ಅಯೋಧ್ಯೆ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆಗೆ ನಕಾರ
Team Udayavani, Apr 7, 2018, 10:10 AM IST
ಹೊಸದಿಲ್ಲಿ: ಅಯೋಧ್ಯೆಯ ಭೂವಿವಾದ ಪ್ರಕರಣವು ಮುಸ್ಲಿಮರಲ್ಲಿ ಜಾರಿಯಲ್ಲಿರುವ ಬಹು ಪತ್ನಿತ್ವಕ್ಕಿಂತಲೂ ಮುಖ್ಯವಾದದ್ದು. ಹಾಗಾಗಿ, ಇದನ್ನು ಸುಪ್ರೀಂ ಕೋರ್ಟ್ನ ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು. ಹೀಗೆಂದು ಹಿರಿಯ ನ್ಯಾಯವಾದಿ ರಾಜೀವ್ ಧವನ್ ಶುಕ್ರವಾರ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದಾರೆ. ಆದರೆ, ಇವರ ಕೋರಿಕೆಯನ್ನು ನ್ಯಾಯಪೀಠ ವಜಾ ಮಾಡಿದ್ದು, ಪ್ರಕರಣದ ಇತರ ಅರ್ಜಿದಾರರ ವಾದಗಳನ್ನು ಆಲಿಸಿದ ಬಳಿಕವಷ್ಟೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಮುಸ್ಲಿಂ ಅರ್ಜಿದಾರರ ಪರ ವಾದಿಸಿದ ರಾಜೀವ್ ಧವನ್ ಅವರು, ‘ಅಯೋಧ್ಯೆ ವಿವಾದವು ಬಹು ಪತ್ನಿತ್ವಕ್ಕಿಂತಲೂ ಹೆಚ್ಚು ಮಹತ್ವವುಳ್ಳದ್ದು ಮತ್ತು ಇಡೀ ದೇಶವೇ ಈ ಬಗ್ಗೆ ಉತ್ತರಕ್ಕಾಗಿ ಕಾಯುತ್ತಿದೆ. ಹಾಗಾಗಿ, ವಿಚಾರಣೆಯನ್ನು ವಿಸ್ತೃತ ಪೀಠವೇ ನಡೆಸಬೇಕು’ ಎಂದು ಕೋರಿದರು. ಆದರೆ, ಇದಕ್ಕೆ ನ್ಯಾಯಪೀಠ ಸಮ್ಮತಿಸಲಿಲ್ಲ. ಅಯೋಧ್ಯೆ ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ 14 ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿವೆ.