ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಅಮಾನತು
Team Udayavani, Feb 23, 2018, 2:06 PM IST
ಉಡುಪಿ: ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವಿ. ಕೋದಂಡರಾಮಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿ ಕಾರಿಯ ವರದಿಯನ್ನಾಧರಿಸಿ ಈ ಆದೇಶ ಹೊರ ಡಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
12 ಪ್ರಕರಣಗಳ ಉಲ್ಲೇಖ
ಕಾರ್ಕಳ ತಾಲೂಕು ಕಣಜಾರಿನ ಕಲ್ಲುಪುಡಿ ಘಟಕಕ್ಕೆ (ಸ್ಟೋನ್ ಕ್ರಷರ್) ನಿಯಮ ಮೀರಿ ಪರವಾನಿಗೆ ನೀಡಿರುವುದು, ಅದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯ ಗಮನಕ್ಕೆ ತಾರದಿರುವುದು, ಉಪ್ಪೂರಿನ ಮರಳು ಧಕ್ಕೆಯಲ್ಲಿ ಕಂದಾಯ ಇಲಾಖೆಯ ತಂಡ ಕಾರ್ಯಾಚರಣೆ ನಡೆಸಿದಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಅಸಹಕಾರ, ಬ್ರಹ್ಮಾವರ ಹೋಬಳಿ ಹಂದಾಡಿ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ದಾಳಿ ನಡೆದಾಗಲೂ ಸರಿಯಾಗಿ ಸ್ಪಂದಿಸದಿರುವುದು, ಕೆಲವು ಕಡೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಅಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಸುಳ್ಳು ವರದಿ ನೀಡಿರುವುದು ಮೊದಲಾದ 12 ಪ್ರಕರಣಗಳನ್ನು ಅಮಾನತು ಆದೇಶದಲ್ಲಿ ಪ್ರಸ್ತಾವಿಸಲಾಗಿದೆ.