ತಿಂಗಳೊಳಗೆ ದಾರಿದೀಪ ಸಮಸ್ಯೆಗೆ ಮುಕ್ತಿ: ಆಯುಕ್ತರಿಂದ ಭರವಸೆ
Team Udayavani, Jun 30, 2018, 6:00 AM IST
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಕೆಟ್ಟು ಹೋಗಿರುವ ದಾರಿದೀಪಗಳನ್ನು ಬದಲಾಯಿಸುವುದಕ್ಕಾಗಿ 1,500 ಎಲ್ಇಡಿ ಬಲ್ಬ್ ಗಳನ್ನು ಹಾಗೂ 500ರಷ್ಟು ಟೈಮರ್ಗಳನ್ನು ಖರೀದಿಸಿ ತಿಂಗಳೊಳಗೆ ದಾರಿದೀಪ ಸಮಸ್ಯೆ ಪರಿಹರಿಸಲಾಗುವುದು ಎಂದು ನಗರಸಭೆ ಆಯುಕ್ತ ಜನಾರ್ದನ್ ಭರವಸೆ ನೀಡಿದ್ದಾರೆ.
ಜೂ.29ರಂದು ಜರಗಿದ ನಗರಸಭೆ ಸಾಮಾನ್ಯಸಭೆಯಲ್ಲಿ ದಾರಿದೀಪ ನಿರ್ವಹಣೆ ವೈಫಲ್ಯದ ಕುರಿತು ಸದಸ್ಯರಿಂದ ತೀವ್ರ ಟೀಕೆ ವ್ಯಕ್ತವಾದ ಸಂದರ್ಭದಲ್ಲಿ ಆಯುಕ್ತರು ನಗರಸಭೆಯ ತೀರ್ಮಾನವನ್ನು ಪ್ರಕಟಿಸಿದರು.
ಮೊದಲು 1,000 ಟ್ಯೂಬ್ಲೈಟ್ ಮತ್ತು 500 ಎಲ್ಇಡಿ ಬಲ್ಬ್ಗಳನ್ನು ಖರೀದಿಸುವುದಾಗಿ ಆಯುಕ್ತರು ತಿಳಿಸಿದರು. ಅನಂತರ ಶಾಸಕ ರಘುಪತಿ ಭಟ್ ಹಾಗೂ ನಾರಾಯಣ ಕುಂದರ್ ಸೇರಿದಂತೆ ಹಲವು ಮಂದಿ ಸದಸ್ಯರ ಸಲಹೆಯ ಮೇರೆಗೆ ಟ್ಯೂಬ್ಲೈಟ್ನ ಬದಲು ಎಲ್ಇಡಿ ಬಲ್ಬ್ ಗಳನ್ನೇ ಖರೀದಿಸಲಾಗುವುದು ಎಂದು ಆಯುಕ್ತರು ಹೇಳಿದರು.
ಹೊರಗಿನವರಿಗೆ ಗುತ್ತಿಗೆ: ಗದ್ದಲ
“ಸ್ಥಳೀಯರ ಬದಲು ಶಿವಮೊಗ್ಗದವರಿಗೆ ದಾರಿದೀಪ ಗುತ್ತಿಗೆ ವಹಿಸಿಕೊಟ್ಟಿರುವುದೇ ಸಮಸ್ಯೆಗೆ ಮುಖ್ಯ ಕಾರಣ’ ಎಂದು ವಿಪಕ್ಷದ ಯಶ್ಪಾಲ್ ಸುವರ್ಣ ಸೇರಿದಂತೆ ಅನೇಕ ಮಂದಿ ಆರೋಪಿಸಿದರು. ಇದಕ್ಕೆ ವಿಪಕ್ಷದ ಹಲವು ಹಾಗೂ ಆಡಳಿತಪಕ್ಷದ ಕೆಲವು ಮಂದಿ ಸದಸ್ಯರು ಕೂಡ ದನಿಗೂಡಿಸಿದರು. ದಾರಿದೀಪ ಸಮಸ್ಯೆಯ ಕುರಿತು ಮಹೇಶ್ ಠಾಕೂರ್, ಶ್ಯಾಮ್ಪ್ರಸಾದ್ ಕುಡ್ವ, ಸುಮಿತ್ರಾ ನಾಯಕ್, ನಾರಾಯಣ ಕುಂದರ್ ಮೊದಲಾದವರು ದನಿಯೆತ್ತಿದರು.
ಸಭೆಯಲ್ಲಿ ಗದ್ದಲವೇರ್ಪಟ್ಟಿತು. “ನಿಯಮದಲ್ಲಿ ಅವಕಾಶವಿದ್ದರೆ ಸ್ಥಳೀಯರಿಗೆ ಗುತ್ತಿಗೆ ನೀಡುವುದಕ್ಕೆ ನಮ್ಮ ಆಕ್ಷೇಪವೇನಿಲ್ಲ’ ಎಂದು ಆಡಳಿತ ಪಕ್ಷದ ರಮೇಶ್ ಕಾಂಚನ್ ಮತ್ತು ಜನಾರ್ದನ ಭಂಡಾರ್ಕರ್ ಹೇಳಿದರು. “ನಾವೇ ಒಬ್ಬರನ್ನು ಕರೆದು ಟೆಂಡರ್ ಕೊಟ್ಟಿದ್ದಲ್ಲ, ಟೆಂಡರ್ನಲ್ಲಿ ಯಾರು ಕೂಡ ಭಾಗವಹಿಸಲು ಅವಕಾಶವಿತ್ತು’ ಎಂದು ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದರು.
ಸುದೀರ್ಘ ಚರ್ಚೆಯ ಅನಂತರ ಮಾತನಾಡಿದ ಶಾಸಕ ರಘುಪತಿ ಭಟ್ ಅವರು, “ಗುತ್ತಿಗೆದಾರರಿಂದ ವೈಫಲ್ಯ ಆಗಿರುವುದು ಸ್ಪಷ್ಟ. ಹೊರಗಿನವರಿಗೆ ಟೆಂಡರ್ ನೀಡುವ ಬದಲು ಸ್ಥಳೀಯರಿಗೆ ನೀಡಿದರೆ ಉತ್ತಮ. ಈ ಬಗ್ಗೆ ನಗರಸಭೆ ನಿರ್ಣಯ ತೆಗೆದುಕೊಳ್ಳಬಹುದು’ ಎಂದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು “ಈ ಹಿಂದೆ ಟೆಂಡರ್ ವಹಿಸಿಕೊಂಡವರು ನಿರ್ವಹಣೆಯಲ್ಲಿ ವೈಫಲ್ಯ ತೋರಿರುವುದರಿಂದ ಮುಂದಿನ ಬಾರಿ ಅವರ ಟೆಂಡರ್ ತಿರಸ್ಕರಿಸಲಾಗುವುದು’ ಎಂದು ತಿಳಿಸಿದರು.
ಒಳಚರಂಡಿ ದುರಸ್ತಿಗೆ ಒಕ್ಕೊರಲ ಆಗ್ರಹ
ಅಮೃತಾ ಕೃಷ್ಣಮೂರ್ತಿ ಅವರು ಮಾತನಾಡಿ,n ಕಿನ್ನಿಮೂಲ್ಕಿಯಲ್ಲಿ ಎರಡು ವೆಟ್ವೆಲ್ಗಳಿಂದ ಕೊಳಚೆ ನೀರು ಮೇಲೆ ಬರುತ್ತಿದೆ. ಅದು ಮಳೆನೀರು ತೋಡು ಸೇರುತ್ತದೆ. ನಾವು ಹೊಸ ಒಳಚರಂಡಿ ಕಾಮಗಾರಿಯನ್ನು ದೊಡ್ಡ ಮಟ್ಟದಲ್ಲಿ ಕಾರ್ಯಗತಗೊಳಿಸುವ ಮೊದಲು ಈಗ ಸಮಸ್ಯೆ ಎಲ್ಲೆಲ್ಲಿ ಇದೆಯೋ ಅದನ್ನು ಅಲ್ಲಲ್ಲಿಯೇ ಪರಿಹರಿಸಿಕೊಳ್ಳುವುದು ಉತ್ತಮ’ ಎಂದು ಹೇಳಿದರು. ಇದಕ್ಕೆ ಹರೀಶ್ ರಾಮ್ ಬನ್ನಂಜೆ, ವಸಂತಿ ಶೆಟ್ಟಿ, ಯುವರಾಜ್ ಸೇರಿದಂತೆ ಹಲವು ಮಂದಿ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಒಳಚರಂಡಿ ಕಾಮಗಾರಿಗಾಗಿ ಮೀಸಲಿಟ್ಟಿರುವ 38 ಕೋ.ರೂ.ಗಳನ್ನು ಇದಕ್ಕೆ ವಿನಿಯೋಗಿಸುವಂತೆ ಶಾಸಕ ರಘುಪತಿ ಭಟ್ ಸಲಹೆ ನೀಡಿದರು. ಇದಕ್ಕೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.
ಪೌರ ಕಾರ್ಮಿಕರ ನೇಮಕಾತಿ: ಅಸಮಾಧಾನ
ಪೌರ ಕಾರ್ಮಿಕರ ನೇಮಕಾತಿಯಲ್ಲಿ ಉಡುಪಿ ನಗರಸಭೆಯ ಆರು ಮಂದಿಗೆ ಅವಕಾಶ ತಪ್ಪಿರುವ ಕುರಿತು ಶಾಸಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಡವಾಗಿ ಅರ್ಜಿ ಹಾಕಿರುವುದಕ್ಕೆ ತಿರಸ್ಕೃತಗೊಂಡಿದೆ. ಅವರು ಸಕಾಲದಲ್ಲಿ ಅರ್ಜಿ ಹಾಕುವಂತೆ ಮಾಡಬೇಕಿತ್ತು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು “ಪೌರಕಾರ್ಮಿಕರ ಕುರಿತು ಸರಕಾರ ವ್ಯಾಖ್ಯಾನ ಬದಲಿಸಿದೆ. ಬೀದಿ ಗುಡಿಸುವವರು ಮಾತ್ರ ಪೌರಕಾರ್ಮಿಕರು. ಸೆಸ್ಪೂಲ್ ಸಹಾಯಕರು, ಲೋಡರ್ಗಳು ಮೊದಲಾದವರು ಪೌರಕಾರ್ಮಿಕರಲ್ಲ’ ಎಂದು ಸರಕಾರ ಹೇಳಿದೆ. ಉಡುಪಿಯಲ್ಲಿ 47 ಮಂದಿಯ ನೇರ ನೇಮಕಾತಿ, 97 ಮಂದಿ ಖಾಯಂ ನೇಮಕಾತಿ ಆಗಿದೆ. ಬಾಕಿಯಾಗಿರುವ 6 ಮಂದಿ ಪೌರಕಾರ್ಮಿಕರ ಕುರಿತು ಜಿಲ್ಲಾಧಿಕಾರಿಯವರ ಜತೆಗೆ ಮಾತನಾಡುತ್ತೇವೆ’ ಎಂದು ಹೇಳಿದರು.
ಉಪಾಧ್ಯಕ್ಷೆ ಸಂಧ್ಯಾ ಉಪಸ್ಥಿತರಿದ್ದರು. ಗಣೇಶ್ ನೇರ್ಗಿ, ಪ್ರಶಾಂತ್ ಅಮೀನ್, ವಿಜಯ ಪೂಜಾರಿ, ನರಸಿಂಹ ನಾಯಕ್, ಗೀತಾ ಶೇಟ್, ನವೀನ್ ಭಂಡಾರಿ, ಚಂದ್ರಕಾಂತ್ ನಾಯಕ್, ಶಶಿರಾಜ್ ಕುಂದರ್ ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡರು. ಶಾಸಕರಾಗಿ ಮೊದಲ ಬಾರಿಗೆ ನಗರಸಭೆ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡ ರಘುಪತಿ ಭಟ್ ಅವರನ್ನು ಅಭಿನಂದಿಸಲಾಯಿತು. ದಾರಿದೀಪ, ರಸ್ತೆ ಹೊಂಡಗಳು, ಕೊಳಚೆ ಸಮಸ್ಯೆಗಳ ಕುರಿತು “ಉದಯವಾಣಿ’ಯಲ್ಲಿ ಪ್ರಕಟವಾದ ಸರಣಿ ವರದಿಗಳ ಕುರಿತು ಸದಸ್ಯರು ಉಲ್ಲೇಖೀಸಿದರು.
ಇಂದಿರಾ ಕ್ಯಾಂಟೀನ್ ಗಿರಾಕಿ ಲೆಕ್ಕ ಹಾಕಲು ಪೌರಕಾರ್ಮಿಕರು!
ಇಂದಿರಾ ಕ್ಯಾಂಟೀನ್ಗೆ ಎಷ್ಟು ಜನ ಗಿರಾಕಿಗಳು ಬರುತ್ತಾರೆ ಎಂಬುದನ್ನು ಲೆಕ್ಕ ಹಾಕುವುದಕ್ಕಾಗಿ ಪೌರಕಾರ್ಮಿಕರನ್ನು ಬಳಸಲಾಗುತ್ತಿದೆ ಎಂದು ಸದಸ್ಯೆ ಗೀತಾ ಶೇಟ್ ಅವರು ದೂರಿದರು. ಈ ಕುರಿತು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಪರಿಸರ ಎಂಜಿನಿಯರ್ ಅವರು “ಇಂದಿರಾ ಕ್ಯಾಂಟೀನ್ ಸರಕಾರದ್ದೇ. ಹಾಗಾಗಿ ನಗರಸಭೆಗೂ ಜವಾಬ್ದಾರಿ ಇದೆ. ಇಂದಿರಾ ಕ್ಯಾಂಟೀನ್ನಲ್ಲಿ ರಾತ್ರಿ ವೇಳೆ ಊಟಕ್ಕೆ ಕಡಿಮೆ ಜನ ಬರುತ್ತಿದ್ದಾರೆ. ಇದನ್ನು ಖಚಿತಪಡಿಸಿಕೊಂಡು ಬೇಕಾದಷ್ಟೇ ಊಟ ಸಿದ್ದಪಡಿಸಲು ಕ್ಯಾಂಟೀನ್ನವರಿಗೆ ಸೂಚಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ನಗರಸಭೆಗೆ ತಿಳಿಸಿದ್ದಾರೆ. ಹಾಗಾಗಿ ಪೌರಕಾರ್ಮಿಕರನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗಿದೆ’ ಎಂದರು.