ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ
Team Udayavani, May 8, 2018, 2:59 PM IST
ದೇವನಹಳ್ಳಿ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತ್ತು ದಿನದಲ್ಲಿಯೇ ರೈತರ ಸಾಲ ಮನ್ನಾ ಮಾಡಲಾಗುವುದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 8 ಸಾವಿರ ಕೋಟಿ ರೂ.ಗಳನ್ನು ರೈತರ ಸಾಲವನ್ನು ಮನ್ನಾ ಮಾಡಿ ರಾಜ್ಯದಲ್ಲಿ ಮಾದರಿ ಸರ್ಕಾರವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಹಲವಾರು ಬಾರಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಗೆ ದೇಶದಲ್ಲಿರುವ ರೈತರ ಸಾಲ ಮನ್ನಾ ಮಾಡಿ ಎಂದು ಮನವಿ ಮಾಡಿದ್ದರೂ ಅದಕ್ಕೆ ಸ್ಪಂದಿಸಲಿಲ್ಲ. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರವಾಣಿ ಮೂಲಕ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುವಂತೆ ಸೂಚಿಸಿದ 10 ದಿನಗಳಲ್ಲಿಯೇ ಇಡೀ ರೈತರ 8 ಸಾವಿರ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದರು.
ರೈತರ ಮೇಲೆ ಕಾಳಜಿ ಇಲ್ಲ: ಕಳೆದ ನಾಲ್ಕು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು. ರೈತರ ಸಾಲ ಮನ್ನಾ ಮಾಡಲ್ಲ. ಎರಡು ಲಕ್ಷ ಸಾವಿರ ಕೋಟಿ ರೂ. ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾರೆ. ರೈತರ ಮೇಲೆ ಕಿಂಚಿತ್ ಕಾಳಜಿ ಇಲ್ಲ ಎಂದು ಟೀಕಿಸಿದರು.
ಜೈಲಿಗೆ ಹೋದ ಬಿಎಸ್ವೈ: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಪರಪ್ಪನ ಅಗ್ರಹಾರ ಜೈಲಿಗೆ ಹೋದ ಯಡಿಯೂರಪ್ಪಅವರನ್ನು ವೇದಿಕೆಯಲ್ಲಿ ಪಕ್ಕದಲ್ಲಿಟ್ಟುಕೊಂಡು ಮಾತನಾಡುತ್ತಾರೆ. ಜನತಾದಳ (ಎಸ್) ಎಂದು ಹೇಳುತ್ತಾರೆ. ಜಾತ್ಯತೀತ ಪಕ್ಷವೆಂದು ಹೇಳುತ್ತಾರೆ. ಆದರೆ ಎಸ್ ಎನ್ನುವುದು ಜನತಾದಳ ಸಂಘ ಪರಿವಾರವಾಗಿದೆ ಎಂದು ಹೇಳಿದರು.
ರೆಡ್ಡಿ ಸಹೋದರರಿಂದ ಲೂಟಿ: ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದಾಗ ರೆಡ್ಡಿ ಸಹೋದರರು 35 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಿದ್ದಾರೆ. ಯಡಿಯೂರಪ್ಪ ಮತ್ತು 10-15 ಉದ್ಯಮಿಗಳು ಹಣ ಲೂಟಿ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಸಂಪತ್ತನ್ನೇ ರೆಡ್ಡಿ ಸಹೋದರರು ಖಾಲಿ ಮಾಡಿದ್ದಾರೆ. ಅದೇ ಹಣ ಇದ್ದಿದ್ದರೆ ರೈತರ ಸಾಲವನ್ನು 4 ಬಾರಿ ಮನ್ನಾ ಮಾಡಬಹುದಿತ್ತು.
ಶಾಶ್ವತ ನೀರಾವರಿ ಕಲ್ಪಿಸಲಾಗುತ್ತಿತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಶಾಲೆಗಳನ್ನು ಮಾಡಬಹುದಾಗಿತ್ತು. ಸ್ನಾತಕೊತ್ತರ ಕಾಲೇಜುಗಳ ನಿರ್ಮಾಣ ಮಾಡಬಹುದಾಗಿತ್ತು. ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಬಹುದಾಗಿತ್ತು. ಆದರೆ ದೋಚುವುದರಲ್ಲಿಯೇ ಮಗ್ನರಾಗಿದ್ದರು ಎಂದು ಆರೋಪಿಸಿದರು.
ಗೆಲುವು: ಸಂಸದ ಎಂ.ವೀರಪ್ಪಮೊಯ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ದೇವನಹಳ್ಳಿಯಲ್ಲಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯಸಭಾ ಸದಸ್ಯ ಹರಿಪ್ರಸಾದ್, ಚಂದ್ರಶೇಖರ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್,
ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಧುಯಕ್ಷಿಗೌಡ, ಮಾಗೇìಟ್ ಆಳ್ವ, ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಆರ್.ಸುದರ್ಶನ್, ವಿವಿಧ ಘಟಕದ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಯುವ ಕಾಂಗ್ರೆಸ್, ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ, ಕಾರ್ಮಿಕ, ಐಎನ್ಟಿಸಿಯು, ಎನ್ಎಸ್ಯುಐ, ಹಾಗೂ ಇತರೆ ಘಟಕಗಳ ಪದಾಧಿಕಾರಿಗಳು ಮತ್ತಿತರು ಇದ್ದರು.