ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗ: ನೆರವು ವಿತರಣೆ
Team Udayavani, Jun 28, 2018, 4:26 PM IST
ಮುಂಬಯಿ: ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗದ ವತಿಯಿಂದ ಜೂ. 22 ರಂದು ವೈದ್ಯಕೀಯ ಮನವಿಗಳಿಗೆ ಅನುಗುಣವಾಗಿ ಅನಾರೋಗ್ಯ ಪೀಡಿತರ ಮನೆಗೆ ತೆರಳಿದ ಬಳಗದ ಸದಸ್ಯರು ವಿವಿಧೆಡೆಗಳಲ್ಲಿ ವೈದ್ಯಕೀಯ ನೆರವು ನೀಡಿ ಸಹಕರಿಸಿದರು.
ಊರಿನ ಎರ್ಮಾಳ್ ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿನಯಾ ದೇವಾಡಿಗರ ಮನೆಗೆ ತೆರಳಿ 30,000 ರೂ. ವೈದ್ಯಕೀಯ ಸಹಾಯ ನೀಡಲಾಯಿತು. ಪಡುಬಿದ್ರಿಯಲ್ಲಿ ಮೂರು ದಿನಗಳ ಹಿಂದೆ ವಿದ್ಯುತ್ ಸ್ಪರ್ಶದಿಂದ ದುರ್ಮರಣಕ್ಕೀಡಾದ ವನಜಾ ದೇವಾಡಿಗರ ಮನೆಗೆ ತೆರಳಿ 10,000 ರೂ. ಗಳನ್ನು ಹಸ್ತಾಂತರಿಸಲಾಯಿತು.
ಜೂ. 23 ರಂದು ಕುಂದಾಪುರ ತಾಲೂಕು ಆಲೂರಿನ ಹೊಂದಿಕೊಡಲು ಗ್ರಾಮದಲ್ಲಿ ಅನಾರೋಗ್ಯ ಪೀಡಿತರಾಗಿ ಸೊಂಟದ ಕೆಳಗೆ ಸಂಪೂರ್ಣ ಬಲ ಕಳೆದುಕೊಂಡಿರುವ ಶೀನ ದೇವಾಡಿಗರ ಪುತ್ರ 23 ಹರೆಯದ ಉದಯ ಅವರಿಗೆ ವೀಲ್ಚೇಯರ್ನ್ನು ಬಳಗದ ವತಿಯಿಂದ ಹಸ್ತಾಂತರಿಸಲಾಯಿತು.
ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗವನ್ನು ಮುಂಬಯಿಯಲ್ಲಿ ನೆಲೆಸಿರುವ ದೇವಾಡಿಗ ಸಮಾಜ ಬಾಂಧವರು ಹೊಂದಿದ್ದು, ಊರಿನಲ್ಲಿರುವ ಅನಾರೋಗ್ಯ ಪೀಡಿತರಿಗೆ ಸಹಕರಿಸುತ್ತಿದೆ.