಸಿದರು. ಅನಿವಾರ್ಯವಾಗಿ ಟಿಕೆಟ್ ಖರೀದಿಸಿದವರಿಗೆ ಎರಡು ಸುತ್ತು ಹೆಲಿಕಾಪ್ಟರ್ನಲ್ಲಿ ಸುತ್ತಾಡಿಸಿ ಉಳಿದವರಿಗೆ ಬುಧವಾರ ಆದ್ಯತೆಯನುಸಾರ ಹೆಲಿಕಾಪ್ಟರ್ನಲ್ಲಿ ಸುತ್ತಾಡಿಸಿ, ಅನಂತರ ಹೊಸದಾಗಿ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ಸುಧಾರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pen drive case; ಇಂದೇ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ಶರಣು?
Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ
Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್
Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಡಿಕೆಶಿ; ವಿಡಿಯೋ ವೈರಲ್
MUST WATCH
ಹೊಸ ಸೇರ್ಪಡೆ
Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?
RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ
Pen drive case; ಇಂದೇ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ಶರಣು?
BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್