ಮಲವಂತಿಗೆ: ಕಾಡಾನೆ ದಾಳಿ, ಕೃಷಿ ಹಾನಿ
Team Udayavani, Apr 22, 2018, 11:01 AM IST
ಬೆಳ್ತಂಗಡಿ: ಕಾಡಾನೆಗಳು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿರುವ ಘಟನೆ ಗುರುವಾರ ರಾತ್ರಿ ಮಲವಂತಿಗೆ ಗ್ರಾ.ಪಂ. ವ್ಯಾಪ್ತಿಯ ಆವರನಂದಿ ಕಾಡಿನ ಬಳಿ ನಡೆದಿದೆ.
ಗುರುವಾರ ರಾತ್ರಿ ಮಳೆ ಸುರಿಯುತ್ತಿದ್ದು, 3 ಕಾಡಾನೆಗಳು ಹಾಗೂ ಒಂದು ಮರಿಯಾನೆ ಚಂದಪ್ಪ ಮಲೆಕುಡಿಯ ಅವರ ತೋಟಕ್ಕೆ ನುಗ್ಗಿದ್ದು, 70ಕ್ಕೂ ಹೆಚ್ಚು ಫಸಲಿಗೆ ಬಂದ ಅಡಿಕೆ, 5 ತೆಂಗು ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಾರ್ಮಾಡಿ, ಭೈರತ್ತಿ, ಕುದುರೆಮುಖ ರಕ್ಷಿತಾರಣ್ಯ ಭಾಗದಲ್ಲಿ ಆನೆಗಳು ಓಡಾಡುತ್ತಿದ್ದು, ಆಗಾಗ ಕಡಿರುದ್ಯಾವರ, ಎಳನೀರು ಮೊದಲಾದೆಡೆ ದಾಳಿ ಮಾಡುತ್ತಿವೆ. 3 ತಿಂಗಳ ಹಿಂದೆಯಷ್ಟೇ ಇಲ್ಲಿ ಕಾಡಾನೆಗಳು ದಾಳಿ ಮಾಡಿದ್ದವು.
ಪ್ರಸ್ತುತ ಅವು ಸಮೀಪದ ಕಾಡಿಗೆ ಹಿಂದಿರುಗಿದ್ದು, ಮತ್ತೆ ಆಗಮಿಸುವ ಭಯದಲ್ಲಿ ಸಾರ್ವಜನಿಕರಿದ್ದಾರೆ. ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.