ರೈಲ್ವೇ ಯಾತ್ರಿ ಸಂಘ: ಸಚಿವರಿಗೆ ಮನವಿ
Team Udayavani, Mar 29, 2018, 4:36 PM IST
ಮುಂಬಯಿ: ಕರ್ನಾಟಕ ಮತ್ತು ಕೇರಳ ರಾಜ್ಯದ ರೈಲ್ವೇ ಪ್ರಯಾಣಿಕರ ಹಿತದೃಷ್ಟಿಯಿಂದ ಸಂಸದರಾದ ಗೋಪಾಲ ಶೆಟ್ಟಿ ಇವರ ನೇತೃತ್ವದ ನಿಯೋಗವು ಕೇಂದ್ರ ರೈಲ್ವೇ ಮಂತ್ರಿ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿ ರೈಲ್ವೇ ಪ್ರಯಾಣಿಕರ ಈ ಬೇಡಿಕೆಗಳನ್ನು ಪೂರೈಸುವಂತೆ ಸಲ್ಲಿಸಲಾಯಿತು.
ಪಶ್ಚಿಮ ರೈಲ್ವೇ ವಿಭಾಗದಿಂದ ಕೊಂಕಣ್ ರೈಲ್ವೇ ಮೂಲಕ ಮಂಗಳೂರು ಸೆಂಟ್ರಲ್ಗೆ ರೈಲು, ಪಶ್ಚಿಮ ರೈಲ್ವೇ ಮತ್ತು ಮಂಗಳೂರು ಸೆಂಟ್ರಲ್ ರೈಲಿಗಾಗಿ ಸುಮಾರು 7 ಕಿಲೋ ಮೀಟರ್ ಉದ್ದದ ಹಳಿ ಜೋಡಣೆ, ಎಲ್ಲಾ ರೈಲ್ವೇ ಪ್ರಯಾಣಿಕರಿಗೆ ವಿಮಾ ಸೌಲಭ್ಯ ನೀಡುವುದು, ಮುಂಬಯಿಯಿಂದ ಮಂಗಳೂರಿಗೆ ಸಂಚರಿಸುವ ಮಂಗಳೂರು ಎಕ್ಸ್ಪ್ರೆಸ್ಗೆ ಮೂಲ್ಕಿಯಲ್ಲಿ ನಿಲುಗಡೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿಯಲ್ಲಿ ತಿಳಿಸಲಾಗಿತ್ತು.
ಮಾನ್ಯ ಕೇಂದ್ರ ರೈಲ್ವೇ ಮಂತ್ರಿಗಳು ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಸಕಾರಾತ್ಮಕ ಒಪ್ಪಿಗೆಯನ್ನು ಸೂಚಿಸಿ, ಇದೀಗ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ನಂತರ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು. ಈ ನಮ್ಮ ಬೇಡಿಕೆಯು ಹಲವಾರು ವರ್ಷಗಳ ನಿರಂತರ ಪ್ರಯತ್ನದಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ವಿರಾರ್ ಶಂಕರ್ ಶೆಟ್ಟಿ ತಿಳಿಸಿದ್ದಾರೆ.
ನಿಯೋಗದ ನೇತೃತ್ವವನ್ನು ಸಂಸದರಾದ ಗೋಪಾಲ ಶೆಟ್ಟಿ ವಹಿಸಿದ್ದು, ರೈಲ್ವೇ ಯಾತ್ರಿ ಸಂಘ ಬೊರಿವಲಿ ವತಿಯಿಂದ ವಿರಾರ್ ಶಂಕರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಶಿಮಂತೂರು, ಶೀಲಾ ಶೆಟ್ಟಿ, ರಂಜಿತ್ ಸುವರ್ಣ, ಮೋನ್ ಡಿಕೋಸ್ಟ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.