ದೇವರು,ಮನೆದೇವರು,ಬುದ್ಧ,ಬಸವ ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ
Team Udayavani, Jun 7, 2018, 6:25 AM IST
ಬೆಂಗಳೂರು: ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಬಹುತೇಕರು ದೇವರು, ಮನೆದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಬಿಎಸ್ಪಿಯ ಎನ್.ಮಹೇಶ್ ಅವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು.
ಈ ಮಧ್ಯೆ ಕಾಂಗ್ರೆಸ್ನ ಕೃಷ್ಣಬೈರೇಗೌಡ ಯಾರ ಹೆಸರಲ್ಲೂ ಪ್ರಮಾಣ ಮಾಡದೆ ಕೇವಲ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದಷ್ಟೇ ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಮೊದಲ ಬಾರಿ ಅಜ್ಜನ ಹೆಸರಿನಲ್ಲಿ ಮತ್ತು ದೇವರ ಹೆಸರಿನಲ್ಲಿ, ಜಿ.ಟಿ.ದೇವೇಗೌಡ ಅವರು ದೇವರು ಮತ್ತು ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ, ಎಂ.ಸಿ.ಮನಗೂಳಿ ಮನೆ ದೇವರ ಹೆಸರಿನಲ್ಲಿ, ಶಿವಾನಂದ ಪಾಟೀಲ್ ಬಸವಣ್ಣನ ಹೆಸರಿನಲ್ಲಿ ಸಿ.ಎಸ್.ಪುಟ್ಟರಾಜು ಅವರು ಜಗನ್ಮಾತೆ ತ್ರಿಪುರಸುಂದರಿ ಮಾತೆ ಹೆಸರಿನಲ್ಲಿ, ರಾಜಶೇಖರ ಪಾಟೀಲ್ ಹುಮ್ನಾಬಾದ್ ವೀರಭದ್ರೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡಿದರು.
ಶಾಸಕ ಜಮೀರ್ ಅಹಮದ್ ಅವರು ತಾಯಿ ಮತ್ತು ಅಲ್ಲಾಹುವಿನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಉಳಿದವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.