ದೇಣಿಗೆ ಸಂಗ್ರಹದಲ್ಲಿ ಲಖ್ವಿ ಬ್ಯುಸಿ
Team Udayavani, May 11, 2018, 9:49 AM IST
ಲಾಹೋರ್: ಭಾರತದಲ್ಲಿ ಉಗ್ರ ಕೃತ್ಯ ಮತ್ತು ಇತರ ಪಾತಕ ಕೃತ್ಯ ನಡೆಸಿರುವ ಇಬ್ಬರು ಉಗ್ರದ್ವಯರ ತಾಜಾ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಂಬಯಿ ದಾಳಿಯ ರೂವಾರಿ, ಉಗ್ರ ಝಕೀವುರ್ ರೆಹಮಾನ್ ಲಖ್ವಿ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಧನ ಸಂಗ್ರಹಿಸುತ್ತಿದ್ದಾನೆ.
2015ರಲ್ಲಿ ಲಾಹೋರ್ ಹೈಕೋರ್ಟಿನಿಂದ ಜಾಮೀನು ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಆತ ಕಾಣಿಸಿಕೊಂಡಿದ್ದಾನೆ. ದೇಶದ ಗುಪ್ತಚರ ಸಂಸ್ಥೆಗಳು ಕಲೆಹಾಕಿರುವ ಮಾಹಿತಿ ಪ್ರಕಾರ ಲಖ್ವಿಯೇ ಸಂಘಟನೆಯ ನೇತೃತ್ವ ವಹಿಸಿದ್ದಾನೆ. ಜತೆಗೆ ಪಾಕ್ನ ಪಂಜಾಬ್ ನಲ್ಲಿ ರೈತರು ಮತ್ತು ಇತರ ಮೂಲಗಳಿಂದ ಆತ ಹಣ ಸಂಗ್ರಹ ಮಾಡುತ್ತಿದ್ದಾನೆ. ಪಾಕಿಸ್ಥಾನದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ನಿಷೇಧ ಹೇರಿದ ಹೊರತಾಗಿಯೂ ಈ ಕ್ರಮ ಮುಂದುವರಿದಿದೆ.
ಇದೇ ವೇಳೆ ಉಗ್ರ ಸಂಘಟನೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಕೂಡ ಪಾಕಿಸ್ಥಾನದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾನೆ. ಶೀಘ್ರದಲ್ಲಿಯೇ ಆ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ರಾಜಕೀಯ ಪ್ರವೇಶದ ಇರಾದೆಯನ್ನೂ ಹೊಂದಿದ್ದಾನೆ. ಇದರ ಜತೆಗೆ ಉಗ್ರ ಸಂಘಟನೆ ಕಾಶ್ಮೀರ ವಿಚಾರವನ್ನು ಪ್ರಧಾನವಾಗಿ ಪ್ರಕಟಿಸುವ ನಿಯತಕಾಲಿಕೆ ಪ್ರಕಟಿಸಲು ಶುರು ಮಾಡಿದೆ. ಅದರಲ್ಲಿ ಲಷ್ಕರ್ ಉಗ್ರ ಸಂಘಟನೆಯ ವಕ್ತಾರ ಅಬ್ದುಲ್ಲ ಘಝ°ವಿ ಸಂದರ್ಶನವಿದೆ.