ಬಿಲ್ ಪಾವತಿಗೆ ಆಗ್ರಹಿಸಿ ಪ್ರತಿಭಟನೆ
Team Udayavani, Jun 21, 2018, 4:14 PM IST
ವಿಜಯಪುರ: ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ರೈತರಿಂದ ಕಬ್ಬು ಬೆಳೆ ಪಡೆದಿರುವ ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳು 229 ಕೋಟಿ ರೂ. ಹಿಂಬಾಕಿ ಪಾವತಿಸದೇ ತೊಂದರೆ ನೀಡುತ್ತಿವೆ. ಕೂಡಲೇ ಹಿಂಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು, ಜಿಲ್ಲೆ ಸಕ್ಕರೆ ಕಾರ್ಖಾನೆಗಳು ನವೆಂಬರ್ ಮೊದಲ ವಾರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿ, ಮಾರ್ಚ್ ಅಂತ್ಯಕ್ಕೆ22 ಲಕ್ಷ ಟನ್ ಕಬ್ಬು ನುರಿಸಿವೆ.ಡಿಸೆಂಬರ್ ವೇಳೆಗೆ ನಿಯಮದ ಪ್ರಕಾರ ರೈತರಿಗೆ ಬಿಲ್ ಪಾವತಿಸಬೇಕು.
ಮೊದಲ ಕಂತಿನ ಹಣ ಪಾವತಿಸಿದ ಬಳಿಕ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಬಿಲ್ ಪಾವತಿ ಮಾಡಿಲ್ಲ
ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ದುದ್ದಗಿ, ಪ್ರಧಾನ ಕಾರ್ಯದರ್ಶಿ ರಾಜು ಗುಂದಗಿ, ಬಾಬು
ಕೋತಂಬರಿ ದೂರಿದರು.
ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು 229 ಕೋಟಿ ರೂ. ಬಾಕಿ ಉಳಿಸಿಕೊಡಿದ್ದು, ಜಿಲ್ಲಾಧಿಕಾರಿಗಳು ವಾರದೊಳಗೆ ಸಕ್ಕರೆ ಕಾರ್ಖಾನೆಗಳ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಹಿಂಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕು. ಪಾವತಿ ಮಾಡದಿದ್ದಲ್ಲಿ ಸಕ್ಕರೆ ಕಾರ್ಖಾನೆಗಳ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಬೇಕು. ಜಿಲ್ಲಾಡಳಿತ ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಜಮಖಂಡಿ ಶುಗರ್ (ನಾದ) 58.54 ಕೋಟಿ ರೂ. ಜ್ಞಾನಯೋಗೇಶ ಶಿವುಕುಮಾರ 41.3 ಕೋಟಿ ರೂ. ಇಂಡಿಯನ್ ಶುಗರ್ ಲಿ 42.39 ಕೋಟಿ ರೂ. ನಂದಿ ಶುಗರ್ 26.3 ಕೋಟಿ ರೂ., ಕೆ.ಪಿ.ಆರ್. ಶುಗರ್ 30.7 ಕೋಟಿ ರೂ., ಮನಾಲಿ ಶುಗರ್ 6.50 ಕೋಟಿ ರೂ. ಬಸವೇಶ್ವರ ಶುಗರ್ 16.3 ಲಕ್ಷ, ಬಾಲಾಜಿ ಶುಗರ್ 6.59 ಕೋಟಿ ರೂ.,
ಭೀಮಾಶಂಕರ ಸಹಕಾರಿ ಶುಗರ್ 17.56 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು ದೂರಿದ್ದಾರೆ.
ಕಬ್ಬು ಬೆಳೆಗಾರರಿಗೆ ಏಕರೂಪದ ಬೆಲೆ ನೀಡದೇ ಹಾಗೂ ಏಕ ಸ್ವರೂಪದ ನಿಯಮ ಪಾಲಿಸದೇ ಕಳೆದ ಒಂದು ದಶಕದಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೇಗಾರರನ್ನು ವಂಚಿಸುತ್ತಿವೆ. ಹೀಗಾಗಿ ರೈತರಿಗೆ ಮೋಸ ಮಾಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಕಬ್ಬು ಬೆಳೆದ ರೈತರಿಗೆ ಪ್ರೋತ್ಸಾಹ ನೀಡಲು 10 ಸಾವಿರ ಕೋಟಿ ರೂ. ಹಣ ನೀಡಿದ್ದರೂ ಸ್ವಾಗತಾರ್ಹ. ಅದೇ ರೀತಿ ರಾಜ್ಯ ಸರಕಾರ ಕಬ್ಬು ಬೆಳೆಗಾರರ ಪ್ರೋತ್ಸಾಹಕ್ಕಾಗಿ ಆರ್ಥಿಕ ನೆರವು ನೀಡಬೇಕು. ಮತ್ತೂಂದೆಡೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.