ರಾಜ್ಯಸಭೆಗೆ ನಾಲ್ವರು ಸಾಧಕರು; ರಾಮ್ ಶಕಲ್,ಸೋನಾಲ್ ನಾಮ ನಿರ್ದೇಶನ
Team Udayavani, Jul 14, 2018, 3:10 PM IST
ಹೊಸದಿಲ್ಲಿ : ರೈತ ನಾಯಕ ರಾಮ್ ಶಕಲ್,ಲೇಖಕ ಮತ್ತು ಅಂಕಣಕಾರ ರಾಕೇಶ್ ಸಿನ್ಹಾ,ಶಿಲ್ಪಿ ರಘುನಾಥ್ ಮಹಾಪಾತ್ರ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ ಸೋನಾಲ್ ಮಾನ್ಸಿಂಗ್ ಅವರನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಶನಿವಾರ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ.
ಸಂವಿಧಾನದ 80 ನೇ ವಿಧಿಯ ಅನ್ವಯ ರಾಷ್ಟ್ರಪತಿಗೆ 12 ಮಂದಿಯನ್ನು ರಾಜ್ಯ ಸಭೆಗೆ ನಾಮನಿರ್ದೆಶನ ಮಾಡುವ ಅಧಿಕಾರ ಹೊಂದಿದ್ದಾರೆ.
ಸದ್ಯ ರಾಜ್ಯಸಭೆಯಲ್ಲಿ 8 ಮಂದಿ ನಾಮನಿರ್ದೇಶಿತ ಸದಸ್ಯರಿದ್ದಾರೆ. ನಾಲ್ಕು ಸ್ಥಾನ ಖಾಲಿ ಉಳಿದಿದೆ.
ಜುಲೈ 18 ರಿಂದ ಆರಂಭವಾಗುವ ಸಂಸತ್ ಮುಂಗಾರು ಅಧಿವೇಶನ ದಲ್ಲಿ ನಾಲ್ವರು ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿವೇಶನ ಅಗಸ್ಟ್ 10 ರಂದು ಅಂತ್ಯಗೊಳ್ಳಲಿದೆ.
ರಾಮ್ ಶಕಲ್
ಉತ್ತರ ಪ್ರದೇಶದ ದಲಿತ ಚಳುವಳಿ, ರೈತ ಚಳುವಳಿಯ ಹೋರಾಟಗಾರರಾಗಿ ಗುರುತಿಸಿಕೊಂಡವರು. ಮೂರು ಬಾರಿ ಸಂಸದರೂ ಆಗಿ ಆಯ್ಕೆಯಾಗಿದ್ದರು.
ರಾಕೇಶ್ ಸಿನ್ಹಾ
ದೆಹಲಿಯ ಚಿಂತಕರ ಚಾವಡಿ ಇಂಡಿಯಾ ಪಾಲಿಸಿ ಫೌಂಡೇಶನ್ ಸಂಸ್ಥಾಪಕರು. ದೆಹಲಿ ಮೋತಿಲಾಲ್ ನೆಹರು ವಿವಿಯ ಪ್ರಧ್ಯಾಪಕರು. ಪ್ರಸಕ್ತ ವಿದ್ಯಮಾನಗಳ ಕುರಿತಾಗಿ ನಿರಂತರ ಅಂಕಣಗಳ ಮೂಲಕ ಜನಪ್ರಿಯರಾಗಿದ್ದವರು.
ಸೋನಾಲ್ ಮಾನ್ಸಿಂಗ್
ಪ್ರಖ್ಯಾತ ಭರತನಾಟ್ಯ ಮತ್ತು ಒಡಿಸ್ಸಿ ನಾಟ್ಯಗಾರ್ತಿ. 6 ದಶಗಳ ಕಾಲ ನಾಟ್ಯ ಲೋಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನಾಟ್ಯ ವಿದ್ಯೆ ಧಾರೆ ಎರೆದಿದ್ದಾರೆ. ದೆಹಲಿಯವರಾದ ಸೋನಾಲ್ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಘುನಾಥ್ ಮಹಾಪಾತ್ರ
ಅಂತರಾಷ್ಟ್ರೀಯ ಮಟ್ಟದ ಶಿಲ್ಪಿ.1959 ರಿಂದ ಸುಮಾರು 2,000ಕ್ಕೂ ಹೆಚ್ಚು ಶಿಷ್ಯರನ್ನು ಸಿದ್ದ ಮಾಡಿದ್ದಾರೆ. ಐತಿಹಾಸಿಕ ಶಿಲ್ಪಗಳನ್ನು ಉಳಿಸಿ ಬೆಳಸುವಲ್ಲಿ ಜಾಗೃತಿ ಮೂಡಿಸಿದ ಮಹತ್ಕಾರ್ಯ ಮಾಡಿದವರು.