ಕರಾವಳಿಯಲ್ಲಿ ಇಂದು ಭಾರೀ ಮಳೆ ನಿರೀಕ್ಷೆ
Team Udayavani, Jun 24, 2018, 6:35 AM IST
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆ ಅಬ್ಬರ ಕಡಿಮೆ ಇರಲಿದ್ದು, ನಂತರದ ಮೂರು ದಿನಗಳು ಕರಾವಳಿ ಸೇರಿದಂತೆ ಆಯ್ದ ಭಾಗಗಳಲ್ಲಿ ಭಾರಿ ಮಳೆ ನಿರೀಕ್ಷೆ ಇದೆ.
ಭಾನುವಾರ ಮತ್ತು ಸೋಮವಾರ ಒಳನಾಡು ಪ್ರದೇಶಗಳಲ್ಲಿ ಮಳೆ ಬಹುತೇಕ ವಿರಾಮ ನೀಡಲಿದೆ. ಜೂನ್ 26ರಿಂದ 28ರವರೆಗೆ ಉತ್ತರದ ಬೀದರ್, ಬೆಳಗಾವಿ, ಕಲಬುರಗಿ, ಯಾದಗಿರಿ ಹಾಗೂ ದಕ್ಷಿಣದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಉತ್ತಮ ಮಳೆ ಆಗಲಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಭಾನುವಾರ ಭಾರಿ ಮಳೆ ಆಗಲಿದ್ದು, ಸೋಮವಾರ ಒಣಹವೆ ಮುಂದುವರಿಯಲಿದೆ.
ತದನಂತರದ ಮೂರು ದಿನಗಳು ಅತಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.
ರಾಜ್ಯದಲ್ಲಿ ಶನಿವಾರ ಬೆಳಿಗ್ಗೆ ಕಾರ್ಕಳದಲ್ಲಿ ಅತಿ ಹೆಚ್ಚು 50 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿಯ ಕುಂದಾಪುರ, ಮಂಗಳೂರು, ಬಾಗಲಕೋಟೆ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಆಯ್ದ ಪ್ರದೇಶಗಳಲ್ಲಿ 20ರಿಂದ 40 ಮಿ.ಮೀ. ಮಳೆ ಬಿದ್ದಿದೆ ಎಂದು ಪ್ರಕಟಣೆ ತಿಳಿಸಿದೆ.